ದೊಡ್ಡಬಳ್ಳಾಪುರ: ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿಗೆ ಇರುವ ಗರಿಷ್ಟ ಎಕರೆಗೆ 20 ಕ್ವಿಂಟಾಲ್ ಮಿತಿಯನ್ನು ತೆಗೆದುಹಾಕಿ ಮೊದಲಿನಂತೆ ಗರಿಷ್ಟ 50 ಕ್ವಿಂಟಾಲ್ಗೆ ನಿಗದಿಪಡಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ನಗರದ ಎಪಿಎಂಸಿ ಆವರಣದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ರಾಗಿ ಖರೀದಿ ಕೇಂದ್ರದಲ್ಲಿ ರೈತರು ಪ್ರತಿಭಟನಾ ಧರಣಿ ನಡೆಸಿದರು.
ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿ ಕೇಂದ್ರದಲ್ಲಿ ಹೆಸರುಗಳನ್ನು ನೋಂದಾಯಿಸಿಲು ಬೆಳಿಗ್ಗೆ ರೈತರು ಸಾಲುಗಟ್ಟಿ ನಿಂತಿದ್ದರು. ನಂತರ ಖರೀದಿ ಕೇಂದ್ರದ ನೋಂದಣಿ ಆರಂಭವಾಗುತ್ತಿದ್ದಂತೆ ಆಗಮಿಸಿದ ರೈತ ಮುಖಂಡರು ಸರ್ಕಾರ ಕೂಡಲೇ ಯಾವುದೇ ಮಿತಿ ವಿಧಿಸದೆ ರಾಗಿ ಖರೀದಿ ನಡೆಸಬೇಕು. ಒಮ್ಮೆ ಖರೀದಿ ನೋಂದಣಿ ಆರಂಭವಾದರೆ ಮತ್ತೆ ತಂತ್ರಾಂಶದಲ್ಲಿ ತಿದ್ದುಪಡಿಯಾಗುವುದಿಲ್ಲ. ಈ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಸರ್ಕಾರ ಮಿತಿ ತೆಗೆದುಹಾಕಬೇಕೆಂದು ಒತ್ತಾಯಿಸಿದರು. ಸ್ಥಳಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಮುಖಂಡರು ರಾಜ್ಯದಲ್ಲಿಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆ ಅತಿ ಹೆಚ್ಚು ರಾಗಿ ಬೆಳೆಯುವ ಪ್ರದೇಶವಾಗಿದ್ದು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಹೆಚ್ಚಿನ ರೈತರು ರಾಗಿ ಬೆಳೆದಿದ್ದಾರೆ. ಆದರೆ ಸರ್ಕಾರ ಈ ಬಾರಿ ರಾಗಿ ಪ್ರತಿ ಕ್ವಿಂಟಾಲ್ ಗೆ 3377 ರೂಗಳಿಗೆ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದ್ದು, ಎಕರೆಗೆ 10 ಕ್ವಿಂಟಾಲ್ನಂತೆ ಗರಿಷ್ಟ 20 ಕ್ವಿಂಟಾಲ್ ರಾಗಿಯನ್ನು ಮಾತ್ರ ಖರೀದಿಸಲು ಆದೇಶಿಸಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಸರ್ಕಾರದ ಆದೇಶದಂತೆ ಇತ್ತೀಚಿನ ವರ್ಷಗಳಲ್ಲಿ ನೀಲಗಿರಿ ಮರಗಳನ್ನು ತೆರವು ಮಾಡಿರುವ ರೈತರು, ಆ ಪ್ರದೇಶದಲ್ಲಿ ರಾಗಿ ಬೆಳೆದಿದ್ದಾರೆ. ಈ ಖರೀದಿ ಮಾಡದಿದ್ದರೆ ಹೇಗೆ ?. ಹೆಚ್ಚು ರಾಗಿ ಬೆಳೆದ ರೈತರು ಅನಿವಾರ್ಯವಾಗಿ ಮಧ್ಯವರ್ತಿಗಳು ನೀಡಿದ ಬೆಲೆಗೆ ಕೊಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಒಮ್ಮೆ ಖರೀದಿ ನೋಂದಣಿ ಆರಂಭವಾದರೆ ಮತ್ತೆ ಪ್ರೂಟ್ ತಂತ್ರಾಂಶದಲ್ಲಿ ತಿದ್ದುಪಡಿಯಾಗುವುದಿಲ್ಲ. ಇದರಲ್ಲಿಯೂ ತಾಂತ್ರಿಕ ದೋಷಗಳಿದ್ದು, ರೈತರ ಎರಡು ಮೂರು ಪಹಣಿಯಲ್ಲಿ ಕಡಿಮೆ ಜಮೀನಿನ ಪಹಣಿ ಮಾತ್ರ ನೋಂದಣಿಗೆ ತೆಗೆದುಕೊಳ್ಳಲಾಗುತ್ತಿದ್ದು, ಸರ್ಕಾರ ಕೂಡಲೇ ರಾಗಿ ಖರೀದಿ ಮಿತಿಯನ್ನು ತೆಗೆದು ಮೊದಲಿನಂತೆ ಎಕರೆಗೆ ಗರಿಷ್ಟ 50 ಕ್ವಿಂಟಾಲ್ಗೆ ನಿಗದಿಪಡಿಸಬೇಕು. ರಾಗಿಯನ್ನು ಯಾವುದೇ ಕಾರಣಕ್ಕೂ ತಿರಸ್ಕರಿಸಬಾರದು ಎಂದರು.
ಸರ್ಕಾರ ಅವೈಜ್ಞಾನಿಕ ರಾಗಿ ಖರೀದಿ ಬಗ್ಗೆ ರೈತರು ದನಿ ಎತ್ತಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಪ್ರತಿ ಹೋಬಳಿಯಲ್ಲಿಯೂ ರಾಗಿ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಲಾಗುತ್ತಿದೆ. ಇನ್ನೂ ಸಾಕಷ್ಟು ಕಾಲವಕಾಶವಿದ್ದು ರೈತರು ಯಾವುದೇ ಆತಂಕಕ್ಕೊಳಗಾಗಬೇಕಿಲ್ಲ. ಬೆಳಗಿನ ಜಾವವೇ ಬಂದು ಸಾಲುಗಟ್ಟಿ ನಿಲ್ಲಬೇಕಿಲ್ಲ ಎಂದರು.
ಸರ್ಕಾರದ ಗಮನಕ್ಕೆ: ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ತಹಶೀಲ್ದಾರ್ ಮೋಹನಕುಮಾರಿ ಪ್ರತಿಕ್ರಿಯಿಸಿ, ಪ್ರೂಟ್ಸ್ ತಂತ್ರಾಂಶದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ನೋಂದಣಿಗೆ ಹೆಚ್ಚು ಕೇಂದ್ರಗಳನ್ನು ತೆರೆಯುವ ಕುರಿತು ಕ್ರಮ ಕೈಗೊಳ್ಳಲಾಗುವುದು. 20 ಕ್ವಿಂಟಾಲ್ ಮಿತಿ ಹೆಚ್ಚಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ರಾಗಿ ಮಿತಿಯನ್ನು ಹೆಚ್ಚಿಸುವ ಕುರಿತು ಸರ್ಕಾರದಿಂದ ಸೂಕ್ತ ಭರವಸೆ ದೊರೆಯುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟುಹಿಡಿದ ರೈತರು ಸಂಜೆಯಾದರೂ ರಾಗಿ ಕೇಂದ್ರದ ಮುಂದೆ ಧರಣಿ ಮುಂದುವರೆಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….