ದೊಡ್ಡಬಳ್ಳಾಪುರ: ತಾಲ್ಲೂಕಿನ ಪೂರ್ವ ಹಾಡೋನಹಳ್ಳಿಯಲ್ಲಿ ಮಂಗಾರು ಮಳೆ ಸುರಿದಿರುವ ಹಿನ್ನೆಲೆಯಲ್ಲಿ ಹೊನ್ನೇರು ನೇಗಿಲು ಪೂಜೆ ಆಚರಣೆ ನಡೆಯಿತು.
ಯುಗಾದಿ ಹಬ್ಬದ ನಂತರ ಬೀಳುವ ಮೊದಲ ಮಳೆಗೆ ರೈತಾಪಿ ವರ್ಗ ನಮನ ಸಲ್ಲಿಸಿ, ಉಳುಮೆ ಶಾಸ್ತ್ರ ಮಾಡುವುದು ಹಾಡೋನಹಳ್ಳಿಯಲ್ಲಿ ಹಿಂದಿನಿಂದಲೂ ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ.
ಮಳೆ ಬಿದ್ದ ನಂತರ ಯಾವ ಅಕ್ಷರದಿಂದ ಆರಂಭವಾಗುವ ರೈತ ಉಳಬೇಕೆಂದು ಶಾಸ್ತ್ರ ಕೇಳಿ, ನಂತರ ಶಾಸ್ರೋಕ್ತವಾಗಿ ಉಳುಮೆ ಮಾಡುವ ರೈತರ ಹೆಸರನ್ನು ಅಂತಿಮ ಗೊಳಿಸಿ ಉಳುಮೆ ಆರಂಭಿಸಲಾಗುತ್ತದೆ.
ಉಳುಮೆಗೂ ಮುನ್ನ ಊರ ದೇವತೆಗಳಾದ ಚೌಡೇಶ್ವರಿ, ಚೆನ್ನಕೇಶವ, ಸತ್ಯಮ್ಮದೇವತಾ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ನಂತರ ಹೊನ್ನೇರು ನೇಗಿಲು ಪೂಜೆ ನಡೆಸಲಾಗುತ್ತಿದೆ.
ಗ್ರಾಮದ ಗಡಿ ಪರಿಧಿಯ ವಿವಿಧ ಕಡೆಗಳಲ್ಲಿ ಸಾಂಕೇತಿಕವಾಗಿ ಉಳುಮೆ ಮಾಡಿ, ಮತ್ತೆ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ರೈತಾಪಿ ವರ್ಗದ ಜೀವನಾಡಿಯಾದ ನೇಗಿಲಿಗೆ ಗೌರವ ಸಲ್ಲಿಸುವುದು ಒಂದೆಡೆಯಾದರೆ, ಕಾಲ ಕಾಲಕ್ಕೆ ಮಳೆ ಬೆಳೆ ಆಗಿ ಎಲ್ಲರೂ ಸುಭಿ-ಕ್ಷವಾಗಿರಲಿ ಎನ್ನುವ ಆಶಯ ಈ ಆಚರಣೆಯಲ್ಲಿದೆ ಎನ್ನುತ್ತಾರೆ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಎ.ನಾಗರಾಜ್.