ದೊಡ್ಡಬಳ್ಳಾಪುರ: ಸಮಸ್ಯೆಗಳು ಬಂದಾಗ ಬಗೆಹರಿಸಿಕೊಳ್ಳುವುದಕ್ಕಿಂತ ಅವು ಬರದಂತೆ ತಡೆಯುವುದು ಮುಖ್ಯವಾಗಿದೆ. ಕಾನೂನಿನ ಅರಿವಿಲ್ಲ ಎಂದ ಮಾತ್ರಕ್ಕೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕಾನೂನಿನ ಬಗ್ಗೆ ಸಾಮಾನ್ಯ ಜ್ಞಾನ ಎಲ್ಲರಿಗೂ ಇರಬೇಕಿದ್ದು, ಕಟ್ಟಕಡೆಯ ಸಾಮಾನ್ಯ ವ್ಯಕ್ತಿಗೂ ಕಾನೂನಿನ ಅರಿವು ಮೂಡಿಸಿ, ಸೇವೆ ನೀಡುವಲ್ಲಿ ಕಾನೂನು ಸೇವೆಗಳ ಪ್ರಾಕಾರ ಕಾರ್ಯೋನ್ಮುಖವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ತ್ಯಾಗರಾಜ್ ಎನ್.ಇನವಳ್ಳಿ ತಿಳಿಸಿದರು.
ನಗರದ ಬಾಬು ಜಗಜೀವನ ರಾಮ್ ಸಭಾ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘ ಹಾಗೂ ತಾಲೂಕು ಆಡಳಿತದ ಸಹಯೋಗದಲ್ಲಿ ಬೃಹತ್ ಕಾನೂನು ಕಾರ್ಯಾಗಾರ ಮತ್ತು ಕಾನೂನು ಪುಸ್ತಕಗಳ ಪ್ರದರ್ಶನ -2021 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಹಕ್ಕೆ ಕಾಯಿಲೆ ಬಂದರೆ ವೈದ್ಯರನ್ನು ಕಾಣುವಂತೆ, ನಮ್ಮ ಬದುಕಿನ ಸಮಸ್ಯೆಗಳಿಗೆ ನಾವು ವಕೀಲರ ಬಳಿ ಹೋಗುತ್ತೇವೆ. ಆದರೆ ಯಾರೇ ವಕೀಲರು ಸಮಾಜಕ್ಕೆ ಕೇಡಾಗಲೆಂದು ಬಯಸುವುದಿಲ್ಲ. ನಿತ್ಯ ಜೀವನದಲ್ಲಿ ಕಾನೂನನ್ನು ಪಾಲಿಸಿದರೆ ನೆಮ್ಮದಿ ಕಾಣಬಹುದು. ಪ್ರತಿಯೊಬ್ಬರಿಗೂ ಕಾನೂನಿನ ನೆರವು ಪಡೆಯಲು ತೊಂದರೆಪಡಬಾರದು. 1980ರಲ್ಲಿ ಮೊದಲ ಬಾರಿಗೆ ಕಾನೂನು ನೆರವು ಮಂಡಲಿ ರಚನೆಯಾಗಿ 1987 ರಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಜಾರಿಗೆ ಬಂದ ನಂತರ ಜನರಲ್ಲಿ ಕಾನೂನಿನ ಅರಿವು ಹೆಚ್ಚಾಗಿದೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಜಾತಿ-ಧರ್ಮರಹಿತವಾಗಿ ಕಾನೂನಿನ ನೆರವು ಸಿಗುತ್ತದೆ. ಸರ್ಕಾರವೇ ಸ್ವಂತ ಖರ್ಚಿನಲ್ಲಿ ಕಾನೂನು ನೆರವು ನೀಡುತ್ತಿದೆ. ಇದಕ್ಕಾಗಿ ಸರ್ವೋಚ್ಚ ನ್ಯಾಯಾಲಯ ಸಮಿತಿಗಳನ್ನು ರಚಿಸಲು