ನವದೆಹಲಿ, (ಆಗಸ್ಟ್.01); ಮೋದಿ ಸರ್ಕಾರದ ಅವಧಿಯಲ್ಲಿ ನಿರ್ಮಾಣಗೊಂಡು ಉದ್ಘಾಟನೆ ಕಂಡ ಏರ್ಪೋರ್ಟ್, ಶ್ರೀರಾಮ ಮಂದಿರ ಮಳೆಯಿಂದಾಗಿ ನೀರು ಸೋರಿ ಆಡಳಿತ ಪಕ್ಷವನ್ನು ಮುಜುಗರವನ್ನುಂಟು ಮಾಡಿದೆ.
ಇದರ ಬೆನ್ನಲ್ಲೆ ನೂತನವಾಗಿ ನಿರ್ಮಿಸಲಾಗಿರುವ ಸಂಸತ್ ಭವನದ ಕೂಡ ಸೂರು ಸೋರುತ್ತಿದ್ದು, ಸಂಸತ್ ಭವನದ ಪ್ರಾಂಗಣದಲ್ಲಿರುವ ಗುಮ್ಮಟದಲ್ಲಿ ನೀರು ಸೋರಿಕೆಯಾಗುತ್ತಿದೆ.
ನೀರು ಸೋರುವುದನ್ನು ಹಿಡಿದಿಡಲು ಭವ್ಯ ಸಂಸತ್ ಭವನದಲ್ಲಿ ಬಕೆಟ್ ಇಡಲಾಗಿದೆ. ಪ್ರತಿಯೊಂದು ಛಾವಣಿಯಿಂದಲೂ ನೀರು ಜಿನುಗುತ್ತಿದೆ.
ಇದರಿಂದಾಗಿ ನೂರಾರು ಕೋಟಿ ವೆಚ್ಚ ಮಾಡಿ ನಿರ್ಮಿಸಿದ ಸಂಸತ್ ಭವನದ ಸದೃಢತೆಯ ಬಗ್ಗೆ ಹಲವು ಅನುಮಾನಗಳು ಮೂಡುವಂತೆ ಮಾಡಿದೆ.
ಇನ್ನು ಈ ಕುರಿತು ವಿಪಕ್ಷಗಳು ಕಿಡಿಕಾರಿದ್ದು ಹೊಸ ಸಂಸತ್ ಭವನದ ಅವಸ್ಥೆ ನೋಡಿ ಎಂದು ವಿಡಿಯೋ ಹಂಚಿಕೊಂಡಿವೆ.
ನೀರು ಜಿನುಗುತ್ತಿರುವ ಹೊಸ ಸಂಸತ್ ಭವನಕ್ಕಿಂತ ಹಳೆಯ ಸಂಸತ್ ಭವನವೇ ಉತ್ತಮವಾಗಿತ್ತು. ಅಲ್ಲಿಗೆ ಹಿರಿಯ ಸಂಸದರು ಕೂಡ ಆರಾಮವಾಗಿ ಬಂದು ಭೇಟಿಯಾಗಬಹುದಿತ್ತು.
ರೂ.1,250 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸಂಸತ್ತಿನಲ್ಲಿ ನೀರು ಹರಿಯುವುದ ನಿಲ್ಲಿಸಲು ಕ್ರಮ ಕೈಗೊಳ್ಳುವವರೆಗೂ ಹಳೆ ಸಂಸತ್ತಿನಲ್ಲೇ ಏಕೆ ಕೆಲಸ ಮಾಡಬಾರದು ಎಂದು ಎಸ್ಪಿ ಸಂಸದ ಅಖಿಲೇಶ್ ಯಾದವ್ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ನೂತನ ಸಂಸತ್ ಭವನ ನಿರ್ಮಾಣ ಬಹುದೊಡ್ಡ ಸಾಧನೆ ಎಂದು ಬೀಗುತ್ತಿರುವ ಮೋದಿ ಸರ್ಕಾರ ನಿರ್ಮಿಸಿರುವ ರೂ.1,250 ಕೋಟಿ ವೆಚ್ಚದ ಈ ಕಟ್ಟಡ ಜಲಾವೃತಗೊಂಡು ತೆರಿಗೆದಾರರ ಹಣವನ್ನು ಸಂಪೂರ್ಣ ಪೋಲು ಮಾಡಲಾಗಿದೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ ಎಂದಿದ್ದಾರೆ.
ಇದು ಕೂಡ ಬಿಜೆಪಿಯವರ ಚಿಂತನೆಯ ಭಾಗವೇ ಎಂದು ಪ್ರಶ್ನಿಸಿರುವ ತಮಿಳುನಾಡು ಸಂಸದ ಮಾಣಿಕಂ ಟಾಗೋರ್, ದೇಶದಲ್ಲಿ ಎಲ್ಲವೂ ಲೀಕ್ ಆಗುತ್ತಿದೆ. ಆಗ ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆಯ್ತು. ಈಗ ಸಂಸತ್ ಭವನವೇ ಲೀಕ್ ಆಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….