ಬೆಂಗಳೂರು (Harithalekhani): ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯುವ ಐಪಿಎಲ್ ಪಂದ್ಯದಲ್ಲಿ ಅತಿಥೇಯ ರಾಯಲ್ ಚಾಲೆಂಜರ್ ಬೆಂಗಳೂರು (RCB) ತಂಡವು ಪಂಜಾಬ್ ಕಿಂಗ್ ತಂಡವನ್ನು ಎದುರಿಸಲಿದೆ.
ತಾನು ಆಡಿದ ಒಟ್ಟು 6 ಪಂದ್ಯಗಳ ಪೈಕಿ ಆರ್ಸಿಬಿ 2 ಪಂದ್ಯಗಳನ್ನು ತವರಿನಲ್ಲಿ ಆಡಿದ್ದು, ಆದರೆ ಆ ಎರಡೂ ಪಂದ್ಯಗಳಲ್ಲೂ ಬೆಂಗಳೂರು ತಂಡವು ಸೋತಿದ್ದು, ಪಂಜಾಬ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೇಗಾದರೂ ಗೆದ್ದು ತನ್ನ ಅಭಿಮಾನಿಗಳ ಮನಸ್ಸಿನಲ್ಲಿ ಸಂಭ್ರಮ ಮೂಡಿಸಬೇಕೆಂಬ ತವಕದಲ್ಲಿದೆ.
ಪಂದ್ಯಕ್ಕೆ ಮಳೆ ಭೀತಿ
ಬ್ಯಾಟಿಂಗ್ಸ್ನೇಹಿ ಚಿನ್ನಸ್ವಾಮಿ ಮೈದಾನ ಚಿಕ್ಕದಾಗಿರುವುದರಿಂದ ಭಾರೀ ಪ್ರಮಾಣದ ರನ್ ಹರಿದು ಬರುವುದು ಸಾಮಾನ್ಯ. ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ದೊಡ್ಡ ಮೊತ್ತ ಪೇರಿಸುವ ಸವಾಲು ಎದುರಾಗಲಿದೆ, ಜತೆಗೆ
ಬೌಲರ್ಗಳಿಗೆ ನಿಜವಾದ ಸತ್ವಪರೀಕ್ಷೆ ಎದುರಾಗಲಿದೆ. ವೇಗಿಗಳಿಗಿಂತ ಸ್ಪಿನ್ನರ್ಗಳು ಕೊಂಚ ಹಿಡಿತ ಸಾಧಿಸಬಹುದು. ಈ ಆವೃತ್ತಿಯಲ್ಲಿ ನಡೆದ ಎರಡು ಪಂದ್ಯಗಳಲ್ಲಿಯೂ ಚೇಸಿಂಗ್ ನಡೆಸಿದ ತಂಡವೇ ಗೆದ್ದು ಬೀಗಿತ್ತು. ಹೀಗಾಗಿ ಟಾಸ್ ಕೂಡ ನಿರ್ಣಾಯಕ.
ಮುಂದಿನ 5 ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಭಾರತ ಹವಾಮಾನ ಇಲಾಖೆ ನೀಡಿದೆ, ಹೀಗಾಗಿ ಪಂದ್ಯಕ್ಕೆ ಮಳೆ ಭೀತಿ ತಪ್ಪಿದ್ದಲ್ಲ, ಆದರೆ ಪಂದ್ಯ ನಡೆಯುವ ಸಮಯದಲ್ಲಿ ಎಷ್ಟೇ ಜೋರಾಗಿ ಮಳೆ ಬಂದರೂ ಮಳೆ ನಿಂತ 15ರಿಂದ 20 ನಿಮಿಷದೊಳಗೆ ಮತ್ತೆ ಪಂದ್ಯ ಮುಂದುವರಿಯಲು ಅವಕಾಶ ಮಾಡಿಕೊಡುವ ಸಬ್ ಏರ್ ಸಿಸ್ಟಂ ತಂತ್ರಜ್ಞಾನ ಸೌಲಭ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದೆ.