ಬಾಗಲಕೋಟೆ : ಮಲಪ್ರಭ ನದಿ ಪಾತ್ರದಲ್ಲಿ ಆದ ಒತ್ತುವರಿಯಿಂದ ಪದೇ ಪದೇ ಪ್ರವಾಹ ಉಂಟಾಗುತ್ತಿದ್ದು, ನದಿಯ ಮೂಲ ಸ್ವರೂಪ ಕಾಯ್ದುಕೊಳ್ಳಲು ಒತ್ತುವರಿ ತೆರವಿಗೆ ಸರಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಆಲಮಟ್ಟಿ ಕೃಷ್ಣೆಯ ಜಲದಿಗೆ ಬಾಗಿನ ಅರ್ಪಿಸಿ ನಂತರ ಅತಿವೃಷ್ಠಿಗೆ ಸಂಬಂಧಿಸಿದಂತೆ ಕೆ.ಜಿ.ಎನ್.ಎಲ್ ಸಭಾಭವನದಲ್ಲಿ ನಡೆದ ವಿಜಯಪುರ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ಸಚಿವರು, ಶಾಸಕರು, ಸಂಸತ್ ಸದಸ್ಯರು ಹಾಗೂ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಮಲಪ್ರಭ ನದಿಯ ಮೂಲ ಸ್ವರೂಪ 135 ಮೀಟೆರ್ ಇದ್ದು, ಈಗ 10 ಮೀಟರ್ ನಷ್ಟಾಗಿದೆ. ಇದರಿಂದ ಕೇವಲ 2 ಸಾವಿರ ಕ್ಯೂಸೆಕ್ಸ್ ನೀರು ಮಾತ್ರ ಹರಿದು ಹೋಗುತ್ತಿರುವದರಿಂದ ಪ್ರವಾಣ ಉಂಟಾಗುತ್ತಿದೆ. ಮೂಲ ಸ್ವರೂಪದಲ್ಲಿ ತೆರವಿಗೆ ಕ್ರಮಕೈಗೊಳ್ಳಲು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಾಗ ಅಭಯ ವ್ಯಕ್ತಪಡಿಸಿದರು.
ಬೆಳಗಾವಿ ವಿಭಾಗದ ಪ್ರಾದೇಶಿ ಆಯುಕ್ತರ ಅಧ್ಯಕ್ಷತೆಯಲ್ಲಿ ಮಲಪ್ರಭಾ ನದಿ ಪಾತ್ರದಲ್ಲಿ ಆದ ಒತ್ತುವರಿ ತೆರವಿಗೆ ಸಮಿತಿ ರಚಿಸಬೇಕು. ಈ ಕಾರ್ಯದಲ್ಲಿ ಕಂದಾಯ, ಪಂಚಾಯತ ರಾಜ್ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಜವಾಬ್ದಾರಿ ನೀಡಬೇಕು. ಈ ಕಾರ್ಯ ತುರ್ತಾಗಿ ನಡೆದಲ್ಲಿ 10-15 ವರ್ಷಗಳ ಕಾಲ ಪ್ರವಾಹದಿಂದ ಮುಕ್ತವಾಗಬಹುದಾಗಿದೆ ಎಂದು ಗೋವಿಂದ ಕಾರಜೋಳ ತಿಳಿಸಿದಾಗ ಇದಕ್ಕೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಸಮ್ಮತಿಸಿದರು.
ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೊಳಗಾದ ವಿವರವನ್ನು ವಿವಿಧ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಬಾಗಲಕೋಟೆ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಪ್ರವಾಹ ಹಾಗೂ ಅತಿವೃಷ್ಠಿಯಿಂದ ಕೃಷಿ, ತೋಟಗಾರಿಕೆ, ರೇಷ್ಮೆ ಸೇರಿ ಒಟ್ಟು 34869.40 ಹೆಕ್ಟೇರ್ನಷ್ಟು ಬೆಳೆ ನಾಶವಾಗಿದೆ. ಕೈಮಗ್ಗ ಸಲಕರಣೆಗಳು ಅಂದಾಜು 1.19 ಲಕ್ಷ, 439 ಮನೆಗಳು, 999.63 ಕಿ.ಮೀ ಗ್ರಾಮೀಣ ರಸ್ತೆ, 32 ಗ್ರಾಮೀಣ ಸೇತುವೆ, ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ 94 ಕಿ.ಮೀ ರಾಜ್ಯ ಹೆದ್ದಾರಿ, 308 ಕಿ.ಮೀ ಹಾಗೂ 54 ಸೇತುಗೆಗಳು ಹಾನಿಗೊಳಗಾಗಿದೆ. ಒಟ್ಟಾರೆಯಾಗಿ ಅಂದಾಜು 850 ಕೋಟಿ ರೂ.ಗಳಷ್ಟು ಹಾನಿ ಸಂಭವಿಸಿದೆ ಎಂದು ಕಾರಜೋಳ ತಿಳಿಸಿದರು.
