ದೊಡ್ಡಬಳ್ಳಾಪುರ: ತಾಲೂಕಿನ ಚಿಗರೇನಹಳ್ಳಿಯ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತ್ಯಾಜ್ಯ ನಿರ್ವಹಣೆ ಘಟಕವನ್ನು ನಿಲ್ಲಿಸುವಂತೆ ನವ ಬೆಂಗಳೂರು ಹೋರಾಟ ಸಮಿತಿ ಹಾಗೂ ಭಕ್ತರಹಳ್ಳಿ ಗ್ರಾಮ ಪಂಚಾಯತಿವತಿಯಿಂದ ನಡೆಸುತ್ತಿರುವ ಧರಣಿ ಇಂದಿಗೆ 6ದಿನಕ್ಕೆ ಕಾಲಿಟ್ಟಿದೆ.
ಆರಂಭಿಕ ದಿನಗಳಲ್ಲಿ ಸಿಕ್ಕ ಜನ ಬೆಂಬಲ ಹಾಗೂ ಅಧಿಕಾರಿಗಳ ಸ್ಪಂದನೆ ದಿನೇದಿನೇ ಕಡಿಮೆಯಾಗುತ್ತಿದ್ದು, ಪೊಲೀಸರ ಬಲ ಪ್ರಯೋಗದ ಸಾಧ್ಯತೆ ಕೇಳಿಬರುತ್ತಿದೆ.
ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಘಟಕ ಎಂಎಸ್ ಜಿಪಿಗೆ ಬರುತ್ತಿರುವ ತ್ಯಾಜ್ಯ ಹಾಗೂ ಅವೈಜ್ಞಾನಿ ಮತ್ತು ಅನುಮಾನಾಸ್ಪದ ನಿರ್ವಹಣೆ ಈ ವ್ಯಾಪ್ತಿಯಲ್ಲಿನ ಜನರನ್ನು ಬಹಳಷ್ಟು ಸಂಕಷ್ಟಕ್ಕೆ ದೂಡಿದೆ.
ಈ ಕುರಿತು ಘಟಕ ಮುಚ್ಚಿಸಲು ಹಲವು ಹೋರಾಟ, ಧರಣಿ ನಡೆದರು ಫಲಿತಾಂಶ ಮಾತ್ರ ಶೂನ್ಯ ಎಂಬುದು ತಾಲೂಕಿನ ಜನರಿಗೆ ತಿಳಿದಿರುವ ವಾಸ್ತವ.
ಈ ಮುಂಚೆ ಕಾರ್ಯನಿರ್ವಹಿಸುತ್ತಿದ್ದ ಟೆರ್ರಾಫಾರ್ಮ ತ್ಯಾಜ್ಯ ವಿಲೇವಾರಿ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಪದೇ ಪದೇ ಬೆಂಕಿ ಅವಘಡ ಎಂಬ ಕಾರಣದಿಂದ ಈ ವ್ಯಾಪ್ತಿಯ ಜನತೆ ಭರಿಸಲಾಗದ ಹೊಗೆಯಿಂದ ತೀವ್ರವಾಗಿ ಪರದಾಡಬೇಕಿತ್ತು. ಆದರೆ ಅದು ಮುಚ್ಚಿದ ನಂತರ ಎಂಎಸ್ ಜಿಪಿ ಘಟಕದಿಂದ ಹೊರಬರುತ್ತಿರುವ ಕಲುಷಿತ, ವಿಷಯುಕ್ತ ನೀರು ಮಾನವ ಕುಲಕ್ಕೆ ಕಂಟಕವಾಗಿದೆ ಎಂಬುದು ಈ ವ್ಯಾಪ್ತಿಯ ಜನರ ಆಕ್ರೋಶಕ್ಕೆ ಕಾರಣ.
ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಕಸ ಮಾಡದೆ ಟೆಂಡರ್ ಪಡೆದವರ ಏಕೈಕ ಉದ್ದೇಶ ಬೆಂಗಳೂರು ನಗರದಿಂದ ಕಸ ಹೊರ ಹೋಗಬೇಕು ಎನ್ನುವುದೇ ಹೊರತು ಕಸದ ರಾಶಿ ಹಾಕುವ ಪ್ರದೇಶದಲ್ಲಿನ ಜನರ ಆರೋಗ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲವೆಂಬುದು ಈ ಪ್ರದೇಶಕ್ಕೆ ಭೇಟಿ ನೀಡಿದವರ ಅನಿಸಿಕೆ.
