ದೊಡ್ಡಬಳ್ಳಾಪುರ Farmers Day: ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಮಾರ್ಗದರ್ಶನದ ಕೊರತೆಯಿಂದ ಕೃಷಿಯಲ್ಲಿ ಯಶಸ್ಸು ಕಾಣಲಾಗುತ್ತಿಲ್ಲ. ಈ ದಿಸೆಯಲ್ಲಿ ರೈತರು ಸರ್ಕಾರದಿಂದ ಸಿಗುವ ಸೌಲಭ್ಯ ಬಳಸಿಕೊಂಡು ಉತ್ತಮ ಕೃಷಿಯನ್ನು ಮಾಡಿ ಹೆಚ್ಚು ಆದಾಯ ಗಳಿಸಬೇಕು ಎಂದು ಮೆಳೇಕೋಟೆ ಗ್ರಾಪಂ ಅಧ್ಯಕ್ಷ ಬಿ.ಎನ್.ಶ್ರೀನಿವಾಸ ಮೂರ್ತಿ ಹೇಳಿದರು.
ತಾಲೂಕಿನ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಿಂದ ದೊಡ್ಡರಾಯಪ್ಪನಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಕೃಷಿಯೊಂದಿಗೆ ರೈತರು ಕೃಷಿಯ ಉಪಕಸುಬುಗಳಾದ ಹೈನುಗಾ ರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆಯನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ತಂತ್ರಜ್ಞಾನ ಅಳವಡಿಸಿಕೊಳ್ಳಿ: ಕೇಂದ್ರದ ಮುಖ್ಯಸ್ಥ ಡಾ.ಬಿ.ಜಿ.ಹನುಮಂತರಾಯ ಮಾತನಾಡಿ, ಭಾರತದೇಶದ ಐದನೇ ಪ್ರಧಾನ ಮಂತ್ರಿಯಾದ ದಿ.ಚೌಧರಿ ಚರಣ್ ಸಿಂಗ್ ರವರು ರೈತಾಪಿ ವರ್ಗದವರಿಗೆ ನೀಡಿದ ಕೊಡುಗೆಯ ಸ್ಮರಣಾರ್ಥ ಅವರ ಜನ್ಮ ದಿನವನ್ನು ರೈತ ದಿನಾಚರಣೆಯೆಂದು ಆಚರಿಸಲಾಗುತ್ತಿದೆ.
ಇಂದಿನ ವ್ಯತಿರಿಕ್ತ ಹವಾಮಾನ ಪರಿಸ್ಥಿತಿಗೆ ಅನುಗುಣವಾದ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಉತ್ತಮ ಇಳುವರಿ ಪಡೆಯಬೇಕು. ರೈತರು ಬೆಳೆದ ಬೆಳೆಗಳ ಆದಾಯದ ಪಾಲು ಕೇವಲ ಶೇ.30ರಿಂದ 37ರಷ್ಟು ಮಾತ್ರ ರೈತರಿಗೆ ದೊರೆಯುತ್ತಿದೆ. ಉಳಿದ ಶೇ.63-70ರಷ್ಟು ಇತರೆ ದಲ್ಲಾಳಿಗಳು, ಮಧ್ಯವರ್ತಿಗಳು ಮತ್ತು ನೇರ ಮಾರಾಟಗಾರರ ಪಾಲಾಗುತ್ತಿದೆ. ಈ ಪೋಲನ್ನು ತಪ್ಪಿಸುವ ಸಲುವಾಗಿ ರೈತ ಉತ್ಪಾದಕ ಕಂಪೆನಿಗಳ ಮೂಲಕ ಮಾರಾಟ ವ್ಯವಸ್ಥೆ ಕಲ್ಪಿಸಿಕೊಂಡು ಮಧ್ಯವರ್ತಿ ಮತ್ತು ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಬಹುದು ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ವೆಂಕಟೇಗೌಡ, ಕೃಷಿವಿಶ್ವವಿದ್ಯಾನಿಲಯದಿಂದ ಹೊಸದಾಗಿ ಬಿಡುಗಡೆ ಮಾಡಿದ ನೂತನ ತಳಿಗಳ ಬಗ್ಗೆ ಮಾಹಿತಿ ನೀಡಿ, ದತ್ತು ಗ್ರಾಮದ ಪ್ರಾಯೋಜನೆ ಯಡಿಯಲ್ಲಿ ಪರಿಚಯಿಸಲಾದ ಹೊಸ ತಳಿ, ಬೆಳೆಗಳು ಮತ್ತು ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮುಂದಿನ ದಿನಗಳಲ್ಲಿ ಕೃಷಿ ವಿಜ್ಞಾನ ಕೇಂದ್ರವು ಕೈಗೊಳ್ಳುವ ಚಟುವಟಿಕೆಗಳಲ್ಲಿ ಭಾಗವಹಿಸಲು ತಿಳಿಸಿದರು.
ಮಣ್ಣು ನೀರು ಪರೀಕ್ಷೆ ಮಾಡಿಸಿ: ಪ್ರಮು ಖರಾದ ಡಾ.ವೀರನಾಗಪ್ಪ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಣ್ಣು ಮತ್ತು ನೀರು ಪರೀಕ್ಷೆಯನ್ನು ಮಾಡಿಸಿಕೊಂಡು, ಪರೀಕ್ಷಾ ಆಧಾರದ ಮೇಲೆ ಪೋಷಕಾಂಶಗಳನ್ನು ನೀಡಿ, ಬೇಸಾಯದ ಖರ್ಚನ್ನು ಕಡಿಮೆ ಮಾಡಿಕೊಂಡು ಹೆಚ್ಚು ಆದಾಯಗಳಿಸಬೇಕು ಎಂದು ಕೋರಿದರು.
ಸನ್ಮಾನ: ಜಿಲ್ಲೆಯ ನಾಲ್ಕು ಪ್ರಗತಿ ಪರ ರೈತರಾದ ಎಂ.ಸಿ.ರಾಜಣ್ಣ (ಮಾರಹಳ್ಳಿ). ಅನಿಲ್(ಕಾಚಹಳ್ಳಿ), ಮಹೇಶ್ (ಶ್ರವಣೂರು) ಮತ್ತು ಶೋಭಾ ಕುಮಾರಿ (ಗಂಟೆಗಾನಹಳ್ಳಿ) ಅವರನ್ನು ಸನ್ಮಾನಿಸಲಾಯಿತು.