ದೊಡ್ಡಬಳ್ಳಾಪುರ: 2025-26 ನೇ ಸಾಲಿನಲ್ಲಿ ಕೃಷಿ ಇಲಾಖೆ ವತಿಯಿಂದ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಡಿ (NMNF) ಜೈವಿಕ ಪರಿಕರ ಸಂಪನ್ಮೂಲ ಕೇಂದ್ರಗಳನ್ನು (BRC) ಸಹಾಯಧನದಡಿ ಸ್ಥಾಪಿಸಲು ಅರ್ಜಿ ಆಹ್ವಾನಿಸಲಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಕೆಸ್ತೂರು, ಅರಳುಮಲ್ಲಿಗೆ, ಹಣಬೆ, ತಿಪ್ಪೂರು, ಚನ್ನಾದೇವಿ ಅಗ್ರಹಾರ, ಕನಸವಾಡಿ, ಹೊಸಹಳ್ಳಿ, ಅರೂಢಿ, ಮೇಲಿನ ಜೂಗಾನಹಳ್ಳಿ ಮತ್ತು ಹಾಡೋನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಒಳಪಡಿಸಲಾಗಿದೆ.
ನೈಸರ್ಗಿಕ ಕೃಷಿ ಕೈಗೊಳ್ಳುವ ರೈತರಿಗೆ ಜೈವಿಕ-ಪರಿಕರಗಳ ಉತ್ಪಾದನೆ ಮತ್ತು ಮಾರಾಟ ಮಾಡಲು ತಾಲ್ಲೂಕಿನಲ್ಲಿ ಮೂರು ಜೈವಿಕ ಪರಿಕರ ಸಂಪನ್ಮೂಲ ಕೇಂದ್ರಗಳನ್ನು (BRC) ಸಹಾಯಧನದಡಿ ಸ್ಥಾಪಿಸಲು ಪ್ರಗತಿ ಪರ ರೈತರು, ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು, PACs, ಸಹಕಾರಿ ಸಂಸ್ಥೆಗಳು ಮತ್ತು ಸ್ಥಳೀಯ ಉದ್ಯಮಿಗಳಿಂದ ಈ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ರೈತರು/ಸಂಸ್ಥೆಯು BRC ಉದ್ಯಮಿಯಾಗಲು ಅರ್ಹತೆಯನ್ನು ಸಾಬೀತುಪಡಿಸುವ ದಾಖಲೆಗಳು, ಪ್ರಸ್ತಾವಿತ BRC ಯ ಸ್ಥಳ, ಸ್ಥಳದ ಸ್ಥಿತಿ, ಪ್ರದೇಶದ ಸಂಕ್ಷಿಪ್ತ ಮಾರುಕಟ್ಟೆ ವಿಶ್ಲೇಷಣೆ ಮತ್ತು ಪ್ರಸ್ತಾವಿತ BRC ಯಲ್ಲಿ ಮಾರಾಟ ಮಾಡಲು ಯೋಜಿಸಲಾದ ನೈಸರ್ಗಿಕ ಕೃಷಿ ಜೈವಿಕ-ಪರಿಕರಗಳ ಮಾರಾಟ, ಉತ್ಪಾದಿಸಲಾಗುವ ನೈಸರ್ಗಿಕ ಕೃಷಿ ಜೈವಿಕ- ಪರಿಕರಗಳ ಪಟ್ಟಿ, ಕಚ್ಚಾ ವಸ್ತುಗಳ ಲಭ್ಯತೆ ಮತ್ತು ಮೂಲದ ವಿವರಗಳು ಹಾಗೂ BRC ಯನ್ನು ನಡೆಸಲು ಇತರ ಗೋಶಾಲೆ, ಗ್ರಾಮ ಪಂಚಾಯತ್ ಅಥವಾ ಪ್ರದೇಶದಲ್ಲಿನ ಯಾವುದೇ ಇತರ ಸಮುದಾಯ ಆಧಾರಿತ ಸಂಸ್ಥೆಯ ಸಹಯೋಗದೊಂದಿಗೆ ನಿರ್ವಹಿಸಲು ಆಸಕ್ತಿ ಇದ್ದಲ್ಲಿ ಸಂಬಂಧಪಟ್ಟ ವಿವರಗಳನ್ನು ನೀಡಬೇಕು.
ಕೃಷಿ ಇಲಾಖೆಯಲ್ಲಿ ಅರ್ಜಿ ಸಲ್ಲಿಸಲು ಹಾಗೂ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯಡಿ ನೈಸರ್ಗಿಕ ಕೃಷಿಯನ್ನು ಕೈಗೊಳ್ಳಲು ಆಸಕ್ತಿ ಇರುವ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನೊಂದಣಿ ಮಾಡಿಕೊಳ್ಳಬಹುದೆಂದು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಡಾ.ರಾಘವೇಂದ್ರ.ಪಿ ತಿಳಿಸಿದ್ದಾರೆ.