ಸೂಚಿಸಿದೆ. ಈ ಸಮಿತಿ 1995ರ ನಂತರ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ. ನ್ಯಾಯಾಲಯಗಳಲ್ಲಿನ ಹಲವಾರು ಸಿವಿಲ್ ಪ್ರಕರಣಗಳು, ವ್ಯಾಜ್ಯಗಳ ಸಮಸ್ಯೆಗಳಿಗೆ ಸಂಬಂಧಪಟ್ಟ ಇಲಾಖೆಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಕಾನೂನು ಸೇವಾ ಸಮಿತಿ ಜನರಿಗೆ ಕಾನೂನಿನ ಬಗ್ಗೆ ಅರಿವು, ಆರ್ಥಿಕವಾಗಿ, ಸಾಮಾಜಿಕವಾಗಿ ದುರ್ಬಲರಾದವರಿಗೆ ಕಾನೂನು ನೆರವು ಹಾಗೂ ಲೋಕ ಅದಾಲತ್ಗಳನ್ನು ನಡೆಸುವ ಮೂಲಕ ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಪಡಿಸುವ ಕಾರ್ಯಗಳನ್ನು ಮಾಡುತ್ತಿದೆ. ಮುಖ್ಯವಾಗಿ ರಾಜಿ ಸಂಧಾನಗಳಿಂದ ಹಲವಾರು ಪ್ರಕರಣಗಳು ಇತ್ಯರ್ಥವಾಗಿವೆ ಎಂದ ಅವರು ಗಾಂಧೀಜಿ ಅವರು ವಕೀಲರಾಗಿದ್ದಾಗ ನಡೆಸಿದ ರಾಜಿ ಸಂಧಾನದ ನಿದರ್ಶನ ನೀಡಿದರು. ಆದರೆ ಈ ಸೇವೆಗಳ ಬಗ್ಗೆ ಜನಸಾಮಾನ್ಯರಿಗೆ ಅರಿವಿಲ್ಲದ ಕಾರಣ ವೃಥಾ ತೊಂದರೆಗೆ ಸಿಲುಕುತ್ತಾರೆ. ಕಾನೂನಿನ ಸಾಮಾನ್ಯ ಜ್ಞಾನ ಎಲ್ಲರಲ್ಲಿಯೂ ಮೂಡಿದರೆ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಲಿದೆ ಎಂದರು.
ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎ.ಹರೀಶ್ ಮಾತನಾಡಿ, ಈ ದೇಶದ ಕಾನೂನುಗಳನ್ನು ನಾವು ಪರಿಪಾಲನೆ ಮಾಡಲೇಬೇಕು. ಇಲ್ಲದಿದ್ದರೆ ನಮ್ಮ ಹಕ್ಕುಗಳಿಂದ ವಂಚಿತರಾಗಬೇಕಾಗುತ್ತದೆ. ಕಾನೂನು ನಮ್ಮ ವಿರುದ್ಧವಾಗಿ ಅಲ್ಲ ನಮ್ಮ ರಕ್ಷಣೆಗಾಗಿಯೇ ಇವೆ. ದೇಶದ ಜನರಿಗೆ ಮೂಲಭೂತ ಹಕ್ಕುಗಳಿಗೆ ಚ್ಯುತಿಯಾಗದಂತೆ ಕಾನೂನಿನ ನೆರವು ನೀಡಲು ಕಾನೂನು ಸೇವೆಗಳ ಪ್ರಾಧಿಕಾರ ಸನ್ನದ್ದವಾಗಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂದೀಪ್ ಸಾಲಿಯಾನ್ ಮಾತನಾಡಿ, ಎಲ್ಲಾ ರಾಜ್ಯದ ಜಿಲ್ಲೆಗಳೂ ಆಯಾ ತಾಲೂಕುಗಳು ಜನಸಾಮಾನ್ಯರಿಗೆ ಉಚಿತ ಕಾನುನಿನ ಅರಿವು ನೆರವು ಕಾರ್ಯಕ್ರವನ್ನು