ದೊಡ್ಡಬಳ್ಳಾಪುರ: ಜೀವಿಗಳ ಜೀವವಾಗಿರುವ ಮಣ್ಣು ಒಂದು ಸಜೀವ ವಸ್ತು, ಸಸ್ಯ ಮತ್ತು ಪ್ರಾಣಿ ಸಂಕುಲದ ಅಳಿವು ಮತ್ತು ಉಳಿಗೆ ಮಣ್ಣು (Soil) ಮೂಲ ಕಾರಣ. ಕೃಷಿಗೆ ಇದು ಮೂಲಭೂತ ವಸ್ತು. ಮಣ್ಣಿನ ಆರೋಗ್ಯವೇ ಕೃಷಿಯ ಆರೋಗ್ಯ, ಕೃಷಿಯ ಆರೋಗ್ಯವೇ ದೇಶದ ಆರೋಗ್ಯ.
15 ನೇ ಶತಮಾನದಲ್ಲಿ ಶ್ರೀ ಪುರಂದರದಾಸರು ಮಣ್ಣಿಂದಲೇ ಕಾಯ ಮಣ್ಣಿಂದಲೇ ಸಾಯ ಎಂಬ ಪದ್ಯದಲ್ಲಿ ಮಣ್ಣಿನ ಮಹತ್ವ ಮತ್ತು ಮಾನವ ಸಂಬಂಧಗಳ ಬಗ್ಗೆ ತಿಳಿಸುತ್ತಾ ‘ಮಣ್ಣು ಅಳಿದರೆ ಮಾನವ ಅಳಿದಂತೆ’ ಎಂದು ಹೇಳಿದ ಮಾರ್ಮಿಕ ನಿಲುವು ಇಂದಿಗೂ ಸ್ಪಷ್ಟವಾಗಿದೆ.
ಈ ಹಿನ್ನಲೆಯಲ್ಲಿ ಇಂದು ತಾಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನಕೇಂದ್ರದಲ್ಲಿ ವಿಶ್ವ ಮಣ್ಣು ದಿನವನ್ನುಆಚರಿಸಲಾಯಿತು.
ಕೇಂದ್ರದ ಮಣ್ಣು ವಿಜ್ಞಾನಿ ಡಾ.ಪಿ.ವೀರನಾಗಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿಶ್ವ ಮಣ್ಣು ದಿನದ ಮಾಹಿತಿ ನೀಡಿದರು.
ಈ ವರ್ಷ ಮಣ್ಣಿನ ಆರೈಕೆ, ಮಾಪನ, ಮೇಲ್ವಿಚಾರಣೆ, ನಿರ್ವಹಣೆ ಎನ್ನುವ ಘೋಷ ವಾಕ್ಯದ ಮೇಲೆ ವಿಶ್ವ ಮಣ್ಣು ದಿನ ಆಚರಿಸಲಾಗುತ್ತಿದೆ. ಪ್ರತೀ ವರ್ಷ ಡಿಸೆಂಬರ್ 5 ರಂದು ಪ್ರಪಂಚದಾದ್ಯಂತ ವಿಶ್ವ ಮಣ್ಣು ದಿನವನ್ನು ಆಚರಿಸಲಾಗುತ್ತದೆ.
ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಮಣ್ಣು ವಿಜ್ಞಾನಿಗಳ ಒಕ್ಕೂಟವನ್ನು 1927 ರಲ್ಲಿ ರಚಿಸಿ ಈ ವಿಜ್ಞಾನಿಗಳು ಡಿಸೆಂಬರ್ 5 ರಂದು 2002 ರಲ್ಲಿ ಮೊದಲ ‘ಮಣ್ಣು ದಿನ’ ಆಚರಿಸಿದರು.
