ಬೆಂ.ಗ್ರಾ.ಜಿಲ್ಲೆ: ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳು ಸಂಭವಿಸಿದಾಗ ಉಂಟಾಗುವ ಹಾನಿ, ಸಾವು-ನೋವುಗಳನ್ನು ತಡೆಯಲು ಸಂಬಂಧಿಸಿದ ಎಲ್ಲಾ ಇಲಾಖೆಗಳು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತುರ್ತು ಕ್ರಮಗಳನ್ನು ಕೈಗೊಂಡು ಪರಿಸ್ಥಿತಿ ನಿಭಾಯಿಸಲು ಸದಾ ಸನ್ನದ್ಧರಾಗಿರಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಶ್ರೀನಿವಾಸ್ ಅವರು ತಿಳಿಸಿದರು.
ರಾಸಾಯನಿಕ ವಿಪತ್ತು ನಿವಾರಣಾ ದಿನಾಚರಣೆಯ ಅಂಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕಾರ್ಖಾನೆಗಳು, ಬಾಯ್ಲರ್ಗಳು, ಕೈಗಾರಿಕಾ ಸುರಕ್ಷ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಹಾಗೂ ತೈಲ ಮಾರುಕಟ್ಟೆ ಕಂಪನಿಗಳ ಸಹಯೋಗದೊಂದಿಗೆ ಹೊಸಕೋಟೆ ತಾಲ್ಲೂಕಿನ ದೇವನಗೊಂದಿ ಗ್ರಾಮದ ಬಳಿಯಿರುವ ಐಓಸಿಎಲ್ನ ಪೆಟ್ರೋಲಿಯಂ ಮತ್ತು ಎಲ್ಪಿಜಿ ಸಂಗ್ರಹಣಾ ಘಟಕದಲ್ಲಿ ನಡೆದ ವಿಪತ್ತು ನಿರ್ವಹಣೆ ಕುರಿತ ಅಣುಕು ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ರಾಸಾಯನಿಕ ಅನಿಲಗಳ ಸೋರಿಕೆ, ಅಗ್ನಿ ಅವಘಡ ಸೇರಿದಂತೆ ಯಾವುದೇ ರೀತಿಯ ತುರ್ತು ಪರಿಸ್ಥಿತಿಯ ಸವಾಲುಗಳು ಎದುರಾದಾಗ ಎನ್.ಡಿ.ಆರ್.ಎಫ್., ಅಗ್ನಿಶಾಮಕ, ಆರೋಗ್ಯ, ಪೊಲೀಸ್, ಕಂದಾಯ, ಜಿಲ್ಲಾ ಪಂಚಾಯಿತಿ, ಸಾರಿಗೆ, ಪಶು ಸಂಗೋಪನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ತಂಡವಾಗಿ ಕಾರ್ಯ ನಿರ್ವಹಿಸುವುದರಿಂದ ವಿಪತ್ತನ್ನು ಸುಲಭವಾಗಿ ಪರಿಹರಿಸಬಹುದು ಎಂದರು.
ಅಪಾಯಕಾರಿ ರಾಸಾಯನಿಕಗ ವಸ್ತುಗಳ ಉಪಯೋಗವನ್ನು ಕನಿಷ್ಟಗೊಳಿಸಿ, ಅವಶ್ಯವಿದ್ದಲ್ಲಿ ಸುರಕ್ಷಾ ಮತ್ತು ಪರಿಸರಸ್ನೇಹಿ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಬೇಕು ಎಂದರಲ್ಲದೆ, ಸದೃಢ ಮತ್ತು ಸುರಕ್ಷಿತವಾದ ಕಾರ್ಯಾಚರಣೆ, ಕ್ರಮಬದ್ಧವಾದ ಉಪಕರಣಗಳನ್ನು, ಅಪಾಯಗಳ ನಿಯಂತ್ರಣದ ಕ್ರಮಗಳು ಮತ್ತು ತುರ್ತು ನಿರ್ವಹಣೆಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಪಾಯಕಾರಿ ರಾಸಾಯನಿಕ ವಸ್ತುಗಳನ್ನು ತಯಾರಿಸುವ, ಶೇಖರಿಸುವ ಉಪಯೋಗಿಸುವ ಮತ್ತು ಸಾಗಾಣಿಕೆ ಮಾಡುವ ಉದ್ದಿಮೆದಾರರಲ್ಲಿ ಮತ್ತು ಕೈಗಾರಿಕೆಗಳಿಗೆ ಸುರಕ್ಷತೆಯ ಕುರಿತು ನಿಖರವಾದ ತಿಳುವಳಿಕೆ ಮೂಡಿಸಬೇಕು ಎಂದು ಹೇಳಿದರು.
ದುರಂತದಿಂದ ಮನುಷ್ಯನಿಗೆ ಸಂಭವಿಸುವ ನೋವು ಮತ್ತು ನಷ್ಟಗಳನ್ನು ಕನಿಷ್ಟಗೊಳಿಸುವ ಹಾಗೂ ಪರಿಣಾಮಕಾರಿಯಾಗಿ ತುರ್ತು ಸ್ಥಿತಿಗಳನ್ನು ನಿಭಾಯಿಸುವ ಕುರಿತು ಕೆಲಸಗಾರರನ್ನು ಸಿದ್ಧಗೊಳಿಸಬೇಕು ಎಂದರಲ್ಲದೆ, ಆಡಳಿತ ವರ್ಗದವರಿಗೆ ವಿಪತ್ತುಗಳ ನಿವಾರಣೆಯಲ್ಲಿ ಅವರ ಜವಾಬ್ದಾರಿ ಮತ್ತು ಪಾತ್ರಗಳು, ಸಂಬಂಧಿಸಿದ ಇಲಾಖೆಯವರಿಗೆ ತರಬೇತಿ ನೀಡುವ ಪ್ರಾಮುಖ್ಯತೆ ಮತ್ತು ಸಾರ್ವಜನಿಕ ತಿಳುವಳಿಕೆ ಮೂಡಿಸುವುದಾಗಿದೆ ಎಂದು ಹೇಳಿದರು.
