ಬೆಂಗಳೂರು; ರಾಜ್ಯ ಸರಕಾರದ ವಿರುದ್ಧ ಸರಣಿ ಆರೋಪಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ರಾಜ್ಯ ಬಿಜೆಪಿ (BJP) ಇದೀಗ ಸರಣಿ ಹೋರಾಟಕ್ಕೆ ಮುಂದಾಗಿದ್ದು, ಇದರ ಭಾಗವಾಗಿ ನಿನ್ನೆಯಿಂದ ಮೈಸೂರಿನಲ್ಲಿ ‘ಜನಾಕ್ರೋಶ ಯಾತ್ರೆ’ಗೆ ಚಾಲನೆ ನೀಡಿದೆ.
ಬಿಜೆಪಿಯ ಈ ಯಾತ್ರೆಗೆ ಕೇಂದ್ರದ ಆದೇಶ ತೀವ್ರ ಮುಜುಗರವನ್ನು ತಂದೊಡ್ಡಿದೆ. ಸಾರ್ವಜನಿಕ ವಲಯದಲ್ಲಿ ಬಿಜೆಪಿಯ ಈ ಪ್ರತಿಭಟನೆಯನ್ನು ಸಾರ್ವಜನಿಕರು ಪ್ರಶ್ನಿಸುವಂತಾಗಿದ್ದು, ಮುಖಭಂಗವನ್ನು ಅನುಭವಿಸುವಂತಾಗಿದೆ.
ಬೆಲೆ ಏರಿಕೆಯ ವಿರುದ್ದ ಬಿಜೆಪಿ ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದರೆ, ದೆಹಲಿಯಿಂದ ಹೊರಬಿದ್ದ ಆದೇಶ, ಪಕ್ಷದ ಜನಾಕ್ರೋಶ ಯಾತ್ರೆಯ ಉದ್ದೇಶವನ್ನೇ ಪ್ರಶ್ನಿಸುವಂತಿದೆ.
ಮೂರು ವಿಚಾರಕ್ಕೆ ಸಂಬಂಧಿಸಿದಂತೆ, ಬಿಜೆಪಿಯು ಪ್ರತಿಭಟನೆ ನಡೆಸಿದರೂ, ಯಾತ್ರೆಯ ಪ್ರಮುಖ ಅಂಶ ಬೆಲೆ ಏರಿಕೆ. ಆದರೆ, ಯಾತ್ರೆಯ ಆರಂಭದ ದಿನವೇ ಬಿಜೆಪಿಗೆ ಮುಜುಗರ ಎದುರಾಗಲು ಕಾರಣ, ಕೇಂದ್ರ ಸರ್ಕಾರದ ಸಿಲಿಂಡರ್ ಬೆಲೆ ಏರಿಕೆ.
ಕೇಂದ್ರ ಸರ್ಕಾರವು ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ಲೀಟರ್ ಒಂದಕ್ಕೆ ಎರಡು ರೂಪಾಯಿ ಸುಂಕವನ್ನು ಹೆಚ್ಚಿಸಿದೆ. ಆದರೆ, ಇದರ ಬಿಸಿ ಜನಸಾಮಾನ್ಯರಿಗೆ ತಟ್ಟುವುದಿಲ್ಲ. ಇದು ತೈಲ ಕಂಪೆನಿಗಳ ಮೇಲೆ ವಿಧಿಸಲಾಗಿರುವ ಸುಂಕ. ಆದರೆ, ವಿಶ್ವ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದರೆ, ಆಗ ಅದು ನೇರವಾಗಿ ಗ್ರಾಹಕರಿಗೆ ತಟ್ಟಲಿದೆ.
ಇನ್ನೊಂದು ಕಡೆ, ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 50 ರೂಪಾಯಿಗೆ ಏರಿಸಿದೆ. ಈ ಏರಿಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಅನ್ವಯವಾಗಲಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ, ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿರುವ ಬಿಜೆಪಿ ನಾಯಕರಿಗೆ ಮುಜುಗರವನ್ನು ತಂದೊಡ್ಡಿದೆ.
ನಾಲ್ಕು ಹಂತದಲ್ಲಿ ನಡೆಯುವ ಜನಾಕ್ರೋಶ ಯಾತ್ರೆ ಸೋಮವಾರ ಆರಂಭಗೊಂಡಿತ್ತು. ಮೇ 3ನೇ ತಾರೀಕು ಈ ಯಾತ್ರೆ ಬೆಂಗಳೂರು ವ್ಯಾಪ್ತಿಯಲ್ಲಿ ಮುಕ್ತಾಯಗೊಳ್ಳಲಿದೆ.
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಈ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈಗ, ಕೇಂದ್ರ ಸರ್ಕಾರ ಸಿಲಿಂಡರ್ ಬೆಲೆ ಏರಿಕೆ ಮಾಡಿರುವುದರಿಂದ, ಕಾಂಗ್ರೆಸ್ ಕೈಗೆ ಅಸ್ತ್ರ ಕೊಟ್ಟಂತಾಗಿದೆ.