ಬೆಂಗಳೂರು: ಅತಿ ಶೀಘ್ರವೇ ಕರ್ನಾಟಕವೂ ಒಳಗೊಂಡಂತೆ ಹಲವು ರಾಜ್ಯಾಧ್ಯಕ್ಷರ ಹೆಸರು ಘೋಷಣೆ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (B.Y.Vijayendra) ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ನೀಡಿದರು. ನಮ್ಮದು ರಾಷ್ಟ್ರೀಯ ಪಕ್ಷ. ಎಲ್ಲರ ಅಭಿಪ್ರಾಯ ಪಡೆದಿದ್ದಾರೆ. ನಾನು ಕಳೆದ ಒಂದೂವರೆ ವರ್ಷದಲ್ಲಿ ಬಹಳ ಯಶಸ್ವಿಯಾಗಿ ಕೆಲಸ- ಸಂಘಟನಾ ಕಾರ್ಯ ಮಾಡಿದ್ದೇನೆ ಎಂಬ ವಿಶ್ವಾಸ ನನ್ನಲ್ಲಿದೆ. ನಮ್ಮ ಕಾರ್ಯಕರ್ತರಲ್ಲೂ ಇದೆ. ನಮ್ಮ ಮುಖಂಡರಲ್ಲೂ ಇದೆ. ಹಾಗಾಗಿ ಒಳ್ಳೆಯದಾಗಲಿದೆ; ನಿಮಗೂ ಒಳ್ಳೆಯದಾಗಲಿದೆ. ನನಗೂ ಒಳ್ಳೆಯದಾಗಲಿದೆ ಎಂದು ನಗುತ್ತ ಉತ್ತರ ಕೊಟ್ಟರು.
ರಾಜ್ಯದ ಬಿಜೆಪಿ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಇನ್ನೂ ನೇಮಕಾತಿ ಆಗುತ್ತಿಲ್ಲ, ಗೊಂದಲಗಳಿದ್ದು ಮುಂದೂಡುತ್ತಿದ್ದಾರೆ ಎಂಬುದು ಯಾವುದೂ ಸತ್ಯವಲ್ಲ. ಈಗ ದೇಶದ 14 ರಾಜ್ಯಗಳ ಅಧ್ಯಕ್ಷರ ಆಯ್ಕೆ ಮುಗಿದಿದೆ. ಈ ವಿಚಾರದಲ್ಲಿ ಘೋಷಣೆಯೂ ಆಗಿದೆ. ಸದ್ಯವೇ, ಅತಿ ಶೀಘ್ರದಲ್ಲೇ ಇನ್ನು ಆರೇಳು ರಾಜ್ಯಗಳ ಅಧ್ಯಕ್ಷರ ಘೋಷಣೆ ಆಗಲಿದೆ ಎಂಬ ಮಾಹಿತಿ ನಮಗೆ ಬರುತ್ತಿದೆ. ಅದಾದ ಬಳಿಕ ರಾಷ್ಟ್ರೀಯ ಅಧ್ಯಕ್ಷರ ಘೋಷಣೆ ಆಗಲಿದೆ.
ಕರ್ನಾಟಕ ಒಂದೇ ಅಲ್ಲ
ಡಿ.ವಿ.ಸದಾನಂದಗೌಡರ ಹೇಳಿಕೆ ಅರ್ಧ ಸತ್ಯ. ಉತ್ತರ ಪ್ರದೇಶ ರಾಜ್ಯದ ಅಧ್ಯಕ್ಷರ ನೇಮಕಾತಿಯೂ ಆಗಿಲ್ಲ. ತೆಲಂಗಾಣ- ಕರ್ನಾಟಕ ರಾಜ್ಯಗಳ ಅಧ್ಯಕ್ಷರ ನೇಮಕಾತಿಯೂ ನಡೆದಿಲ್ಲ ಎಂದು ವಿವರಿಸಿದರು.
