ದೊಡ್ಡಬಳ್ಳಾಪುರ: ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ – ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆಯಡಿ (Pradhan Mantri Krishi Sinchai Yojana) ರಾಜ್ಯದ್ಯಾಂತ ಅನುಷ್ಠಾನ ಮಾಡಲು 2025-26 ನೇ ಸಾಲಿನಿಂದ 15 ಜಲಾನಯನ ಯೋಜನೆಗಳಿಗೆ ಅನುಮತಿ ದೊರೆತಿದೆ
ಇದರಲ್ಲಿ ದೊಡ್ಡಬಳ್ಳಾಪುತ ತಾಲ್ಲೂಕಿನ 2500 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶವನ್ನು ಉಪಚರಿಸಲು ಕೇಂದ್ರ ಭೂಸಂಪನ್ಮೂಲ ಇಲಾಖೆಯಿಂದ ಅನುಮೋದನೆ ದೊರೆತಿದ್ದು, ರೈತರ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಮದುರೆ ಮತ್ತು ದೊಡ್ಡಬೆಳವಂಗಲ ಹೋಬಳಿಯ ಗ್ರಾಮಗಳ ಜಲಾನಯನ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಸದರಿ ಯೋಜನೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ 18 ಗ್ರಾಮಗಳಲ್ಲಿ ಮಾತ್ರ ಈ ಯೋಜನೆಯಡಿ ಆಯ್ಕೆಯಾಗಿದ್ದು, ವಿಸ್ಕೃತ ಯೋಜನಾ ವರದಿಯನ್ನು ಈ ಮಾಹೆಯಲ್ಲಿ ಸಲ್ಲಿಸಬೇಕಾಗಿರುವುದರಿಂದ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಡಾ. ರಾಘವೇಂದ್ರ. ಪಿ ಅವರು ತಿಳಿಸಿದರು.
ಈ ಯೋಜನೆಯಡಿ ಕೃಷಿ ಹೊಂಡ, ಕಂದಕ ಬದು, ಕೃಷಿ ಅರಣ್ಯ, ಖುಷ್ಕಿ ತೋಟಾಗಾರಿಕೆ ಹಾಗೂ ನಾಲ ಬದು, ತಡೆಅಣೆ, ಪಶುಗಳಿಗೆ ಮೇವು ಅಭಿವೃದ್ದಿ ಹಾಗೂ ಉಚಿತ ಪಶು ಆರೋಗ್ಯ ಶಿಬಿರಗಳ ಆಯೋಜನೆ ಮತ್ತು ಇನ್ನಿತರ ಕಾರ್ಯಕ್ರಮಗಳನ್ನು ಆಯಾ ಗ್ರಾಮಗಳ ರೈತರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗುವುದು.
ಜಲಾನಯನ ಅಭಿವೃದ್ಧಿ ಘಟಕ ಯೋಜನೆಯಲ್ಲಿ ಭೂರಹಿತರು ಸಹ ಸ್ವಸಹಾಯ ಸಂಘ ಹಾಗೂ ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಜೀವನೋಪಾಯ ಕೌಶಲ್ಯ ತರಬೇತಿ ಪಡೆದು, ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.
ಈ ಯೋಜನೆಯ ಕ್ರಿಯಾಯೋಜನೆಯನ್ನು ಎಲ್ಲಾ ಗ್ರಾಮಗಳಲ್ಲಿ ಅನುಷ್ಠಾನ ಮಾಡಲು ಅಲ್ಲಿನ ರೈತರು, ಸ್ವಸಹಾಯ ಗುಂಪುಗಳು ಮತ್ತು ಗ್ರಾಮ ಪಂಚಾಯತಿ ಸಹಭಾಗಿತ್ವದ ಅವಶ್ಯಕತೆ ಇರುತ್ತದೆ ಎಂದರು.
ಈ ವೇಳೆ ಮದುರೆ ಕೃಷಿ ಅಧಿಕಾರಿ ಹರಿಶ್ ಕುಮಾರ್, ದೊಡ್ಡಬೆಳವಂಗಲ ಕೃಷಿ ಅಧಿಕಾರಿ ಗೀತಾ ಎನ್, ಜಲಾನಯನ ಸಹಾಯಕರಾದ ಲಕ್ಷ್ಮೀಶ್ ಮತ್ತು ಮಹೇಂದ್ರರವರು ಹಾಗೂ ಗ್ರಾಮಗಳ ರೈತರು ಇದ್ದರು.