ಬೆಂಗಳೂರು: ನಿನ್ನೆ ನಡೆದ RCB ವಿಜಯೋತ್ಸವ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಸಾವನಪ್ಪಿರುವ ಕುರಿತು ಬಿಜೆಪಿ (BJP), ಜೆಡಿಎಸ್ (JDS) ಪಕ್ಷಗಳು ಆಡಳಿತಾರೂಢ ಕಾಂಗ್ರೆಸ್ (congress) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ.
ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ತನ್ನ ಅಧಿಕೃತ ಖಾತೆಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಐಟಿ ಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ವಿದೂಷಕರಿಗೆ ಹೋಲಿಸುವ ಆತುರದಲ್ಲಿ ಇಕ್ಕಟ್ಟಿಗೆ ಸಿಲುಕಿದೆ.
ಹೌದು ಬಿಜೆಪಿ ಕರ್ನಾಟಕ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ, ಫೋಟೋ ಪೋಸ್ಟ್ ಮಾಡಿ, ಪಹಲ್ಗಾಮ್ ಉಗ್ರದಾಳಿ ನಡೆದಾಗ ಕೇಂದ್ರದ ಭದ್ರತಾ ವೈಫಲ್ಯದ ಬಗ್ಗೆ ದಿನನಿತ್ಯ ಕೂಗುಮಾರಿಗಳಂತೆ ಊಳಿಡುತ್ತಿದ್ದ ಕಾಂಗ್ರೆಸ್ ನಾಯಕರು ಈಗೆಲ್ಲಿದ್ದಾರೆ ?
ಪೂರ್ವ ನಿರ್ಧರಿತ ಕಾರ್ಯಕ್ರಮವೊಂದನ್ನು ನಿಭಾಯಿಸಲು ಸಾಧ್ಯವಾಗದ ಕರ್ನಾಟಕ ಪಕ್ಷದ ಶತಮೂರ್ಖರು ಕೇಂದ್ರ ಸರ್ಕಾರದ ನಿಲುವುಗಳನ್ನು ಟೀಕಿಸಿದ್ದರು. ಆರ್ಸಿಬಿ ವಿಜಯಯಾತ್ರೆಯನ್ನು ನಿರ್ವಹಿಸಲು ಸಾಕಷ್ಟು ಸಮಯ ಲಭಿಸಿದ್ದರೂ ಸರ್ಕಾರ ಸಂಪೂರ್ಣ ಎಡವಿದೆ.
ರಾಜ್ಯ ಸರ್ಕಾರದ ಭದ್ರತೆಯ ವೈಫಲ್ಯಕ್ಕೆ ಅಮಾಯಕರು ಬಲಿಯಾಗಿದ್ದಾರೆ. ಭದ್ರತಾ ವ್ಯವಸ್ಥೆಯ ಬಗ್ಗೆ ಕಾಂಗ್ರೆಸ್ ವಿದೂಷಕರು ತುಟಿ ಬಿಚ್ಚದಿರುವುದೇಕೆ? ಎಂದಿದೆ. ಆದರೆ ಇದು ಬಿಜೆಪಿಯ ಅತಿರೇಕದ ವರ್ತನೆ ಎಂದು ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.
ಹೌದು ಇಷ್ಟಕ್ಕೂ ರಾಜ್ಯ ಬಿಜೆಪಿಗೆ ಸಚಿವರಾದ ಸಂತೋಷ್ ಲಾಡ್ ಹಾಗೂ ಪ್ರಿಯಾಂಕ್ ಖರ್ಗೆ ಮೇಲೆ ಏಕಿಷ್ಟು ಆಕ್ರೋಶ ಎಂದರೆ, ಕೇಂದ್ರ ಸರ್ಕಾರದ ಲೋಪದೋಷಗಳನ್ನು ಪ್ರಶ್ನಿಸುತ್ತಾ, ಪ್ರಧಾನಿ ಮೋದಿ ಅವರ ವೈಪಲ್ಯಗಳ ಕುರಿತು ಉತ್ತರ ನೀಡಲಾಗದಂತೆ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ.
ಈ ಕಾರಣ ಅವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ನಾಯಕರು ಬೇಕಾಬಿಟ್ಟಿ ಮಾತನಾಡಿರುವುದು ಎಲ್ಲರಿಗೂ ತಿಳಿದಿದೆ.
ಈಗ ಅಂತದ್ದೇ ಒಂದು ಪ್ರಯತ್ನ ಮಾಡಿ, ಕೇಂದ್ರ ಸರ್ಕಾರದ ಲೋಪವನ್ನು ರಾಜ್ಯ ಬಿಜೆಪಿ ಒಪ್ಪಿಕೊಂಡು ಎಡವಟ್ಟು ಮಾಡಿಕೊಂಡಿದೆ.
ಪಹಲ್ಗಾಮ್ ಉಗ್ರದಾಳಿ ನಡೆದಾಗ ಕೇಂದ್ರದ ಭದ್ರತಾ ವೈಫಲ್ಯದ ಬಗ್ಗೆ ದಿನನಿತ್ಯ ಕೂಗುಮಾರಿಗಳಂತೆ ಊಳಿಡುತ್ತಿದ್ದ ಕಾಂಗ್ರೆಸ್ ನಾಯಕರು ಈಗೆಲ್ಲಿದ್ದಾರೆ ? ಎಂದಿರುವ ರಾಜ್ಯ ಬಿಜೆಪಿ, ಪಹಲ್ಗಾಮ್ ಉಗ್ರದಾಳಿ ಆಕಸ್ಮಿಕವಲ್ಲ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಭದ್ರತಾ ವೈಫಲ್ಯ ಎಂದು ಬಹಿರಂಗ ಪಡಿಸಿಬಿಟ್ಟಿದೆ.
ಇನ್ನೂ ಈ ರೀತಿಯ ಎಡವಟ್ಟುಗಳಿಗೆ ಕಾದಿರುವ ನೆಟ್ಟಿಗರು ಬಿಜೆಪಿ ವಿರುದ್ಧ ಕಾಮೆಂಟ್ ಮೂಲಕ ತಿರುಗೇಟು ನೀಡುತ್ತಿದ್ದು, ತರಾಟೆಗೆ ತೆಗೆದುಕೊಂಡಿದ್ದಾರೆ.