ಬಿಜೆಪಿ ಬೂದಿ ಮುಚ್ಚಿದ ಕೆಂಡದಂತಿದೆ ಎಂಬ ಹಿರಿಯರಾದ ಡಿ.ವಿ.ಸದಾನಂದಗೌಡರ ಹೇಳಿಕೆಯ ಬಗ್ಗೆ ಪತ್ರಕರ್ತರು ಗಮನ ಸೆಳೆದರು. ಡಿ.ವಿ.ಸದಾನಂದಗೌಡರು ಹಿರಿಯರಿದ್ದಾರೆ. ನಾಳೆ ಭೇಟಿ ಮಾಡಿ ಅವರ ಜೊತೆ ಚರ್ಚೆ ಮಾಡುತ್ತೇನೆ. ಬೂದಿ ಮುಚ್ಚಿದ ಕೆಂಡದಂತಿದೆ ಎಂಬುದನ್ನು ನಾನು ಒಪ್ಪುವುದಿಲ್ಲ ಎಂದು ತಿಳಿಸಿದರು. ಸಣ್ಣಪುಟ್ಟ ಅಭಿಪ್ರಾಯ ವ್ಯತ್ಯಾಸ ಇರುವುದು ಸಹಜ ಎಂದು ತಿಳಿಸಿದರು.
ಎಫ್ಐಆರ್, ಗೂಂಡಾಗಿರಿಯಂಥ ಗೊಡ್ಡು ಬೆದರಿಕೆಗೆ ಹೆದರುವ ಪ್ರಶ್ನೆ ಇಲ್ಲ
ತುರ್ತು ಪರಿಸ್ಥಿತಿ ಸಂಬಂಧ ಇಂದಿರಾ ಗಾಂಧಿಯವರನ್ನು ಕರಾಳವಾಗಿ ತೋರಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ಸಿನವರು ಮೂರ್ಖರಿದ್ದಾರೆ. ಇಂದಿರಾ ಗಾಂಧಿಯವರು ಈ ದೇಶದ ಪ್ರಧಾನಮಂತ್ರಿ ಆಗಿದ್ದಾಗ 50 ವರ್ಷಗಳ ಹಿಂದೆ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿತ್ತು. ಎಲ್ಲ ಹಕ್ಕುಗಳನ್ನು ಕಿತ್ತುಕೊಳ್ಳುವ ಕೆಲಸ ಆಗಿತ್ತು. ಅನೇಕರನ್ನು ಜೈಲಿಗೆ ಅಟ್ಟಿದ್ದರು. ಮಾಧ್ಯಮಗಳ ಮೇಲೂ ದಬ್ಬಾಳಿಕೆ ಮಾಡಿದ್ದರು. ಅಂಥ ಕರಾಳ ದಿನವನ್ನು ನಿನ್ನೆ ನೆನಪಿಸುವ ದಿನ. ತುರ್ತು ಪರಿಸ್ಥಿತಿಯಂಥ ಕರಾಳ ದಿನಗಳು ಮತ್ತೆ ಮರುಕಳಿಸಬಾರದು ಎಂಬ ಆಶಯ ಇದರ ಹಿಂದಿದೆ.
ಇಂದಿರಾ ಗಾಂಧಿಯವರು ಪ್ರಧಾನಮಂತ್ರಿ ಆಗಿದ್ದಾಗ ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಯಾವ ರೀತಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ ಎಂಬುದನ್ನು ನೆನಪು ಮಾಡಿಕೊಳ್ಳುವ ದಿನ. ಇಂದಿರಾ ಗಾಂಧಿ ಅವರ ನಡವಳಿಕೆ ಹಿಟ್ಲರ್ ನಂತೆ ಎಂದಲ್ಲದೆ ಇನ್ನೇನು ಹೇಳಲು ಸಾಧ್ಯ ಎಂದು ವಿಜಯೇಂದ್ರ ಅವರು ಕೇಳಿದರು.