ಜಿಲ್ಲಾಡಳಿತದ ನಿಯಂತ್ರಣದಲ್ಲಿರುವ ಎಲ್ಲಾ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿನ ಅಪಾಯಗಳು, ನಿರ್ವಹಿಸುವ ವಿಧಾನ ಲಭ್ಯವಿರುವ ಸಂಪನ್ಮೂಲ ಇತ್ಯಾದಿಗಳ ಬಗ್ಗೆ ಮಾಹಿತಿ ಹೊಂದುವುದು ಹಾಗೂ ಅಪಾಯಕಾರಿ ಕೈಗಾರಿಕೆಗಳ ಸುತ್ತುಮುತ್ತಲಿನ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳಿಗೆ ಕಾರ್ಖಾನೆಯಿಂದ ಉಂಟಾಗಬಹುದಾದ ಅಪಾಯ ಮತ್ತು ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಈ ಅಣುಕು ಪ್ರದರ್ಶನದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಪಸ್ತುತ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿನ ಎಲ್ಲಾ ಕೈಗಾರಿಕೆಗಳಿಗೂ ದುರಂತಗಳ ನಿಯಂತ್ರಣ ಮತ್ತು ಮರುಕಳಿಸದಂತೆ ಅಗತ್ಯ ಕ್ರಮಗಳ ನಿರಂತರ ಅನುಷ್ಟಾನದ ಬಗ್ಗೆ ಪರಿಣಾಮಕಾರಿ ಸಂದೇಶವನ್ನು ನೀಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಅಣುಕು ಪ್ರದರ್ಶನದ ಚಿತ್ರಣ: ದೇವನಗೊಂಥಿ ಐಓಸಿಎಲ್ನ ಪೆಟ್ರೋಲಿಯಂ ಮತ್ತು ಎಲ್ಪಿಜಿ ಸಂಗ್ರಹಣಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಕಾರ್ಖಾನೆ ಸಿಬ್ಬಂದಿಗಳು ನಿಯಂತ್ರಿಸಲಾಗದೆ, ಜಿಲ್ಲಾಡಳಿತದ ಮೊರೆ ಹೋದಾಗ, ಜಿಲ್ಲಾಧಿಕಾರಿಯವರು ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ತುರ್ತು ಪರಿಸ್ಥಿತಿ ಘೋಷಿಸಿದರು. ನಂತರ ದೇವಲಾಪುರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತೆರೆಯಲಾದ ಕಂಟ್ರೋಲ್ ರೂಂ ಮೂಲಕ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಯವರು ಸಂಪರ್ಕ ಸಾಧಿಸಿ, ಕಾರ್ಯ ಪ್ರವೃತ್ತರನ್ನಾಗಿಸಿ, ಅವಘಡ ನಡೆದ ಸ್ಥಳಕ್ಕೆ ಧಾವಿಸಿ, ಸುಟ್ಟ ಗಾಯಾಳುಗಳನ್ನು ರಕ್ಷಿಸಿ, ಆ್ಯಂಬುಲೆನ್ಸ್ ಮೂಲಕ ಆರೋಗ್ಯ ಕೇಂದ್ರಗಳಿಗೆ ಸಾಗಿಸಿ, ಸಕಾಲಕ್ಕೆ ಚಿಕಿತ್ಸೆ ಒದಗಿಸಲಾಯಿತಲ್ಲದೆ, ಅವಘಡ ಸಂಭವಿಸಿದ ಸ್ಥಳದ ಹತ್ತಿರದ ಗ್ರಾಮವಾದ ಕಣೇಕಲ್ಲು ಗ್ರಾಮಸ್ಥರು ಹಾಗೂ ಜಾನುವಾರಗಳನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲೆ ತುರ್ತು ಪರಿಸ್ಥಿತಿಯನ್ನು ಹಿಂಪಡೆದು, ಆದೇಶಿಸಿದರು.
ಕಾರ್ಯಕ್ರಮದಲ್ಲಿ ಕಾರ್ಖಾನೆಗಳು, ಬಾಯ್ಲರ್ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಜಂಟಿ ನಿರ್ದೇಶಕ ನವನೀತ್ ಮೋಹನ್, ಉಪ ನಿರ್ದೇಶಕ ನರಸಿಂಹಮೂರ್ತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ, ಹೊಸಕೋಟೆ ತಾಲ್ಲೂಕು ತಹಶೀಲ್ದಾರ್ ಗೀತಾ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶ್ರೀನಾಥ್ಗೌಡ, ಡಿವೈಎಸ್ಪಿ ಉಮಾಶಂಕರ್, ದೇವನಗೊಂಥಿ ಹಾಗೂ ವಾಗಟ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಜಿಲ್ಲಾ ವಿಪತ್ತು ನಿರ್ವಹಣಾ ತಜ್ಞೆ ಡಾ. ವಿನುತಾ, ದೇವನಗೊಂಥಿಯ ತೈಲ ಮಾರುಕಟ್ಟೆ ಕಂಪನಿಗಳ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್, ಎನ್ಡಿಆರ್ಎಫ್, ಅಗ್ನಿ ಶಾಮಕ, ಗೃಹ ರಕ್ಷಕ ದಳ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ, ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….