ಬೆಂಗಳೂರು: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಪೈಶಾಚಿಕ ಭಯೋತ್ಪಾದಕ ದಾಳಿಯು ಕಣಿವೆ ರಾಜ್ಯದಲ್ಲಿ ಇನ್ನೂ ಅಡಗಿರುವ ಕ್ರೂರತ್ವದ ನೆರಳಿನ ಮತ್ತು ದ್ವೇಷದ ಹೇಯ ದುಃಸ್ವಪ್ನವಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದರು.
ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಈ ದಾಳಿಯು ಮುಗ್ಧ ಜೀವಗಳನ್ನು ಬಲಿ ತೆಗೆದುಕೊಂಡಿತು, ಅನೇಕ ಕುಟುಂಬಗಳ ಆಧಾರ ಸ್ತಂಭಗಳನ್ನು ಛಿದ್ರಗೊಳಿಸಿತು.
ಜಗತ್ತಿಗೆ ಸ್ಪಷ್ಟವಾಗಿ, ದೊಡ್ಡ ದನಿಯಲ್ಲಿ ಹೇಳೋಣ.. ಇದು 2008ರ ಭಾರತವಲ್ಲ!
ಇದು ನವಭಾರತ. ಬಲಿಷ್ಠ ಮತ್ತು ಸುಸ್ಥಿರ ಭಾರತ. ಯಾವ ಬೆದರಿಕೆಗೂ ಮಣಿಯದ ಭಾರತ. ನಾವು ಹೆದರುವುದಿಲ್ಲ, ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುತ್ತೇವೆ. ಈ ದುಷ್ಟದಾಳಿಯನ್ನು ನೆನಪಿಟ್ಟುಕೊಳ್ಳುತ್ತೇವೆ ಹಾಗೂ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆ.
ಉಗ್ರರು ನಮ್ಮ ಮೇಲೆ ದಾಳಿ ನಡೆಸಿ ನಮ್ಮ ಸಹನೆಯನ್ನು ಕೆಣಕಿದ್ದಾರೆ. ಈ ದಾಳಿ ನಮ್ಮನ್ನು ಕುಗ್ಗಿಸುತ್ತದೆ ಎಂದು ಅವರು ಭಾವಿಸಿದ್ದರು. ಅಲ್ಲದೆ, ನಮ್ಮ ಶಕ್ತಿಯನ್ನು ಕಡಿಮೆ ಅಂದಾಜು ಮಾಡಿದ್ದರು. ಇದೆಲ್ಲವನ್ನು ಭಾರತ ಎಂದಿಗೂ ಮರೆಯುವುದಿಲ್ಲ. ಕಿರಾತಕರಿಗೆ ತಕ್ಕ ಶಾಸ್ತಿ ಕಾದಿದೆ.
ನಾವೆಲ್ಲರೂ ಒಂದು. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೆಸೆಯುವ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಸಂಕಲ್ಪ ಹಾಗೂ ಕೇಂದ್ರ ಸರಕಾರದ ದೃಢ ನಿರ್ಧಾರದ ಜತೆ ನಾವೆಲ್ಲರೂ ಇದ್ದೇವೆ ಎಂದರು.

ಪಹಲ್ಗಾಮ್’ನ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟಿರುವ ಕನ್ನಡಿಗರಾದ ಶ್ರೀ ಭರತ್ ಭೂಷಣ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಿಖಿಲ್ ಕುಮಾರಸ್ವಾಮಿ ಅವರು ಗೌರವ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.