ನಮ್ಮ ಸಾಮಾಜಿಕ ಜಾಲತಾಣದ ಟ್ವೀಟ್ ಮೇಲಿನ ಸಿದ್ದರಾಮಯ್ಯನವರ ಎಫ್ಐಆರ್, ಗೂಂಡಾಗಿರಿಯಂಥ ಗೊಡ್ಡು ಬೆದರಿಕೆಗೆ ಹೆದರುವ ಪ್ರಶ್ನೆಯೇ ಇಲ್ಲ. ಇಂಥ ನೂರು ಎಫ್ಐಆರ್ ದಾಖಲಿಸಲಿ. ನಾವು, ನಮ್ಮ ಕಾರ್ಯಕರ್ತರು ಅದನ್ನು ಎದುರಿಸಲು ಸಿದ್ಧ ಎಂದು ತಿಳಿಸಿದರು. ಇಂಥ ದಬ್ಬಾಳಿಕೆ, ಗೂಂಡಾಗರ್ದಿ ನಡೆಯಲು ಸಾಧ್ಯವಿಲ್ಲ ಎಂದು ನುಡಿದರು.
ನಾನು ಕೂಡ ದೆಹಲಿಗೆ ಹೋಗಿದ್ದೆ. ಪಕ್ಷದ ಕೆಲವು ಹಿರಿಯ ನಾಯಕರೂ ದೆಹಲಿಗೆ ಹೋಗಿದ್ದಾರೆ. ಕೆಲವರು ಇನ್ನೂ ವಾಪಸ್ ಬರುವುದು ಬಾಕಿ ಇದೆ ಎಂದರು. ಬಹಳ ಬೆಳವಣಿಗೆ ಆಗುತ್ತಿದೆ ಎಂಬುದು ಕಲ್ಪನೆಗಳು ಅಷ್ಟೇ ಎಂದು ತಿಳಿಸಿದರು.
ದೆಹಲಿಗೆ ನಾನು ವೈಯಕ್ತಿಕ ಕಾರಣಕ್ಕಾಗಿ ಹೋಗಿದ್ದೆ. ರಾಷ್ಟ್ರೀಯ ನಾಯಕರನ್ನಾಗಲೀ, ಯಾರನ್ನೂ ಭೇಟಿ ಮಾಡಿಲ್ಲ. ವೈಯಕ್ತಿಕ ಕೆಲಸಕ್ಕೆ ಹೋಗಿದ್ದೆ. ಅದನ್ನು ಮುಗಿಸಿಕೊಂಡು ಬಂದಿದ್ದೇನೆ ಎಂದು ನುಡಿದರು.
ಆರ್.ಅಶೋಕ್ ಅವರ ಭೇಟಿ ಕುರಿತು ಕೇಳಿದಾಗ, ‘ಅವರು ವಿಪಕ್ಷ ನಾಯಕರಿದ್ದಾರೆ. ವಿಪಕ್ಷ ನಾಯಕರು ದೆಹಲಿಗೆ ಹೋಗಬಾರದು; ನಮ್ಮ ಮುಖಂಡರನ್ನು ಭೇಟಿ ಮಾಡಬಾರದು ಎಂದರೆ..’ ಎಂದು ನಗುತ್ತ ಮರುಪ್ರಶ್ನೆ ಹಾಕಿದರು.
