ಗದಗ, (ಆಗಸ್ಟ್.13): ಓಕುಳಿ ಆಟ ಅಂದ್ರೆ ತಲೆಯಲ್ಲಿ ಬರೋದು ಬಣ್ಣದೋಕುಳಿ. ರಾಜ ಮಹರಾಜರ ಕಾಲದಲ್ಲಿ ಹಾಲಿನ ಓಕುಳಿಯೂ ನಡೆಯುತ್ತಿತ್ತು ಅನ್ನೋದನ್ನ ಕೇಳಿರ್ತೇವೆ. ಆದ್ರೆ, ಗದಗನಲ್ಲಿ ಸಗಣಿಯ ಓಕುಳಿ (Dung spitting game) ನಡೆಯುತ್ತೆ ಅನ್ನೋದು ವಿಶೇಷವಾಗಿದೆ.
ಗದಗ ನಗರದ ಗಂಗಾಪುರ ಪೇಟೆಯಲ್ಲಿ ಶತಮಾನದಿಂದ ಸಗಣಿ ಆಟದ ವಿಶಿಷ್ಟ ಆಚರಣೆ ನಡೆದುಕೊಂಡು ಬಂದಿದೆ. ನಾಗರ ಪಂಚಮಿ ಹಬ್ಬದಂದು ಹುತ್ತಕ್ಕೆ ಹಾಲೆರುದು ನಾಗದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುವ ಜನರು. ಮಾರನೇ ದಿನ ಸಗಣಿ ಎರಚಾಟದ ವಿಶಿಷ್ಠ ಆಚರಣೆ ನಡೆಸ್ತಾರೆ.
ವಿಶೇಷ ಓಕುಳಿ ಆಟಕ್ಕೆ ತಿಂಗಳಿಂದ ಪೂರ್ವಭಾವಿಯಾಗಿ ಸಗಣಿ ಸಂಗ್ರಹಣೆ ಕೆಲಸ ನಡೆಯುತ್ತೆ. ದನ ಕರುಗಳಿರುವ ಮನೆಗಳಿಗೆ ತೆರಳುವ ಯುವಕರು ಸಗಣಿ ಸಂಗ್ರಹಿಸುತ್ತಾರೆ.
ಪಂಚಮಿ ಮಾರನೇ ದಿನ ನಡೆಯೋ ಓಕುಳಿಯಲ್ಲಿ ಬಡಾವಣೆ ಜನ ಉತ್ಸಾಹದಿಂದ ಆಚರಿಸ್ತಾರೆ. ಬಡಾವಣೆಯ ಮುಖ್ಯರಸ್ತೆಯಲ್ಲಿ ಸಗಣಿಯ 20 ಗುಂಪುಗಳನ್ನು ಹಾಕಿ ಅವುಗಳ ಮೇಲೆ ವಿವಿಧ ಬಣ್ಣಗಳನ್ನು ಹಾಕಲಾಗುತ್ತೆ. 12 ರಿಂದ 16 ಜನ ಯುವಕರು ಎರಡು ತಂಡ ರಚಿಸಿ ಹತ್ತಿರದ ದೈವದವರ ತೋಟದಲ್ಲಿ ಸಗಣೆ ಆಟಕ್ಕೆ ಸಿದ್ಧತೆ ನಡೆಸ್ತಾರೆ.
ಚಿತ್ರ ವಿಚಿತ್ರ ಬಟ್ಟೆ ಹಾಕಿಕೊಂಡು ಬದನೆಕಾಯಿ, ಈರುಳ್ಳಿ, ಹಿರೇಕಾಯಿ, ಟೊಮೆಟೊ, ಸೇರಿದಂತೆ ವಿವಿಧ ತರಕಾರಿಗಳಿಂದ ಸಿದ್ಧವಾದ ಹಾರ ಹಾಕಿಕೊಳ್ಳುವ ಯುವಕರು, ತಂಡ ರಚಿಸಿಕೊಂಡು ಪರಸ್ಪರ ಸಗಣಿ ಎರಚಿ ಖುಷಿ ಪಡ್ತಾರೆ.
ರೈತ ಸಮುದಾಯ ಸಗಣಿಗೆ (Dung spitting game) ಬಂಗಾರದ ಸ್ಥಾನಮಾನ ನೀಡುತ್ತೆ. ಪವಿತ್ರತೆಯ ಸಂಕೇತವಾದ ಸಗಣಿಯನ್ನ ಕೀಳರಮೆಯಿಂದ ಕಾಣದೆ ಬಣ್ಣದ ರೀತಿ ಬಳಸುವುದೇ ಈ ಓಕುಳಿ ವಿಶೇಷತೆಯಾಗಿದೆ. ಸಗಣಿ ಮೈಮೇಲೆ ಹಾಕಿಕೊಳ್ಳುವುದರಿಂದ ಚರ್ಮರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.
ನೂರಾರು ವರ್ಷದಿಂದ ನಡೆದುಕೊಂಡು ಬಂದಿರೋ ವಿಶೇಷ ಆಚರಣೆ ಇಂದಿಗೂ ಮುಂದುವರೆದಿದೆ. ಸಾಂಸ್ಕೃತಿಕ ಸಂಕೇತದಿಂತಿರುವ ಸಗಣಿ ಓಕುಳಿ ವರ್ಷದಿಂದ ವರ್ಷಕ್ಕೆ ತನ್ನ ಆಕರ್ಷಣೆ ಹೆಚ್ಚಿಸಿಕೊಳ್ಳುತ್ತಿದೆ. ಗೋ ಮಾತೆಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಹಾಗೂ ಪೂರ್ವಿಕರ ಸಂಸ್ಕೃತಿ ಮುಂದುವರೆಸಿಕೊಂಡು ಹೋಗ್ತಿರೋದು ನಿಜಕ್ಕೂ ವಿಶೇಷವಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….