Harithalekhani: ಒಮ್ಮೆ ಒಂದು ಶಾಲೆಯಲ್ಲಿ ಮಕ್ಕಳಿಗೆ ಮೇಷ್ಟ್ರು “ಮಕ್ಕಳೆ ನೀವು ಮರದ ಯಾವ ಭಾಗವಾಗಲು ಇಷ್ಟಾ ಪಡುತ್ತಿರಿ? ಮತ್ತು ಯಾಕೆ?” ಎಂದು ಕೇಳಿದರು. ಒಬ್ಬ ಹುಡುಗ ಎದ್ದು ನಿಂತು “ಸರ್ ನಾನು ಎಲೆಯಾಗೋಕೆ ಇಷ್ಟಪಡ್ತೀನಿ .. ಏಕೆಂದರೆ ಎಲೆ ದಣಿದು ಬಂದವರಿಗೆ ನೆರಳು, ಎಲ್ಲಾ ಜೀವಿಗಳಿಗೂ ಉಸಿರು, ಹಣ್ಣಾಗಿ ಉದುರಿದರೆ ಕೊಳೆತು ಗೊಬ್ಬರವಾಗುತ್ತದೆ. ಎಂದು ಹೇಳಿದ.
ಮೇಷ್ಟ್ರು – ಶಭಾಷ್, ಕೂತ್ಕೋ. ಮೂಲೆಯವ್ನು ನೀನು ಹೇಳು ಏನಾಗ್ತಿಯಾ ?
ಮೂಲೆಯ ಹುಡುಗ – ಸರ್ ನಾನು ಹೂವಾಗ್ತೀನಿ, ಏಕೆಂದರೆ ಹೂವನ್ನು ಎಲ್ಲರೂ ಮೆಚ್ತಾರೆ, ಅದು ಬೀರುವ ಸುಗಂಧವನ್ನು ಎಲ್ಲರೂ ಇಷ್ಡಪಡ್ತಾರೆ .. ದೇವರಿಗೂ ಕೂಡಾ ಹೂವಿನಿಂದಲೇ ಅಲಂಕಾರ ಮಾಡ್ತಾರೆ ಎಂದ.
ಮೇಷ್ಟ್ರು – ಗುಡ್. ಲಾಸ್ಟ್ ಬೆಂಚು, ನೀನ್ ಏನಾಗ್ತೀಯೋ?
ಲಾಸ್ಟ್ ಬೆಂಚು – ಸರ್ ಹಣ್ಣಾಗಲು ಬಯಸ್ತೀನಿ. ಏಕೆಂದರೆ ಹಣ್ಣು ರುಚಿರುಚಿಯಾಗಿ, ಚಿಕ್ಕಮಕ್ಳು ದೊಡ್ಡವ್ರು ಎಲ್ರೂ ಇಷ್ಟಪಡ್ತಾರೆ. ಹಸಿದವರಿಗೆ ಆಹಾರ, ಮಾರಿದರೆ ದುಡ್ಡು, ಕಷ್ಟದಲ್ಲಿ ಸಹಾಯವಾಗುತ್ತದೆ ಎಂದ.
ಮೇಷ್ಟ್ರು – ವೆರಿಗುಡ್, ಏಯ್ ಮುಂದಿನವ್ನು , ನೀನ್ ಏನಾಗ್ತೀಯೋ?
ಹುಡುಗ – ಸರ್ ರೆಂಬೆಯಾಗೋಕೆ ಇಷ್ಟಪಡ್ತೀನಿ, ಏಕೆಂದರೆ ರೆಂಬೆಗಳಲ್ಲಿ ಪಕ್ಷಿಗಳೆಲ್ಲ ಕೂತು ವಿಶ್ರಾಂತಿ ಪಡ್ಕೊತವೆ, ಗೂಡುಗಳನ್ನು ಕಟ್ಟಿ ಮರಿಗಳನ್ನು ಸಾಕ್ತವೆ, ರೆಂಬೆ ಒಣಗಿ ಬಿದ್ದರೆ ಅದನ್ನೇ ಒಲೆಗೆ ಒಟ್ಟೋದಿಕ್ಕೂ ಬಳಸ್ತೀವಿ ಎಂದ.
ಮೇಷ್ಟ್ರು – ಫೈನ್, ಕೂತ್ಕೋ. ಕೈ ಎತ್ತಿದ್ದೀಯಲ್ಲ, ನೀನ್ ಆಗೋಕೆ ಇಷ್ಟಪಡ್ತೀಯಾ?
ಕೈ ಎತ್ತಿದವನು ಸಂಕೋಚದಿಂದ ಎದ್ದು ನಿಂತು – ಸರ್ ನಾನು ಬೇರಾಗಲು ಇಷ್ಟಪಡ್ತೀನಿ. ಬೇರು ಭೂಮಿಯೊಳ್ಗಡೆ ಗಟ್ಟಿ ಮಣ್ಣನ್ನು ಸೀಳ್ಕೊಂಡು ಕಷ್ಟದಿಂದ ಬೆಳೆಯುತ್ತೆ. ಬೇರಿಗೆ ಬೆಟ್ಟಗುಡ್ಡ, ಸೂರ್ಯ, ಚಂದ್ರ, ನಕ್ಷತ್ರಗಳು, ಮನುಷ್ರ್ಯು, ಪ್ರಾಣಿಪಕ್ಷಿಗಳು, ಮನೆಗಳು ಒಂದೂ ಕಾಣಿಸದೆ, ಅದು ಯಾವುದಕ್ಕೂ ಕೊರಗದೆ ತನ್ನ ಪಾಡಿಗೆ ಸತ್ವ ಹೀರಿ ಗಿಡವನ್ನು ಬೆಳೆಸುತ್ತದೆ.
ನಾನೂ ಕೂಡಾ ಪ್ರಪಂಚ ನೋಡಿಲ್ಲ, ಬೇರೂ ಕೂಡೂ ಪ್ರಪಂಚ ನೋಡಿಲ್ಲ. ಬೇರು ಕತ್ತಲಿನಲ್ಲೇ ಹುಟ್ಟಿ ಕತ್ತಲಿನಲ್ಲೇ ಕಮರಿ ಹೋಗುತ್ತದೆ. ಬೇರಿನಂತೆ ನಾನೂ ಕೂಡಾ ಅಡೆತಡೆಗಳನ್ನು ಎದುರಿಸಿ ಬೇಳೆಯಬೇಕು. ದುಃಖವಾದಾಗಲೆಲ್ಲ ಬೇರನ್ನು ನೆನೆದು ಸಮಾಧಾನ ಮಾಡ್ಕೊತಿನಿ ಎಂದ.
ಮೇಷ್ಟ್ರು ಅತ್ಯಾನಂದದಿಂದ ಆ ಅಂಧ ಹುಡುಗನ ಕೆನ್ನೆಗಳನ್ನು ಚಿವುಟಿ ಮುದ್ದಿಸಿ ಭಾವುಕರಾದರು.
ಕೃಪೆ; ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಿಲ್ಲ)