ಬೆಂಗಳೂರು: “ಬಿಹಾರ ಚುನಾವಣೆಯಲ್ಲಿ (Bihar Election) ಏನೇ ಫಲಿತಾಂಶ ಬಂದರೂ ಮತದಾರರ ತೀರ್ಪಿಗೆ ನಾನು ತಲೆಬಾಗುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.
ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.
ಬಿಹಾರ ಚುನಾವಣಾ ಫಲಿತಾಂಶದ ಬಗ್ಗೆ ಕೇಳಿದಾಗ, “ಜನ ತಮ್ಮ ಆದೇಶ ನೀಡಿದ್ದು, ಅದನ್ನು ಪಾಠವಾಗಿ ಪರಿಗಣಿಸುತ್ತೇವೆ. ಮುಂದಿನ ಬಾರಿ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಮೈತ್ರಿಕೂಟಕ್ಕೆ ಹೊಸ ತಂತ್ರಗಾರಿಕೆ ರೂಪಿಸುತ್ತೇವೆ” ಎಂದು ತಿಳಿಸಿದರು.
ಬಿಹಾರದಲ್ಲಿ ಎನ್ ಡಿಎ ಸರ್ಕಾರ ಮಹಿಳೆಯರ ಖಾತೆಗೆ 10 ಸಾವಿರ ಹಣ ಹಾಕಿದ್ದು, ಮಹಿಳೆಯರ ಮತ ಪ್ರಮಾಣ 11% ಏರಿಕೆಯಾಗಿದೆ. ಇದು ಫಲಿತಾಂಶಕ್ಕೆ ಕಾರಣವೇ ಎಂದು ಕೇಳಿದಾಗ, “ನಾನು ಇನ್ನು ವಿವರವಾಗಿ ಪರಿಶೀಲನೆ ಮಾಡುತ್ತೇನೆ. ಆನಂತರ ಪ್ರತಿಕ್ರಿಯೆ ನೀಡುತ್ತೇನೆ” ಎಂದು ತಿಳಿಸಿದರು.
ತುಂಗಭದ್ರಾ ಐಸಿಸಿ ಸಭೆ ಬಗ್ಗೆ ಕೇಳಿದಾಗ, “ತುಂಗಭದ್ರಾ ಅಣೆಕಟ್ಟಿನ ಗೇಟ್ ಗಳ ದುರಸ್ಥಿ ನಡೆಯುವವರೆಗೂ ಇರುವ ನೀರನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂಬ ವಿಚಾರದ ಬಗ್ಗೆ ಅವರಿಗೆ ತೀರ್ಮಾನ ಮಾಡಲು ಬಿಟ್ಟಿದ್ದೇವೆ. ಉಳಿದಂತೆ ