ದೊಡ್ಡಬಳ್ಳಾಪುರ: ಬೃಹತ್ ಪ್ರಮಾಣದ ವಿದ್ಯುತ್ ಲೈನ್ ಹಾದುಹೋಗುವ ಮಾರ್ಗದ ರೈತರ ಭೂಮಿಗೆ ಸೂಕ್ತ ಪರಿಹಾರ ನೀಡುವಂತೆ ಹಾಗೂ ರೈತರಿಗೆ ಯೋಜನೆಯ ಬಗ್ಗೆ ಸೂಕ್ತ ಮಾಹಿತಿ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನೂರಾರು ರೈತರು ತಾಲೂಕು ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ನಗರದ ಪ್ರವಾಸಿ ಮಂದಿರ ವೃತ್ತದಿಂದ ಟ್ರ್ಯಾಕ್ಟರ್ ಹಾಗೂ ಬೈಕ್ ರ್ಯಾಲಿ ಮೆರವಣಿಗೆ ಮೂಲಕ ತಾಲೂಕು ಕಚೇರಿಯವರೆಗೆ ಆಗಮಿಸಿದ ನೂರಾರು ರೈತರು ತಾಲೂಕು ಕಚೇರಿಯಲ್ಲಿ ಪ್ರತಿಭಟನೆ ಆರಂಭಿಸಿದರು. ಉನ್ನತ ಅಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆಗೆ ಪರಿಹಾರ ಸೂಚಿಸದ ಹೊರತು ನಿರ್ಗಮಿಸುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ, ಜಿಲ್ಲಾ ಕಾರ್ಯದರ್ಶಿ ಜಿಂಕೆಬಚ್ಚಹಳ್ಳಿ ಸತೀಶ್, ಗೌರಿಬಿದನೂರಿನಿಂದ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶಕ್ಕೆ ಹಾಗೂ ತೊಂಡೆ ಬಾವಿಯಿಂದ ದೊಡ್ಡಬಳ್ಳಾಪುರಕ್ಕೆ ಸಂಪರ್ಕಿಸಲು ಬೃಹತ್ ಪ್ರಮಾಣದ ವಿದ್ಯುತ್ ಲೈನ್ ಮೂಲಕ ವಿದ್ಯುತ್ ಕಾರಿಡಾರ್ಗಳನ್ನು ನಿರ್ಮಿಸಲಾಗುತ್ತಿದೆ. ಈ ಬಗ್ಗೆ ರೈತರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ದೊಡ್ಡಬಳ್ಳಾಪುರ ತಾಲೂಕಿನ ತಳಗವಾರ, ಕೋಳೂರು, ಕಂಟನಕುಂಟೆ, ಅರಳುಮಲ್ಲಿಗೆ, ಅಣಗಲಪುರ ಮುಂತಾದ ಸುಮಾರು 20 ಗ್ರಾಮಗಳ ಮೂಲಕ ಹಾದು ಹೋಗಿದ್ದ ಅಲ್ಪ ಪ್ರಮಾಣದ ವಿದ್ಯುತ್ ಲೈನ್ಗೆ ಬದಲಾಗಿ ಬೃಹತ್ ಕಂಬಗಳು ಹಾಗೂ ಬಹು ಮಾರ್ಗದ ಲೈನ್ ಅಳವಡಿಸಲು ವಿದ್ಯುತ್ ಇಲಾಖೆ ಮುಂದಾಗಿದೆ. ಹಲವಾರು ಕಾರಣಗಳಿಂದಾಗಿ ರೈತರಿಗೆ ಈಗ ಉಳಿದಿರುವುದೇ ತುಂಡು ಭೂಮಿ. ಅಲ್ಪಸ್ವಲ್ಪ ಕೃಷಿ ಭೂಮಿಯಲ್ಲಿ ಬೃಹತ್ ಗಾತ್ರದ ವಿದ್ಯುತ್ ಕಂಬಗಳನ್ನು ಅಳವಡಿಸಿದರೆ ಕೃಷಿ ಮಾಡಲು ಸಾಧ್ಯವೇ ಇಲ್ಲದಾಗಲಿದೆ. ಈ ಕಾಮಗಾರಿ ಕೆಪಿಟಿಸಿಎಲ್ ಮಾಡುತ್ತಿದೆಯೋ, ಗ್ರೀಡ್ ಮಾಡುತ್ತಿದೆಯೋ ಮಾಹಿತಿಯೇ ಇಲ್ಲವಾಗಿದೆ. ರೈತರಿಗೆ ಯಾವುದೇ ಮಾಹಿತಿ ನೀಡದೆ ಕಂಬಗಳನ್ನು ಅಳವಡಿಸಲು ಗುಂಡಿಗಳನ್ನು ತೋಡಲು ಮುಂದಾಗಿರುವುದು ಖಂಡನಿಯ. ಭೂಮಿ ಕಳೆದುಕೊಳ್ಳುವ ರೈತರಿಗೆ ನಿಯಮದ ಪ್ರಕಾರ ಸೂಕ್ತ ಪರಿಹಾರ ನೀಡದೆ ಹಾಗೂ ರೈತರ ಅನುಮತಿ ಇಲ್ಲದೆ ಜಮೀನಿಗೆ ಪ್ರವೇಶಿಸಿ ಗುರುತು ಮಾಡುತ್ತಿರುವುದು