ತುರ್ತಾಗಿ ರೈರತರಿಗೆ ಬೆಳೆ ಹಾನಿ ಪರಿಹಾರ, ಮೂಲಭೂತ ಸೌಕರ್ಯಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಮನೆ ಹಾನಿಗೆ 25 ಕೋಟಿ ರೂ.ಗಳನ್ನು ಬಿಡುಗಡೆಗೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು. ಕಳೆದ ವರ್ಷದಲ್ಲಿ ಸಂಭವಿಸಿದ ಮನೆ ಹಾನಿಗೆ ನೀಡುವ ತಾರತಮ್ಯವನ್ನು ಸರಿಪಡಿಸುವಂತೆ ಜಮಖಂಡಿ ಶಾಸಕ ಆನಂದ ನ್ಯಾಮಗೌಡರ ತಿಳಿಸಿದರು. ಪರಿಹಾರದಿಂದ ಕೆಲವು ಫಲಾನುಭವಿಗಳು ವಂಚಿತರಾಗಿದ್ದು, ಅವರುಗಳ ಪುನಃ ಸರ್ವೆ ಮಾಡಿ ಪರಿಹಾರ ನೀಡವ ಕ್ರಮವಾಗಬೇಕು ಎಂದು ತೇರದಾಳ ಶಾಸಕ ಸಿದ್ದು ಸವದಿ ತಿಳಿಸಿದರು.
ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಶಾಸಕರಾದ ವೀರಣ್ಣ ಚರಂತಿಮಠ, ಮುರುಗೇಶ ನಿರಾಣಿ ಸೇರಿದಂತೆ ಇತರೆ ಜನಪ್ರತಿನಿಧಿಗಳು, ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಹಾಗೂ ವಿಜಯಪುರ, ಗದಗ ಜಿಲ್ಲಾಧಿಕಾರಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಆಲಮಟ್ಟಿ ಜಲಾಶಯ 524.526 ಎತ್ತರಿಸಲು ಕ್ರಮ
ಉತ್ತರ ಕರ್ನಾಟಕದ ಮಹತ್ವದ ವಿಷಯವಾದ ಆಲಮಟ್ಟಿ ಜಲಾಶಯವನ್ನು 254.256 ಮೀಟರ್ ಎತ್ತರಿಸಲು ಕ್ರಮಕೈಗೊಂಡು ಈ ಭಾಗದ ಜನರಿಗೆ ನೀರಿನ ಬಳಕೆಗೆ ಅನುಕೂಲ ಮಾಡಿಕೊಡಲಾಗುವುದೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ವ್ಯಕ್ತಪಡಿಸಿದರು.
ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಿಂದ ಕಲಬುರ್ಗಿ, ಯಾದಗಿರಿ, ವಿಜಯಪುರ, ರಾಯಚೂರು ಹಾಗೂ ಬಾಗಲಕೋಟೆ ಜಿಲ್ಲೆಗಳ 6.22 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಕೃಷ್ಣಾ ಮೇಲ್ದಂಡ ಯೋಜನೆ ಇದಾಗಿದ್ದು, ಈ ಜಲಾಶಯದ ಹಿನ್ನೀರಿನಿಂದ ಬರುವ ಏತ ನೀರಾವರಿ ಯೋಜನೆಯಡಿ ನಿರಾವರಿ ಮತ್ತು ಕೆರ ತುಂಬಿಸುವ ಯೋಜನೆ 900 ಕ್ಯೂಸೆಕ್ಸ್ ನೀರು ಬಳಸಬೇಕಾಗುತ್ತದೆ. ಕೃಷ್ಣಾ ನ್ಯಾಯಾಧಿಕರಣ ತೀರ್ಪಿನಿ ಅನ್ವಯ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದಿಂದ ಒಟ್ಟು 130 ಟಿ.ಎಂಸಿ ನೀರು ಹಂಚಿಕೆಗೆ ಆಲಮಟ್ಟಿ ಜಲಾಶಯದ ನೀರಿನ ಗರಿಷ್ಠ ಮಟ್ಟ ಹೆಚ್ಚಿಸುವ ಅಗತ್ಯವಿದೆ. ಇದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಸಿಎಂ ಯಡಿಯೂರಪ್ಪ ತಿಳಿಸಿದರು.