ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯ (Ghati Subrahmanya) ಕ್ಷೇತ್ರದಲ್ಲಿ ನಡೆದ ಮಾಂಗಲ್ಯ ಭಾಗ್ಯ ಸಾಮೂಹಿಕ ವಿವಾಹ ಕಾರ್ಯಕ್ರಮದ ಹಿನ್ನಲೆಯಲ್ಲಿ, ವಿವಾಹ ಕಾರ್ಯಕ್ರಮದ ವೇದಿಕೆ ಮುಂಭಾಗ ತಾಲೂಕಿನ ಹಲಸು ಬೆಳೆಗಾರರು ಹಾಗೂ ವ್ಯಾಪಾರಿಗಳಿಂದ ಆಯೋಜಿಸಿದ್ದ ಹಲಸು ಮೇಳಕ್ಕೆ (Jackfruit fair) ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತಾಲೂಕಿನ ಕಸಬಾ ಹಾಗೂ ತೂಬಗೆರೆ ಹೋಬಳಿಯ ವಿವಿಧ ಗ್ರಾಮಗಳ, ಹಳದಿ ಬಣ್ಣದ ಹೆಬ್ಬಲಸು, ಬೇರು ಹಲಸು, ಕೆಂಪು ತೊಳೆಯ ಚಂದ್ರಹಲಸು ಮೊದಲಾದ ಹಲಸಿನ ತಳಿಗಳ ಮಾರಾಟ ನಡೆಯಿತು.

ವಿವಾಹ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಸಾನಿಧ್ಯ ಹಾಗೂ ಆಹಾರ ಹಾಗೂ ಜಿ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಉಪವಿಭಾಗಾಧಿಕಾರಿ ಎನ್.ದುರ್ಗಾಶ್ರೀ, ತಹಶಿಲ್ದಾರ್ ವಿಭಾ ವಿದ್ಯಾ ರಾಥೋಡ್ ಮೊದಲಾದ ಗಣ್ಯರು ಮಾರಾಟ ಮಳಿಗೆ ಬಳಿ ಆಗಮಿಸಿ, ಹಲಸಿನ ಹಣ್ಣುಗಳ ರುಚಿಯನ್ನು ಸವಿದು ಸಂತಸ ಪಟ್ಟರು.
ತೂಬಗೆರೆ ಪ್ರಾಂತ್ಯದ ಹಲಸಿನ ವಿಶೇಷತೆ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಇಲ್ಲಿನ ತಳಿಯ ಹಲಸುಗಳು ವಿಶೇಷ ರುಚಿಯಿವೆ. ರೈತರ ಈ ರೀತಿಯ ಹಲಸು ಮೇಳದ ಆಯೋಜನೆಯಿಂದ ಹೆಚ್ಚಿನ ಪ್ರಯೋಜನಗಳಿವೆ ಎಂದು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಹಲಸು ಮೇಳೆ ಆಯೋಜಿಸುವಂತೆ ಹಲಸು ಬೆಳೆಗಾರರು ಹಾಗೂ ವ್ಯಾಪಾರಿಗಳಿಗಳ ಮನವಿಗೆ ಸ್ಪಂಸಿರುವ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹಲಸು ಮೇಳ ನಡೆಸಲು ಅನುವು ಮಾಡಿಕೊಟ್ಟಿರುವುದು ಸಂತಸದ ವಿಚಾರ. ಮುಂದಿನ ದಿನಗಳಲ್ಲಿ ಹಿಂದೂಪುರ-ಬೆಂಗಳೂರು ರಸ್ತೆ ಬದಿ, ಹಾಗೂ ದೊಡ್ಡಬಳ್ಳಾಪುರ ನಗರದಲ್ಲಿ ಬೃಹತ್ ಹಲಸಿನ ಮೇಳ ನಡೆಸಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎನ್ನುತ್ತಾರೆ ಹಲಸು ಮಾರಾಟಗಾರ ಮಂಜುನಾಥ್.
ಈ ಸಂದರ್ಭದಲ್ಲಿ ಹಲಸು ಬೆಳೆಗಾರ ಜಿ.ರಾಜಶೇಖರ್ ಹಾಗೂ ತೂಬಗೆರೆ ಭಾಗದ ಹಲಸು ಬೆಳೆಗಾರರು ಇದ್ದರು.