ಬೆಂಗಳೂರು; ಎತ್ತಿನಹೊಳೆ ನೀರಾವರಿ ಯೋಜನೆಯಲ್ಲಿ ಕಾಂಗ್ರೆಸ್ ಸರ್ಕಾರವು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಇಂದು ಡಾ.ಜಿ.ಪರಮೇಶ್ವರ್ ಅವರ ಜೊತೆ ಎತ್ತಿನಹೊಳೆ ವಿಚಾರವಾಗಿ ಮಾತುಕತೆ ನಡೆಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಒಂದು ವರ್ಷದಲ್ಲಿ ತುಮಕೂರಿಗೆ ಎತ್ತಿನಹೊಳೆ ನೀರು ಹರಿಸಬೇಕಿದೆ. ಆದರೆ ಈ ಮುಂಚಿನ ಬಿಜೆಪಿ ಸರ್ಕಾರ ಎತ್ತಿನಹೊಳೆ ಯೋಜನೆಯ ಬೈರಗೊಂಡ್ಲು ಜಲಾಶಯ ನಿರ್ಮಾಣದ ಪ್ಲಾನ್ ಬದಲಾವಣೆ ಮಾಡಿದೆ. ಈ ನಿಟ್ಟಿನಲ್ಲಿ ಬೈರಗೊಂಡ್ಲುಗೆ ಭೇಟಿ ನೀಡಬೇಕಿದೆ.
ತುಮಕೂರು ಮತ್ತು ದೊಡ್ಡಬಳ್ಳಾಪುರ ವ್ಯಾಪ್ತಿಯ ಪ್ರದೇಶ ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕೆ ಸೇರಿರುವುದರಿಂದ, ಜಮೀನಿಗೆ ಬೆಲೆ ನಿಗದಿ ವಿಚಾರವಾಗಿ ದೊಡ್ಡಬಳ್ಳಾಪುರ ಮತ್ತು ಕೊರಟಗೆರೆ ವ್ಯಾಪ್ತಿಯ ಜಮೀನಿಗೆ ಒಂದೇ ರೀತಿಯ ಬೆಲೆ ನಿಗದಿ ಮಾಡಬೇಕೆಂಬ ಒತ್ತಾಯವಿದೆ.
ಈ ನಿಟ್ಟಿನಲ್ಲಿ ಎತ್ತಿನಹೊಳೆಯಿಂದ ಬೈರಗೊಂಡ್ಲು ವರೆವಿಗೆ ಸ್ಥಳ ಪರಿಶೀಲನೆ ನಡೆಸಲು ಇಂದು ಚರ್ಚೆ ನಡೆಲಾಗಿದೆ. ಆದಷ್ಟು ತ್ವರಿತವಾಗಿ ಈ ಕಾರ್ಯ ಮಾಡಬೇಕಿದ್ದು, ದಸರಾ ಮುಗಿದ ಬಳಿಕ ಸ್ಥಳಕ್ಕೆ ಭೇಟಿ ನೀಡಲಿದ್ದೇವೆ ಎಂದರು.
ಎತ್ತಿನಯೋಜನೆಯ ಮೂಲ ಪ್ಲಾನ್;
ಬೈರಗೊಂಡ್ಲು ಜಲಾಶಯಕ್ಕೆ 5,478.68 ಎಕರೆ ಭೂಮಿ ಬೇಕಿದ್ದು ಭೂಸ್ವಾಧೀನ ಪ್ರಕ್ರಿಯೆ ಬಾಕಿಯಿದೆ.
ಬೈರಗೊಂಡ್ಲು ಜಲಾಶಯ ನಿರ್ಮಾಣದಿಂದ ದೊಡ್ಡಬಳ್ಳಾಪುರ ತಾಲೂಕಿನ ಲಕ್ಕೇನಹಳ್ಳಿ, ಗರುಡಗಲ್ಲು, ಕೊರಟಗೆರೆಯ ವೀರಸಾಗರ, ಲಕ್ಕಮುತ್ತನಹಳ್ಳಿ, ಬೆಲ್ಲದಹಳ್ಳಿ, ಸುಂಕದಹಳ್ಳಿ ಸೇರಿದಂತೆ ಒಟ್ಟು 7 ಗ್ರಾಮಗಳು ಮುಳುಗಡೆಯಾಗುತ್ತವೆ.
ಈ ಭಾಗದ ಜನರಿಗೆ ಪರಿಹಾರದ ಜತೆಗೆ ಪರ್ಯಾಯ ವ್ಯವಸ್ಥೆ ಕೂಡ ಮಾಡಿಕೊಡಬೇಕಿದೆ. ಈ ಭಾಗದ ರೈತರ ಮನವೊಲಿಸಲು ಇನ್ನೂ ಸಾಧ್ಯವಾಗಿಲ್ಲ. ಇನ್ನು ಭೂಸ್ವಾಧೀನ ಯಾವಾಗ ಎಂಬುದು ಪ್ರಶ್ನೆಯಾಗಿದೆ.
ಈ ನಿಟ್ಟಿನಲ್ಲಿ ಡಿಕೆ ಶಿವಕುಮಾರ್ ಹಾಗೂ ಪರಮೇಶ್ವರ್ ಸ್ಥಳಕ್ಕೆ ಭೇಟಿ ಮಹತ್ವವನ್ನು ಪಡೆದಿದೆ.