ಹಮ್ಮಿಕೊಂಡು ಅರಿವು ಮೂಡಿಸಬೇಕೇಂದು ರಾಷ್ರ್ಟೀಯ ಕಾನೂನು ಪ್ರಾಧಿಕಾರದಿಂದ ನಿರ್ದೇಶನ ನೀಡಲಾಗಿದೆ. ಉಚ್ಚ ನ್ಯಾಯಾಲಯದ ಆದೇಶದಂತೆ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾನೂನು ಸೇವಾ ಸಮಿತಿಯಿಂದ ನ.2 ರಿಂದ ನ.17ರವರೆಗೆ ಕಾನೂನು ಅರಿವು ಕಾರ್ಯಾಗಾರಗಳನ್ನು ಗ್ರಾಮಾಂತರ ಮಟ್ಟದಲ್ಲಿಯೂ ನಡೆಸಲಾಗುತ್ತಿದೆ. ಉಚಿತ ಕಾನೂನು ನೆರವು ಅಥವಾ ಸಲಹೆ ಪಡೆಯಲು ಶುಲ್ಕರಹಿತ ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಮಾನಸಿಕ ಅಥವಾ ಬೇರಾವುದೋ ನ್ಯೂನ್ಯತೆಯನ್ನು ಹೊಂದಿರುವವರು, ಗಲಭೆಗಳಲ್ಲಿ ಸಂತ್ರಸ್ಥರಾದವರು, ಮೊದಲಾಗಿ ವಾರ್ಷಿಕ ಆದಾಯ ರೂ 3 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರುವ ಎಲ್ಲಾ ವರ್ಗದ, ಜಾತಿಯ ಜನರು ಅರ್ಹರಾಗಿರುತ್ತಾರೆ ಎಂದರು.
ಉಪವಿಭಾಗಾಕಾರಿ ಅರುಳ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಮೇಸ್ತ್ರಿ ಕಿಟ್, ಸುಕ್ಷತಾ ಕಿಟ್, ನೋಂದಣಿ ಪತ್ರಗಳನ್ನು ವಿತರಿಸಲಾಯಿತು.
ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಅರವಿಂದ ಸಾಯಿಬಣ್ಣ ಹಾಗರಗಿ, ಹಿರಿಯ ನ್ಯಾಯಾಧೀಶರಾದ ಜ್ಯೋತಿ ಎಸ್.ಕಾಳೆ, ಪ್ರಧಾನ ಸಿವಿಲ್ ನ್ಯಾಯಾದೀಶರಾದ ಕೆ.ಆರ್.ದೀಪ, ಅಪರ ಸಿವಿಲ್ ನ್ಯಾಯಾಧೀಶರಾದ ಮಮತಾ ಶಿವಪೂಜೆ, ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಎಂ ಬೈರೇಗೌಡ, ಕಾರ್ಯದರ್ಶಿ ಕೃಷ್ಣಮೂರ್ತಿ, ತಹಶೀಲ್ದಾರ್ ಟಿ.ಎಸ್.ಶಿವರಾಜ್, ಡಿವೈಎಸ್ಪಿ ನಾಗರಾಜು, ಬಿಇಓ ಆರ್.ವಿ.ಶುಭಮಂಗಳ, ಟಿಎಚ್ಓ ಡಾ.ಪರಮೇಶ್ವರ, ಸಿಡಿಪಿಓ ಅನಿತಾ ಲಕ್ಷ್ಮೀ, ಜಿಲ್ಲಾ ಕಾರ್ಮಿಕ ಅಧಿಕಾರಿ ಎಚ್.ಆರ್.ನಾಗೇಂದ್ರ, ತಾಲೂಕು ಕಾರ್ಮಿಕ ನಿರೀಕ್ಷಕ ಎಂ.ಪ್ರದೀಪ್ ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……