ಜಗತ್ತಿನ ಭತ್ತದ ಕಣಜ ಎಂದು ಪ್ರಸಿದ್ಧಿ ಪಡೆದಿರುವ ಥಾಯ್ಲೆಂಡ್ ದೇಶದ ಮಹಾರಾಜ ಭೂಮಿಬೋಲ್ ಅದ್ಯುಲ್ದೇಜ್ ಅವರು ಮಣ್ಣಿನ ಮೇಲಿನ ಕಾಳಜಿಂದ ಹಲವಾರು ಮಣ್ಣು ನಿರ್ವಹಣೆಯ ಪ್ರಯೋಗಗಳನ್ನು ಕೈಗೊಂಡಿದ್ದರು. ಇವರ ಜನ್ಮದಿನದ ನೆನಪಿಗಾಗಿ ‘ಡಿಸೆಂಬರ್ 5’ ನ್ನು ವಿಶ್ವ ಮಣ್ಣು ದಿನವಾಗಿ ಆಚರಿಸಲಾಗುತ್ತದೆ.
ಡಾ.ವೀರನಾಗಪ್ಪತಮ್ಮ ಉಪನ್ಯಾಸದಲ್ಲಿ, ಭೂಮಿಯ ಮೇಲ್ಬಾಗದಲ್ಲಿರುವ ಹಲವಾರು ರೀತಿಯ ಖನಿಜಗಳು ಮತ್ತು ಶಿಲೆಗಳು ನೂರಾರು ವರ್ಷಗಳ ಕಾಲ ಹವಾಕ್ರಿಯೆ ಮತ್ತು ಮಣ್ಣುಉತ್ಪದಾಕ ಕ್ರಿಯೆಗೊಳಗಾಗಿ ಉತ್ಪತ್ತಿಯಾಗುವ ಮಣ್ಣು ಜೇಡಿ, ಗೋಡು ಮತ್ತು ಮರಳಿನ ಕಣಗಳನ್ನು ಹೊಂದಿರುತ್ತದೆ. ಇದುವರೆಗೆ ಮಣ್ಣನ್ನು ತಯಾರಿಸಲು ಯಾವ ಕಾರ್ಖಾನೆಗಳಿಂದಲೂ ಸಾಧ್ಯವಾಗಿಲ್ಲ. ಕೇವಲ ಒಂದು ಅಂಗುಲದ? ಮೇಲ್ಪದರದ ಮಣ್ಣಿನ ಉತ್ಪತ್ತಿಯಾಗಲು 800 ರಿಂದ 2000 ವರ್ಷಗಳು ಬೇಕಾಗುತ್ತದೆ ಎಂದು ವಿವರಿಸಿದರು.
ಯಾವ ರಾಷ್ಟ್ರವು ತನ್ನ ಮಣ್ಣನ್ನು ಪೋಷಿಸುವುದಿಲ್ಲವೋ ಅದು ತನ್ನ ಅಳಿವಿಗೆ ತಾನೇ ಕಾರಣವಾದಂತೆ ಎಂದು ಯುನೈಟೆಡ್ ಸ್ಟೇಟ್ಸ್ಆಫ್ ಅಮೆರಿಕಾದ 32ನೇ ಅಧ್ಯಕ್ಷ ಫ್ರಾಂಕ್ಲಿನ್ಡೆಲಾ ನೊರೂಸ್ಟೆಲ್ಸ್ 1937ರಲ್ಲೇ ಉಲ್ಲೇಖಿಸಿದ್ದಾರೆ. ಇದು ಒಂದು ದೇಶದ ವೃದ್ಧಿಗೆ ಮಣ್ಣಿನ ಸಂಪತ್ತು? ಎಷ್ಟು ಪ್ರಾಮುಖ್ಯವೆಂದು ಅವರು ಕಂಡುಕೊಂಡಿದ್ದು, ಮಣ್ಣನ್ನು ವೈಜ್ಞಾನಿಕವಾಗಿ ಪರೀಕ್ಷೆ ಮಾಡಿಸಿ ಸೂಕ್ತ ಪ್ರಮಾಣದಲ್ಲಿ ಅವಶ್ಯಕತೆಗೆ ತಕ್ಕಂತೆ ರಾಸಾಯನಿಕಗಳನ್ನು ಬಳಸಿ. ಆರೋಗ್ಯವನ್ನು ಕಾಪಾಡುವುದು ಮತ್ತು ಅರಿವು ಮೂಡಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು
