ದೊಡ್ಡಬಳ್ಳಾಪುರ, (Doddaballapura): ತಾಲೂಕಿನಲ್ಲಿ ವನ್ಯಜೀವಿಗಳ ಹಾವಳಿಯಿಂದಾಗಿ ರೈತರು ತೀವ್ರ ನಷ್ಟಕ್ಕೆ ಒಳಗಾಗುತ್ತಿದ್ದಾರೆ.
ಒಂದೆಡೆ ಚಿರತೆ ದಾಳಿಯಿಂದಾಗಿ ಜಾನುವಾರು ನಷ್ಟಕ್ಕೆ ಒಳಗಾದರೆ, ಕಾಡು ಹಂದಿಗಳು ಜಮೀನಿಗೆ ಲಗ್ಗೆ ಇಟ್ಟು ಬೆಳೆದ ಬೆಳೆಗಳನ್ನು ಸಂಪೂರ್ಣವಾಗಿ ಹಾಳು ಮಾಡುತ್ತಿವೆ ಎಂಬ ಅಳಲು ರೈತರದ್ದಾಗಿದೆ.
ಇದಕ್ಕೆ ಪೂರಕ ಎಂಬಂತೆ ತಾಲೂಕಿನ ಹಾಡೋನಹಳ್ಳಿ ಗ್ರಾಮದ ಜಮೀನಿಗೆ ಕಳೆದ ರಾತ್ರಿ ಲಗ್ಗೆ ಇಟ್ಟಿರುವ ಕಾಡಿಹಂದಿಗಳು ಸುಮಾರು ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆಯಲಾಗುತ್ತಿದ್ದ ಹುರುಳಿ (ಬೀನ್ಸ್) ಬೆಳೆಯನ್ನು ತಿಂದು ಹಾಕಿವೆ.
ಕೃಷ್ಣಪ್ಪ ಹಾಗೂ ರಾಮಕೃಷ್ಣಪ್ಪ ಎನ್ನುವವರ ಜಮೀನಿಗೆ ದಾಂಗುಡಿ ಇಟ್ಟಿರುವ ಹಾಡು ಹಂದಿಗಳು ಒಂದುವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಹುರುಳಿ ಬೆಳೆಯನ್ನು ರಾತ್ರೋ ರಾತ್ರಿ ಮುಕ್ಕಿ ಹಾಕಿವೆ.
ಇದರಿಂದಾಗಿ ಕೃಷ್ಣಪ್ಪ ಹಾಗೂ ರಾಮಕೃಷ್ಣಪ್ಪ ಎನ್ನುವವರಿಗೆ ಲಕ್ಷಾಂತರ ರೂ ನಷ್ಟವಾಗಿದ್ದು, ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ವನ್ಯ ಜೀವಿಗಳಿಗೆ ತೊಂದರೆ ಮಾಡುವುದು ಕಾನೂನಿನ ಪ್ರಕಾರ ಅಪರಾಧ. ಆದರೆ ವನ್ಯ ಜೀವಿಗಳಿಂದ ರೈತನಿಗೆ ತೊಂದರೆಯಾದಾಗ ಪರಿಹಾರ ಕೊಡುವವರು ಯಾರು ಎಂಬ ಪ್ರಶ್ನೆ ಗ್ರಾಮಸ್ಥರಾಗಿದೆ.
ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ದೊರಕಿಸಲು ಮುಂದಾಗಬೇಕಿದೆ.
ಈ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆಹೆಚ್ ಮುನಿಯಪ್ಪ ಅವರಿಗೆ ಮನವಿ ನೀಡಲು ರೈತರು ಮುಂದಾಗಿದ್ದಾರೆ.