ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸರಬರಾಜು ಕಡಿತದಿಂದ ರೈತರ ಕೃಷಿಗೆ ಸಂಕಷ್ಟ ಒದಗಿದೆ. ಈ ಬಗ್ಗೆ ಸಾಕಷ್ಟು ಮನವಿ ಮಾಡಿದ್ದರೂ ಸಹ ಅಧಿಕಾರಿಗಳು ಸ್ಪಂಧಿಸುತ್ತಿಲ್ಲ ಎಂದು ಆರೋಪಿಸಿ ರೈತರು ಬೆಂಗಳೂರು ಹಿಂದೂಪುರ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಮುಖಂಡರು, ಕಳೆದ ಒಂದೂವರೆ ತಿಂಗಳಿನಿಂದ ಗ್ರಾಮಾಂತರ ಪ್ರದೇಶದ ಕೃಷಿ ಪಂಪ್ ಸೆಟ್ಗೆ ನೀಡುವ ವಿದ್ಯುತ್ ಕಡಿತ ಗೊಳಿಸಿದ್ದಾರೆ. ಸಾಲ ಮಾಡಿ ಬೆಳೆದಿರುವ ಬೆಳೆಗಳಿಗೆ ನೀರಿಲ್ಲದೆ ಬಾಡುತ್ತಿವೆ. ಇಡೀ ರಾಜ್ಯದ ಯಾವ ತಾಲ್ಲೂಕಿನಲ್ಲೂ ಇಲ್ಲದ ವಿದ್ಯುತ್ ಕಡಿತವನ್ನು ನಮ್ಮ ತಾಲ್ಲೂಕಿನಲ್ಲಿ ಮಾತ್ರ ಮಾಡುತ್ತಿರುವುದು ಖಂಡನೀಯ.
ಹತ್ತು ದಿನಗಳ ಹಿಂದಷ್ಟೇ ಈ ಬಗ್ಗೆ ಪ್ರತಿಭಟನೆ ನಡೆಸಿ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ನೀಡುವ ಬಗ್ಗೆ ಈಗಲೂ ತಾರತಮ್ಯವಿದೆ. 7 ಗಂಟೆ ನಿರಂತರ ವಿದ್ಯುತ್ ನೀಡಬೇಕೆಂಬ ನಿಯಮವಿದ್ದರೂ 1ರಿಂದ 2 ಗಂಟೆ ವಿದ್ಯುತ್ ಸರಬರಾಜು ಇದ್ದರೆ ಹೆಚ್ಚು ಎನ್ನುವಂತಾಗಿದೆ.
ಇದಲ್ಲದೇ ವಿದ್ಯುತ್ ಪರಿವರ್ತಕಗಳು ಸರಿಯಾಗಿ ಕಾರ್ಯ ನಿರ್ವಹಿಸದೇ ವೊಲ್ಟೇಜ್ ತೀರಾ ಕಡಿಮೆಯಾಗಿ, ಪಂಪ್ಸೆಟ್ ಮೋಟಾರ್ಗಳು ಸುಟ್ಟು ಹೋಗಿರುವ ಪ್ರಸಂಗಗಳೂ ನಡೆದಿವೆ. ಈಗಷ್ಟೇ ಬೇಸಿಗೆ ಪ್ರಾರಂಭವಾಗುತ್ತಿರುವ ದಿನಗಳ ಸಮಯ ನಿಗದಿ ಇಲ್ಲದೆ, ಸರ್ಕಾರದ ಸೂಚನೆ ಇಲ್ಲದೆ ವಿದ್ಯುತ್ ಕಡಿತ ಪ್ರಾರಂಭವಾಗಿದೆ.
ಕುಡಿಯುವ ನೀರಿಗೂ ಸಹ ಗ್ರಾಮೀಣ ಭಾಗದ ಜನರು ಪರದಾಡುವಂತಾಗಿದೆ. ಈ ಬಗ್ಗೆ ಅಕಾರಿಗಳು ನಿರ್ಲಕ್ಷ್ಯ ಮುಂದುವರೆದಿದ್ದು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.
ಪ್ರತಿಭಟನಾನಿರತರೊಂದಿಗೆ ಮಾತನಾಡಿದ ಗ್ರಾಮೀಣ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್, ವಿದ್ಯುತ್ ಸರಬರಾಜು ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಮುಖ ವಿದ್ಯುತ್ ಪರಿವರ್ತಕಗಳು ಹಾನಿಯಾಗಿದ್ದು, ಒಂದೇ ಪರಿವರ್ತಕದಲ್ಲಿ ವಿದ್ಯುತ್ ಪ್ರಸರಣ ಸರಿತೂಗಿಸಲು ಲೋಡ್ ಶೆಡ್ಡಿಂಗ್ ಮಾಡಬೇಕಾದ ಅನಿವಾರ್ಯತೆ ಇದೆ.
ಇದು ಇಲ್ಲಿನ ತಾಂತ್ರಿಕ ಸಮಸ್ಯೆಯೇ ಹೊರತು ಲೋಡ್ ಶೆಡ್ಡಿಂಗ್ ಬಗ್ಗೆ ಯಾವುದೇ ಸೂಚನೆಯಿಲ್ಲ. ವಿದ್ಯುತ್ ಪರಿವರ್ತಕಗಳ ದುರಸ್ಥಿ ಅಂತಿಮ ಹಂತದಲ್ಲಿದ್ದು, ಇಂದು ರಾತ್ರಿಯೇ ವಿದ್ಯುತ್ ಸರಬರಾಜು ಸರಿಯಾಗಲಿದೆ ಎಂದರು.
ಹಿಂದೆಯೂ ಇದೇ ರೀತಿ ಉತ್ತರ ಹೇಳಿದ್ದರು. ವಿದ್ಯುತ್ ಸರಬರಾಜು ಅವ್ಯವಸ್ಥೆ ಸರಿಹೋಗದಿದ್ದರೆ, ಡಿ.ಕ್ರಾಸ್ ಬಳಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಸಿದರು.