ದೊಡ್ಡಬಳ್ಳಾಪುರ: ಗಡಿಯಲ್ಲಿ ಅಮಾಯಕರ ಬಲಿದಾನದ ನಂತರ ಕೆಲವರಿಗೆ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಬಗ್ಗೆ ಜ್ಞಾನೋದಯವಾಗಿದೆ. ಆದರೆ, ನನ್ನ ಅಧಿಕಾರವಧಿಯಲ್ಲಿ ಈ ಬಗ್ಗೆ ಗಂಭೀರವಾಗಿ ಯೋಚಿಸಲಾಗಿತ್ತು. ಚೀನಾ ವಸ್ತುಗಳನ್ನು ಬಹಿಷ್ಕರಿಸುವುದು ಘೋಷವಾಕ್ಯದಷ್ಟು ಸುಲಭವಲ್ಲ. ಅದಕ್ಕೆ ರಚನಾತ್ಮಕ ಯೋಜನೆಗಳು ಬೇಕು. ಮೈತ್ರಿ ಸರ್ಕಾರದ ಯೋಜನೆಗಳು ಅದಕ್ಕೆ ಮಾದರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಭಾರತ – ಚೀನಾ ಗಡಿಯಲ್ಲಿನ ಪರಿಸ್ಥಿತಿ ಕುರಿತು ಟ್ವಿಟ್ ಮಾಡಿರುವ ಅವರು.ಸ್ಥಳೀಯರಿಗೆ ಉದ್ಯೋಗ ಒದಗಿಸುವುದು, ಚೀನಾಕ್ಕೆ ಸಿಕ್ಕಿರುವ ಮಾರುಕಟ್ಟೆಯನ್ನು ಕಸಿದು ನಮ್ಮವರಿಗೆ ಕೊಡುವುದು, ಆ ಮೂಲಕ ಚೀನಾ ಉತ್ಪನ್ನಗಳನ್ನು ಯಶಸ್ವಿಯಾಗಿ ಹೊರ ಹಾಕುವುದು ನನ್ನ ಉದ್ದೇಶವಾಗಿತ್ತು. ಆದರೆ, ಮೈತ್ರಿ ಸರ್ಕಾರದ ಈ ಯೋಜನೆಯನ್ನು ಇಂದಿನ ಸರ್ಕಾರ ಏನು ಮಾಡಿದೆ? ಮುಂದುವರೆಸಿಕೊಂಡು ಹೋಗಿದೆಯೋ ಇಲ್ಲವೋ ತಿಳಿಯದು.
ಚೀನಾ ಉತ್ಪನ್ನ ಬಹಿಷ್ಕರಿಸಿ ಎಂಬುದು ದೇಶದ ಆಶೋತ್ತರಗಳಲ್ಲಿ ಒಂದು. ಈ ಕೂಗು ಇತ್ತೀಚೆಗೆ ಹೆಚ್ಚು ಬಲಗೊಳ್ಳುತ್ತಿದೆ. ದೇಶದ ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಚೀನಾ ಉತ್ಪನ್ನಗಳಿಗೆ ನಮ್ಮ ಉತ್ಪನ್ನಗಳ ಮೂಲಕ ಸಡ್ಡು ಹೊಡೆಯಬೇಕೆಂಬ ಪರಿಕಲ್ಪನೆಯಡಿ 2018ರಲ್ಲಿ ‘Compete With China’ ಎಂಬ ಯೋಜನೆಯನ್ನು ನಾನು ಸಿಎಂ ಆದಾಗ ರೂಪಿಸಲಾಗಿತ್ತು ಎಂದವರು ಟ್ವಿಟ್ ಮಾಡಿದ್ದಾರೆ.