ಚೆನ್ನೈ (Harithalekhani): ಪತ್ನಿ ಎದುರೇ ಪತಿಯ ತಲೆ ಕತ್ತರಿಸಿರುವ (beheaded) ಆಘಾತಕಾರಿ ಘಟನೆ ತಮಿಳುನಾಡಿನ ತೆಂಕಸಿ ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು 35 ವರ್ಷದ ಕುಥಾಲಿಂಗಂ ಎಂದು ಗುರುತಿಸಲಾಗಿದೆ.
ತಮ್ಮ ಪತ್ನಿಯೊಂದಿಗೆ ಕುಥಾಲಿಂಗಂ ಕೀಳಪುಲಿಯೂರಿನಲ್ಲಿ ವಾಸಿಸುತ್ತಿದ್ದರು.
ಪೊಲೀಸ್ ವರದಿಗಳ ಪ್ರಕಾರ, ಏ.16ರಂದು ದಂಪತಿ ಸಂಜೆ ತಮ್ಮ ಹಳ್ಳಿಯಲ್ಲಿರುವ ಪಿಡಿಎಸ್ ಅಂಗಡಿಗೆ ಹೋಗಿದ್ದರು. ಈ ವೇಳೆ ನಾಲ್ವರ ಗುಂಪೊಂದು ಅವರ ಮೇಲೆ ಹೊಂಚು ಹಾಕಿ ದಾಳಿ ನಡೆಸಿತ್ತು.
ಪತಿಯ ಮೇಲಿನ ದಾಳಿಯನ್ನು ತಡೆಯಲು ಯತ್ನಿಸಿದಾಗ ಪತ್ನಿಯನ್ನು ತಳ್ಳಿದ ಗುಂಪು ಕುಥಾಲಿಂಗಂ ಕುತ್ತಿಗೆಯನ್ನೇ ಕಡಿದಿದೆ. ಬಳಿಕ ತಲೆಯೊಂದಿಗೆ ಪರಾರಿಯಾಗಿದೆ. ನಂತರ ಮೃತನ ಮನೆಯಿಂದ 8 ಕಿ.ಮೀ ದೂರದಲ್ಲಿರುವ ದೇವಸ್ಥಾನದ ಬಳಿ ರುಂಡ ಪತ್ತೆಯಾಗಿದೆ.
ಘಟನೆಯಿಂದ ದಂಗಾದ ಪತ್ನಿ ಕೂಡಲೇ ತೆಂಕಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಅಪರಿಚಿತ ದಾಳಿಕೋರರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ತನಿಖೆಯ ವೇಳೆ ತಲೆಯು ಕಾಸಿಮಜೋರ್ಪುರಂನ ದೇವಾಲಯವೊಂದರ ಬಳಿ ಪತ್ತೆಯಾಗಿದೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.
ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿ ಮೃತದೇಹ ಮತ್ತು ತಲೆಯನ್ನು ಮರಣೋತ್ತರ ಪರೀಕ್ಷೆಗಾಗಿ ತೆಂಕಾಸಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.
2023ರಲ್ಲಿ ದೇವಸ್ಥಾನದ ಬಳಿ ಒಂದು ಕೊಲೆ ನಡೆದಿದ್ದು, ಆ ಕೊಲೆಯಲ್ಲಿ ಕುಥಾಲಿಂಗಂ ಪ್ರಮುಖ ಆರೋಪಿ. ಹೀಗಾಗಿ ಇದು ಸೇಡಿಗಾಗಿ ಮಾಡಿದ ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಘಟನೆ ಕುರಿತಂತೆ ಕಾಸಿಮಜೋರಪುರಂನ ರಾಮಸುಬ್ರಮಣ್ಯಂ ಅಲಿಯಾಸ್ ರಮೇಶ್ (25 ವರ್ಷ), ಹರಿಹರ ಸುಧನ್ (24 ವರ್ಷ) ಅವರನ್ನು ಗುರುವಾರ ಕುರ್ತಾಲಂನಲ್ಲಿ ಬಂಧಿಸಿದ್ದಾರೆ.
ಈ ಇಬ್ಬರೂ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ತಿರುಚೆಂಡೂರಿನ ಶೆನ್ನಗಂ (40 ವರ್ಷ) ಮತ್ತು ಮಣಿ ಅಲಿಯಾಸ್ ‘ಪುರಾ’ ಮಣಿ (25 ವರ್ಷ) ಅವರನ್ನು ಬಂಧಿಸಿದ್ದಾರೆ.