ಕೇಂದ್ರದ ಹಿರಿಯ ವಿಜ್ಞಾನಿ ಡಾ.ಬಿ.ಜಿ.ಹನುಮಂತರಾಯ ಮಂಜುನಾಥ್ ಮಾತನಾಡಿ, ಮಣ್ಣಿನ ಋಣ ತೀರಿಸಲು ಸಾಧ್ಯವಿಲ್ಲ. ಮಣ್ಣು ನಮ್ಮಜೀವನದ ಆಧಾರ, ಮಣ್ಣಿನ ನಿರ್ವಹಣೆ ಮನುಕುಲಕ್ಕೆ ಅತ್ಯಾವಶ್ಯವಾಗಿದ್ದು ಮಣ್ಣಿನ ಫಲವತ್ತತೆಯ ಕಾಪಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಡಾ.ಜಿ.ಈಶ್ವರಪ್ಪ ಮಾತನಾಡಿ, ಮಣ್ಣಿನ ಫಲವತ್ತತೆಗೆ ಹಸಿರೆಲೆ ಗೊಬ್ಬರಗಳು, ಕೊಟ್ಟಿಗೆಗೊಬ್ಬರ, ಪ್ರಸ್ಮಡ್, ಪಾಸ್ಫೊಜಿಪ್ಸಂ, ಸಕ್ಕರೆಕಾರ್ಖಾನೆ ಮಡ್ಡಿಗಳು, ಗುಣಮಟ್ಟದ ನೀರಾವರಿ, ಸಮತೋಲನ ಗೊಬ್ಬರಗಳು, ಭೂಮಿಯ ಮೇಲ್ಮೈ ಹೊದಿಕೆ ಮತ್ತು ಆಳವಾದ ಉಳುಮೆ ಅಳವಡಿಕೆ ಮಾಡಬಹುದು ಎಂದು ತಿಳಿಸಿದರು.
ಮಣ್ಣಿನ ಕಾಳಜಿ ಯಾಕೆ..?; ವಿಶ್ವದಲ್ಲಿ ಸುಮಾರು 82 ಕೋಟಿ ಜನಸಂಖ್ಯೆಗೆ ಆಹಾರ ಭದ್ರತೆ ಇಲ್ಲವಾಗಿದ್ದು, 200 ಕೋಟಿ ಜನಸಂಖ್ಯೆ ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ. ಇವುಗಳನ್ನು ಮಣ್ಣಿನಿಂದ ಮಾತ್ರ ನೀಗಿಸಲು ಸಾಧ್ಯ.
ನಮ್ಮ ಭೂಮಿಯ ಮಣ್ಣು ವಾತಾವರಣ (ಗಾಳಿ) ಕ್ಕಿಂತ ಮೂರು ಪಟ್ಟು ಜಾಸ್ತಿ ಇಂಗಾಲವನ್ನು ಹಿಡಿದಿಟ್ಟಿದ್ದು ವೇಗವಾಗಿ ಬದಲಾಗುತ್ತಿರುವ ಹವಾಮಾನದ ವೈಪರೀತ್ಯ ನಿಯಂತ್ರಣಕ್ಕೆ ಸಾಧ್ಯ.
ನಮ್ಮದೇಶದಲ್ಲಿ ಪ್ರತಿ ವರ್ಷ ಸುಮಾರು 5500 ದಶಲಕ್ಷ ಟನ್ ಫಲವತ್ತಾದ ಮೇಲ್ಪದರದ ಮಣ್ಣು ಸವಕಳಿಯಿಂದ ನಷ್ಟವಾಗುತ್ತದೆ. ಇದರಲ್ಲಿ ಸುಮಾರು 2900 ದಶಲಕ್ಷಟನ್ ನಷ್ಟು ಮಣ್ಣು ಸಮುದ್ರವನ್ನು ಸೇರಿ ಶಾಶ್ವತವಾಗಿ ನಷ್ಟವಾಗುತ್ತದೆ. ಭೂ ಭಾಗದಲ್ಲಿರುವ ಮಣ್ಣಿನಲ್ಲಿ ಶೇ.33ರಷ್ಟು ಪ್ರಮಾಣದ ಮಣ್ಣಿನಆರೋಗ್ಯವು ಹದಗೆಟ್ಟ ಈಗಾಗಲೇ ಅವನತಿಯ ಅಂಚಿನಲ್ಲಿದೆ.