ತಾಲೂಕಿಗೆ ಶಾಪವಾಗಿರುವ ಎಂಎಸ್ ಜಿಪಿ ಘಟಕವನ್ನು ಮುಚ್ಚುವಂತೆ ನವ ಬೆಂಗಳೂರು ಹೋರಾಟ ಸಮಿತಿ ಹಾಗೂ ಭಕ್ತರಹಳ್ಳಿ ಗ್ರಾಮ ಪಂಚಾಯತಿವತಿಯಿಂದ ಏಕಾಏಕಿ ಆರಂಭವಾದ ಅನಿರ್ದಿಷ್ಟಾವಧಿ ಧರಣಿಗೆ ಕಂಟಕ ಎದುರಾಗುವ ಸಾಧ್ಯತೆ ಎದುರಾಗಿದೆ.
ಊಹಿಸಿದಂತೆ ಸಮಸ್ಯೆಗೆ ಒಳಗಾಗುತ್ತಿರುವ ಜನರಿಂದ ದೊರಕದ ಬೆಂಬಲ, ಧರಣಿ ಆಯೋಜನೆ ಕುರಿತು ಇತರೆ ಗ್ರಾಮಪಂಚಾಯಿತಿ, ತಾಲೂಕಿನ ಸಂಘಟನೆಗಳು ನಡುವೆ ನಡೆಯದ ಸಭೆ, ವಿಧಾನ ಪರಿಷತ್ ಚುನಾವಣೆ ಸಂದರ್ಭ, ಧರಣಿ ಹತ್ತಿಕ್ಕಲು ಕಾಣದ ಕೈಗಳಗಳ ಕೈವಾಡ, ಆಯೋಜಕರ ವಿರುದ್ದದ ಅಸಮಾಧಾನ ಮುಂತಾದ ಕಾರಣಗಳು ಧರಣಿ ನಡೆಸುತ್ತಿರುವವರಿಗೆ ಸಮಸ್ಯೆ ಎದುರಾಗಬಹುದು ಎನ್ನಲಾಗುತ್ತಿದೆ.
ಬಿಬಿಎಂಪಿ ತ್ಯಾಜ್ಯ ನಿರ್ವಹಣೆಗೆ ಸರ್ಕಾರ ಒಪ್ಪಂದ ನೀಡಿದ್ದು, ಏಕಾಏಕಿ ಆರಂಭವಾದ ಧರಣಿಯನ್ನು ಹತ್ತಿಕ್ಕಲು ಹಲವು ಪ್ರಯತ್ನ ನಡೆಸಿದೆ. ಆದರೆ ಧರಣಿ ನಿರತರು ಸೊಪ್ಪುಹಾಕಿಲ್ಲ. ಆದರೆ ದಿನೇ ದಿನೇ ಕುಸಿಯುತ್ತಿರುವ ಜನ ಬೆಂಬಲ ಧರಣಿ ಹತ್ತಿಕ್ಕಲು ಕಾದುಕುಳಿತಿರುವ ಅಧಿಕಾರಿಗಳಿಗೆ ವರವಾಗುತ್ತಿದ್ದು ಧರಣಿ ನಿರತರನ್ನು ಬಂಧಿಸಿ. ತ್ಯಾಜ್ಯ ವಿಲೇವಾರಿಗೆ ಉಂಟಾಗಿರುವ ಅಡ್ಡಿಯನ್ನು ತೆರವು ಮಾಡಲು ಸಿದ್ದತೆ ನಡೆದಿದೆ ಎನ್ನಲಾಗುತ್ತಿದೆ.
ದೊಡ್ಡಬಳ್ಳಾಪುರ ತಾಲೂಕಿಗೆ ಶಾಪವಾಗಿರುವ ತ್ಯಾಜ್ಯ ಘಟಕವ ಬಂದ್ ಮಾಡಲು ತಾಲೂಕಿನ ಜನರ ಸಹಕಾರ ಅಗತ್ಯವಾಗಿದ್ದು, ತಾಲೂಕಿನ ಜನರ ಸಂಕಷ್ಟಕ್ಕೆ ಆಹ್ವಾನ ನೀಡಬೇಕಿಲ್ಲ ಎಂಬುದ ಅರಿತು ಪಕ್ಷಾತೀತವಾಗಿ ಹೋರಾಟದಲ್ಲಿ ಭಾಗವಹಿಸಿವಂತೆ ನವ ಬೆಂಗಳೂರು ಹೋರಾಟ ಸಮಿತಿಯ ಅಧ್ಯಕ್ಷ ಜಿ.ಎನ್.ಪ್ರದೀಪ್ ಮನವಿ ಮಾಡಿದ್ದಾರೆ.
ನ್ಯೂಸ್ ಡೆಸ್ಕ್ ಹರಿತಲೇಖನಿ
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….