ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಬೆಳೆ ಹಾನಿಗೊಳಗಾದ ರೈತರ ಬೆಳೆಗಳ ಹಾನಿ ವಿವರವನ್ನು 4 ಹಂತಗಳಲ್ಲಿ ಪರಿಹಾರ್ ಪೋರ್ಟಲ್ ನಲ್ಲಿ ನಮೂದಿಸಲಾಗಿದ್ದ ಹಿನ್ನೆಲೆಯಲ್ಲಿ ಡಿಸೆಂಬರ್ 4 ರವರೆಗೆ ಒಟ್ಟು 16,917 ರೈತ ಫಲಾನುಭವಿಗಳಿಗೆ ರೂ.8,07,92,442.5/- ಗಳ ಪರಿಹಾರ ಹಣ ಅವರ ಬ್ಯಾಂಕ್ ಖಾತೆಗೆ ಡಿಬಿಟಿ ಮುಖಾಂತರ ನೇರ ವರ್ಗಾವಣೆಯಾಗಿರುತ್ತದೆ ಇನ್ನುಳಿದವರಿಗೂ ಸಹ ಸದ್ಯದಲ್ಲೇ ಹಂತ ಹಂತವಾಗಿ ಪರಿಹಾರ ಹಣ ಸಂದಾಯವಾಗಲಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ.
ಡಿಸೆಂಬರ್ 7ಕ್ಕೆ ಪೂರ್ಣ: ಅವರು ಬೆಳೆಹಾನಿ ಪರಿಹಾರ ಜಿಲ್ಲೆಯ ರೈತ ಫಲಾನುಭವಿಗಳಿಗೆ ಸಂದಾಯವಾಗಿರುವ ಬಗ್ಗೆ ಮಾಧ್ಯಮಗಳಿಗೆ ವಿವರಗಳನ್ನು ಬಿಡುಗಡೆ ಮಾಡಿ ಮಾತನಾಡುತ್ತಾ, ಕಳೆದ ಅಕ್ಟೋಬರ್ ಮಾಹೆಯಿಂದ ಜಿಲ್ಲೆಯಲ್ಲಿ ವ್ಯಾಪಕ ಭಾರಿ ಮಳೆಯಾಗಿ ಬೆಳೆ ಹಾನಿಯಾಗಿದ್ದರ ಹಿನ್ನೆಲೆಯಲ್ಲಿ ಕೃಷಿ, ತೋಟಗಾರಿಕೆ, ಕಂದಾಯ ಹಾಗೂ ಇನ್ನಿತರ ಇಲಾಖೆಗಳ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ಜಂಟಿ ಸಮೀಕ್ಷೆ ನಡೆಸಿ ಪೂರ್ಣಗೊಳಿಸಿ ಬೆಳೆ ಹಾನಿ ವಿವರವನ್ನು ಸಂಗ್ರಹಿಸಿರುತ್ತಾರೆ. ಜಂಟಿ ಸಮೀಕ್ಷೆಯಿಂದ ಸ್ವಿಕೃತವಾದ ಬೆಳೆ ಹಾನಿಯಾದ ರೈತರ ವಿವರವನ್ನು ಹಾಗೂ ದತ್ತಾಂಶವನ್ನು ಪರಿಹಾರ ಪೋರ್ಟಲ್ ನಲ್ಲಿ ನಮೂದಿಸುವ ಹಾಗೂ ಪರಿಹಾರ ಸಂದಾಯಿಸುವ ಎರಡೂ ಪ್ರಕ್ರಿಯೆಗಳು ಜೊತೆ ಜೊತೆಯಲ್ಲಿಯೇ ನಿರಂತರವಾಗಿ ಶರವೇಗಲ್ಲಿ ಪ್ರಗತಿಯಲ್ಲಿವೆ. ಈ ಕಾರ್ಯದಲ್ಲಿ ಕೃಷಿ ಮತ್ತು ಕಂದಾಯ ಇಲಾಖೆಗಳು ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸರ್ಕಾರಿ ರಜಾ ದಿನಗಳನ್ನು ಲೆಕ್ಕಿಸದೆ ಸಮರೋಪಾದಿಯಲ್ಲಿ ತೊಡಗಿಕೊಂಡಿದ್ದಾರೆ.
ಪರಿಹಾರ ಪೋರ್ಟಲ್ ನಲ್ಲಿ ಈ ಮಾಹಿತಿ ಹಾಗೂ ದತ್ತಾಂಶ ನಮೂದು ಪ್ರಕ್ರಿಯೆಯು ಡಿಸೆಂಬರ್ 7ಕ್ಕೆ ಪೂರ್ಣಗೊಳ್ಳಲಿದೆ ಎಂದರು.
ಹೆಚ್ಚಿನ ಆತಂಕಕ್ಕೆ ಒಳಗಾಗಬೇಕಿಲ್ಲ: ಪರಿಹಾರ ಪೋರ್ಟಲ್ ನಲ್ಲಿ ಈಗಾಗಲೇ ನಮೂದಾಗಿರುವ ಬೆಳೆ ಹಾನಿಗೊಳಗಾದ ರೈತರ ಪೈಕಿ ಡಿಸೆಂಬರ್ 4 ರವರೆಗೆ ಒಟ್ಟು 16,917ರೈತ ಫಲಾನುಭವಿಗಳಿಗೆ ರೂ.8,07,92,442.5/- ಗಳ ಪರಿಹಾರ ಹಣವನ್ನು ಅವರ ಖಾತೆಗೆ ಪ್ರತ್ಯೇಕವಾಗಿ ನೇರ ವರ್ಗಾವಣೆ ಯಾಗಿದೆ ಜೊತೆಗೆ ಪ್ರತಿದಿನ ದತ್ತಾಂಶವನ್ನು ನಮೂದಿಸುವ ಹಾಗೂ ಪರಿಹಾರ ಸಂದಾಯಿಸುವ ಎರಡೂ ಪ್ರಕ್ರಿಯೆಗಳು ನಿರಂತರ ಚಾಲನೆಯಲ್ಲಿವೆ. ಪರಿಹಾರ ಸಂದಾಯವಾಗಿಲ್ಲದ ರೈತರು ಹೆಚ್ಚಿನ ಆತಂಕಕ್ಕೆ ಒಳಗಾಗಬೇಕಿಲ್ಲ. ಬೆಳೆ ಹಾನಿಗೊಳಗಾದ ಜಿಲ್ಲೆಯ ಎಲ್ಲಾ ರೈತರಿಗೆ ಈ ತಿಂಗಳ ಅಂತ್ಯದೊಳಗೆ ಪರಿಹಾರ ಹಣವು ತಮ್ಮ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮಖಾಂತರ ತ್ವರಿತವಾಗಿ ನೇರ ವರ್ಗಾವಣೆಯಾಗಲಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….