ಹದಗೆಡುತ್ತಿರುವ ವಾತಾವರಣಕ್ಕೆ (ಮಣ್ಣು, ಗಾಳಿ ಮತ್ತು ನೀರಿನ ಗುಣಮಟ್ಟ) ನಮ್ಮೆಲ್ಲರ ಜೀವನ ಶೈಲಿ ಮತ್ತು ನಮ್ಮ ರೈತರು ಅನುಸರಿಸುತ್ತಿರುವ ಅವೈಜ್ಞಾನಿಕ ಕೃಷಿ ಪದ್ಧತಿಗಳೇ ಕಾರಣ ಎನ್ನಬಹುದು.
ಇಂತಹ ಪರಿಸ್ಥಿತಿಯ ಮಣ್ಣಿನ ಉಳಿವಿಗಾಗಿ ರೈತರು ಅನುಸರಿಸಬಹುದಾದ ಕೆಲವು ಕ್ರಮಗಳು ಇಂತಿವೆ.
ಮಣ್ಣು ಸವಕಳಿ ತಡೆಗಟ್ಟುವ ವೈಜ್ಞಾನಿಕ ಕೃಷು ಪದ್ಧತಿಗಳ ಅಳವಡಿಕೆ, ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳ ಮೂಲಕ ಸಮಗ್ರ ಪೋಷಕಾಂಶಗಳನ್ನು ಒದಗಿಸುವುದರಿಂದ ಮಣ್ಣಿನ ಫಲವತ್ತತೆ ಮತ್ತು ಬೆಳೆಯ ಇಳುವರಿ ಹೆಚ್ಚಿಸಬಹುದು. ಮಣ್ಣು ಪರೀಕ್ಷಾ ಫಲಿತಾಂಶದ ಆಧಾರದ ಮೇಲೆ ಒಂದು ಬೆಳೆಗೆ ಹಾಕಬೇಕಾದ ಪೋಷಕಾಂಶದ ಪ್ರಮಾಣವನ್ನು ಲೆಕ್ಕಚಾರ ಮಾಡಿ ಪೂರೈಸಬೇಕು.
ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ವೃದ್ಧಿಗೆ ಅಗತ್ಯ ಕ್ರಮ
ಮಣ್ಣಿನ ಗುಣಕ್ಕನುಗುಣವಾಗಿ ಶೂನ್ಯ ಉಳುಮೆ ಮತ್ತು ಸಂರಕ್ಷಣಾ ಕೃಷಿ ಪದ್ಧತಿ ಸಮಸ್ಯಾತ್ಮಕ ಮಣ್ಣುಗಳಿದ್ದಲ್ಲಿ ಮಣ್ಣಿನ ಸಮಸ್ಯೆ ಬಗ್ಗೆ ತಜ್ಞರಿಂದ ಆರಿತು ಅವರ ಸಲಹೆ ಪಡೆದು, ಸೂಕ್ತ ಸುಧಾರಣಾಕ್ರಮ ಅನಿಸರಿಸಬಹುದೆಂದು ನೈಸರ್ಗಿಕ ಕೃಷಿಕ ಚನ್ನೇಗೌಡ ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತರು, ದೇಸಿ ತಂಡದ ತರಬೇತುದಾರರು, ಜಿಕೆವಿಕೆ ಕೃಷಿ ಮಹಾವಿದ್ಯಾಲಯದ 25 ವಿದ್ಯಾರ್ಥಿಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದ್ದರು.