ಆರ್.ಅಶೋಕ್ ಅವರು ವಿಪಕ್ಷ ನಾಯಕರಾಗಿ ಬಹಳ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದರ ಬಗ್ಗೆ ಶಾಸಕರಿಗೂ ತೃಪ್ತಿ ಇದೆ. ಆದರೆ, ಮಾಧ್ಯಮದಲ್ಲಿ ವಿಪಕ್ಷ ನಾಯಕರ ಬದಲಾವಣೆ ಬಗ್ಗೆ ಚರ್ಚೆ ಆಗುತ್ತಿದೆ ಎಂಬ ಚರ್ಚೆ ನಡೆದಿದೆ. ಇದು ಖಂಡಿತ ಸರಿಯಲ್ಲ. ಅದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಹಿಂದಿನಿಂದ ಅಸಮಾಧಾನ ತೋಡಿಕೊಳ್ಳುತ್ತಿದ್ದವರು ಈಗ ಪಕ್ಷದಿಂದ ಹೊರಗಿದ್ದಾರೆ. ಪಕ್ಷವಿರೋಧಿ ಚಟುವಟಿಕೆ ಮಾಡಿದವರೂ ಪಕ್ಷದಿಂದ ಹೊರಗಿದ್ದಾರೆ. ಇನ್ನೂ ಕೆಲವರು ತಮ್ಮ ಸಣ್ಣಪುಟ್ಟ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
ಮೊನ್ನೆ ನಾನು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು, ಇನ್ನೂ ಕೆಲವು ಮುಖಂಡರು ಏನೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸಬೇಕೆಂದು ಯೋಚಿಸಿದ್ದು, ಈಗಾಗಲೇ ಪ್ರಲ್ಹಾದ್ ಜೋಶಿಯವರು ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಎಲ್ಲವೂ ಸರಿಯಾಗಲಿದೆ. ಆತಂಕ ಪಡುವ ಯಾವುದೇ ವಿಚಾರ ಇಲ್ಲ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದರು.
ರಾಜ್ಯದ ಜನರು ಕಾಂಗ್ರೆಸ್ ಸರಕಾರದ ಬಗ್ಗೆ ಛೀ, ಥೂ ಎಂದು ಉಗಿಯುತ್ತಿದ್ದಾರೆ. ಇವತ್ತು ರಾಜ್ಯದ ಮುಖ್ಯಮಂತ್ರಿಗಳು ಬಿ.ಆರ್.ಪಾಟೀಲ್, ರಾಜು ಕಾಗೆಯವರನ್ನು ಕರೆದು ಸಮಾಧಾನ ಪಡಿಸಿದರೆ ಎಲ್ಲವೂ ಸರಿಯಾಗಿದೆ ಎಂದು ಅರ್ಥವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಬಿ.ಆರ್.ಪಾಟೀಲ್ ಅವರು ಒಬ್ಬ ಹಿರಿಯ ಶಾಸಕರು; ಬಡವರಿಗೆ ಮನೆ ಕೊಡಲು 10 ಸಾವಿರ ಲಂಚ ಕಿತ್ತುಕೊಳ್ಳುವ ಕುರಿತಂತೆ ನೇರ ಆರೋಪ ಮಾಡಿದ್ದಾರೆ. ಸಚಿವರು ಉಡಾಫೆಯಾಗಿ ಮಾತನಾಡುವುದನ್ನು ಬಿಡಬೇಕೆಂದು ಆಗ್ರಹಿಸಿದರು.
ಇವರ ದರ್ಬಾರ್ ಬಹಳ ದಿನ ನಡೆಯದು..
ಇವರ ಯೋಗ್ಯತೆಗೆ ಅಭಿವೃದ್ಧಿ ಕೆಲಸ ಮಾಡಲು ಆಗುತ್ತಿಲ್ಲ. ಮಳೆ ಹೆಚ್ಚಾಗಿ ರೈತರು ಪರದಾಡುತ್ತಿದ್ದಾರೆ. ಜಿಲ್ಲೆಗಳು- ತಾಲ್ಲೂಕುಗಳಲ್ಲಿ ಗೊಬ್ಬರ ಸರಿಯಾಗಿ ಸಿಗುತ್ತಿಲ್ಲ. ಬಿತ್ತನೆ ಬೀಜವೂ ಸಿಗುತ್ತಿಲ್ಲ. ಇದನ್ನು ಗಮನಿಸುವುದನ್ನು ಬಿಟ್ಟು, ಇವರು ಹುಡುಗಾಟಿಕೆ- ಭ್ರಷ್ಟಾಚಾರ ಮಾಡಿಕೊಂಡು, ಅಧಿಕಾರದ ಅಮಲಿನಲ್ಲಿ ತೇಲುತ್ತಿದ್ದಾರೆ; ಇವರ ದರ್ಬಾರ್ ಬಹಳ ದಿನ ನಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.