ಗೋವಾ: ಮದುವೆಯಾಗಲು ಬೆಂಗಳೂರಿನಿಂದ ಗೋವಾಕ್ಕೆ ತೆರಳಿದ್ದ ಪ್ರೇಮಿಗಳಿಬ್ಬರ ನಡುವೆ ಉಂಟಾದ ಸಣ್ಣ ಮನಸ್ತಾಪದಿಂದ ಯುವಕ ತನ್ನ ಗೆಳತಿಯನ್ನು ಕೊಂದು ಕಾಡಿನಲ್ಲಿ ಬಿಸಾಕಿ ಬಂದಿರುವ ಘಟನೆ (Murder) ದಕ್ಷಿಣ ಗೋವಾದ ಪ್ರತಾಪ್ ನಗರದ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಉತ್ತರ ಬೆಂಗಳೂರಿನ 22 ವರ್ಷದ ರೋಶಿ ಮೋಸೆಸ್ ಎಂ ಎಂದು ಗುರುತಿಸಲಾಗಿದೆ.
ರೋಶಿ ಕಳೆದ ಕೆಲ ಸಮಯದಿಂದ ಸಂಜಯ್ ಕೆವಿನ್ ಎಂ ಎಂಬಾತನನ್ನು ಪ್ರೀತಿಸುತ್ತಿದ್ದಳಂತೆ, ಅಲ್ಲದೇ ಇಬ್ಬರು ಕೂಡ ಮದುವೆಯಾಗಲೇಬೇಕು ಎಂದು ನಿರ್ಧರಿಸಿದ್ದರು ಎನ್ನಲಾಗಿದೆ.
ಆದರೆ ಪ್ರೀತಿಗೆ ಮನೆಯಲ್ಲಿ ಒಪ್ಪುವುದಿಲ್ಲ ಎಂದು ತಿಳಿದು ಆರೋಪಿ ಸಂಜಯ್ ಜೊತೆಗೂಡಿ ಗೋವಾಕ್ಕೆ ಓಡಿಹೋಗಿದ್ದಾರೆ. ಇದೀಗ ಕೆಲ ದಿನಗಳ ಬಳಿಕ ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಮನಸ್ತಾಪ ಉಂಟಾಗಿದೆ. ಇದರಿಂದ ಇಬ್ಬರ ನಡುವೆ ಗಲಾಟೆಯಾಗಿದೆ.
ಗಲಾಟೆ ಅತಿರೇಕಕ್ಕೆ ತೆರಳಿದಾಗ ಸಿಟ್ಟಾದ ಸಂಜಯ್ ತನ್ನ ಪ್ರೇಯಸಿಯಾದ ರೋಶಿಯನ್ನು ಕತ್ತು ಸೀಳಿ ಕೊಲೆ ಮಾಡಿ, ಮೃತ ದೇಹವನ್ನು ಪ್ರತಾಪ್ ನಗರದ ಅರಣ್ಯ ಪ್ರದೇಶದಲ್ಲಿ ಹಾಕಿದ್ದ.
ಯುವತಿಯ ಮೃತದೇಹ ಕಾಡಿನಲ್ಲಿ ಪತ್ತೆಯಾಗಿದ್ದು, ಪೋಂಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕೊಲೆ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಮೃತದೇಹ ಪತ್ತೆಯಾದ 24 ಗಂಟೆಯ ಒಳಗೆ ಆರೋಪಿಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯ ಬಳಿಕ ಆರೋಪಿ ತನ್ನ ತಪ್ರೊಪ್ಪಿಕೊಂಡಿದ್ದಾನೆ ಎನ್ನಲಾಗಿದ್ದು, ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ. ಇದೀಗ ಬಂದ ಮಾಹಿತಿ ಅನ್ವಯ ನ್ಯಾಯಾಲಯ ಆರೋಪಿಯನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.