ಯಲಹಂಕ: ಸಾವಿರಾರು ಸಂಖ್ಯೆಯ ಭಕ್ತರ ಆಗಮನದೊಂದಿಗೆ ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸಲ್ಪಡುತ್ತಿದ್ದ ತಾಲ್ಲೂಕಿನ ಚಲ್ಲಹಳ್ಳಿಯ ವೇಣು ಗೋಪಾಲಸ್ವಾಮಿ ಗುಟ್ಟೆ ಜಾತ್ರೆ, ಈ ವರ್ಷ ಕೋವಿಡ್-19 ಹಿನ್ನಲೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕ ಪೂಜೆಗೆ ಸೀಮಿತವಾಗಿ ಆಚರಿಸಲಾಯಿತು.
ಬೆಂಗಳೂರು ನಗರದ ಉತ್ತರ ಭಾಗದಲ್ಲಿ ಸಂತಾನ ಗೋಪಾಲಸ್ವಾಮಿ ಗುಟ್ಟೆ ಜಾತ್ರೆ ಎಂದೇ ಪ್ರಸಿದ್ದಿ ಪಡೆದ ಜಾತ್ರಾ ಮಹೋತ್ಸವವನ್ನು ಈ ಭಾರಿ ಮಹಾಮಾರಿ ಕರೊನಾ ವೈರಸ್ ಹರಡುವಿಕೆ ತಡೆಗಟ್ಟುವ ಹಿನ್ನಲೆಯಲ್ಲಿ, ತಾಲ್ಲೂಕು ಆಡಳಿತ ದೇವಾಲಯದ ಬಳಿ ಭಕ್ತರ ಆಗಮನವನ್ನು ನಿಷೇಧ ಹೇರಿದ್ದರಿಂದ, ನೂರಾರು ಭಕ್ತರು ತಮ್ಮ ಗ್ರಾಮದ ಮನೆಗಳಲ್ಲಿಯೇ ಆರತಿ ಬೆಳಗಿ ದೇವಾಲಯದತ್ತ ಕೈ ಮುಗಿದು ಪ್ರಾರ್ಥಿಸಿದರು.
ಸ್ರಾಂಪ್ರದಾಯಿಕ ಪೂಜೆ: ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಆಚರಿಸುತ್ತಿದ್ದ ಆಚರಣೆಯಂತೆ ಸುತ್ತಮುತ್ತಲಿನ 8 ಗ್ರಾಮಗಳಲ್ಲಿ ಸಡಗರ ಸಂಭ್ರಮವಿರಲಿಲ್ಲ. ಜಾತ್ರೆಗೆ ತಮಟೆ ವಾದ್ಯಗಳ ಸದ್ದಿರಲಿಲ್ಲ, ಪಾನಕ, ಕೋಸಂಬರಿ, ಮಜ್ಜಿಗೆ ಹೊತ್ತು ಸಿಂಗಾರಗೊಂಡ ಎತ್ತು, ಬಂಡಿಗಳು ಬೆಟ್ಟದ ಮೇಲಿಲ್ಲದೆ ಬೆಂಗಳೂರು ನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಭಕ್ತರು, ಹೆಣ್ಣುಮಕ್ಕಳು, ಹರಕೆ ಹೊತ್ತಿರುವವರು ಬಾರದೆ ಜಾತ್ರೆ ಸಂಪೂರ್ಣ ಕಳೆಗುಂದಿತ್ತು.
ಭಕ್ತರು ಬೆಟ್ಟದ ದೇವಸ್ಥಾನಕ್ಕೆ ಒಬ್ಬೊಬ್ಬರೇ ತೆರಳಿ ಪೂಜೆ ಸಲ್ಲಿಸುವ ಮೂಲಕ ಸಂಪ್ರದಾಯದಂತೆ ಆಚರಣೆ ಮಾಡಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..