ಖಂಡನೀಯ. ಕಂದಾಯ ಇಲಾಖೆ ಅಕಾರಿಗಳು ಭೂಮಿ ಸರ್ವೆ ನಡೆಸಿ ಪರಿಹಾರ ನಿಗದಿ ಮಾಡಬೇಕಿದೆ, ಇದನ್ನು ಹೊರತು ಪಡಿಸಿ ಬಲವಂತದಿಂದ ಕಾಮಗಾರಿ ನಡೆಸಲು ಮುಂದಾದರೆ ಮುಂದಾಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಹನುಮೇಗೌಡ, ಪ್ರಧಾನ ಕಾರ್ಯದರ್ಶಿ ಬಚ್ಚಹಳ್ಳಿ ಸತೀಶ್ ಮಾತನಾಡಿ, ಗೌರಿಬಿದನೂರಿನಿಂದ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶ ಮತ್ತು ತೊಂಡೆಬಾವಿಯಿಂದ ದೊಡ್ಡಬಳ್ಳಾಪುರಕ್ಕೆ 220 ರಿಂದ 400ಕೆವಿ ವಿದ್ಯುತ್ ಕಾರಿಡಾರ್ ಮಾರ್ಗಗಳನ್ನು ಮಾಡಲಾಗುತ್ತಿದೆ. ಇದರ ಕುರಿತು ರೈತರಿಗೆ ಮಾಹಿತಿಯೇ ನೀಡದೆ, ಜಮೀನುಗಳಿಗೆ ಅತಿಕ್ರಮ ಪ್ರವೇಶಮಾಡಿ ಗುರುತು ಮಾಡುತ್ತಿದ್ದಾರೆ.
ಈ ಮುಂಚೆ ಅಳವಡಿಸಿದ ಕಂಬಗಳಿಂದ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಿಲ್ಲ. ನಿಯಮಗಳ ಅನ್ವಯ ಪರಿಹಾರ ನೀಡದೆ ಕಂಬಗಳ ಅಳವಡಿಕೆಗೆ ಮುಂದಾಗಿರುವುದು ಸರಿಯಲ್ಲ, ಕಂಬಗಳನ್ನು ಹಾಕುವ ಜಾಗದಲ್ಲಿ ತೆಂಗು, ಅಡಿಕೆ ಮೊದಲಾದ ಬೆಳೆ ಬೆಳೆಯಲು ಆಗುವುದಿಲ್ಲ. ಕೊಳವೆ ಬಾವಿ ಸಹ ಕೊರೆಸಲು ಆಗುವುದಿಲ್ಲ. ಇದಲ್ಲದೇ ವಿದ್ಯುತ್ ಶಾಖ್ಗಳು ಆಗುವ ಸಂಭವಗಳು ಇವೆ. ರೈತರ ಪರ ಎನ್ನುವ ಸರ್ಕಾರಗಳು ರೈತರ ಸಂಕಷ್ಟ ಅರ್ಥಮಾಡಿಕೊಳ್ಳುತ್ತಿಲ್ಲ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಅಭಿಯಂತರ ದತ್ತಾತ್ರೇಯ ಪಾಟೀಲ್ ಪ್ರತಿಕ್ರಿಯಿಸಿ, ರೈತರ ಮನವಿಯನ್ನು ಮೇಲಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ವಹಿಸಲಾಗುವುದು. ಅಲ್ಲಿಯವರೆಗೆ ಯಾವುದೇ ಕಾಮಗಾರಿ ಮಾಡುವುದಿಲ್ಲ ಎಂದು ಭರವಸೆ ನೀಡಿದರು.
ತಹಸೀಲ್ದಾರ್ ಟಿ.ಎಸ್.ಶಿವರಾಜ್ ಮಾತನಾಡಿ, ಕೆಪಿಟಿಸಿಎಲ್ ಅಧಿಕಾರಿಗಳು ಸಧ್ಯಕ್ಕೆ ಯಾವುದೇ ಕಾಮಗಾರಿ ಕೈಗೊಳ್ಳುವುದಿಲ್ಲ ಎನ್ನುವ ಭರವಸೆ ನೀಡಿದ್ದಾರೆ. ರೈತರಿಗೆ ಪರಿಹಾರ ನೀಡುವ ಕುರಿತು ಜಿಲ್ಲಾಧಿಕಾರಿಗಳು ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ರೈತರ ಮುಖಂಡರಾದ ಸುಲೋಚನಮ್ಮ ಹರೀಶ್,ಉಮಾದೇವಿ, ಸತೀಶ್, ಮುನಿ ನಾರಾಯಣಪ್ಪ, ನಾರಾಯಣಸ್ವಾಮಿ, ಮಾದೇವ, ಶಿರವಾರ ರವಿ, ಶಾಂತಣ್ಣ ಸೇರಿದಂತೆ ವಿದ್ಯುತ್ ಲೈನ್ ಹಾದು ಹೋಗುವ ಗ್ರಾಮಗಳ ರೈತರು ಭಾಗವಹಿಸಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…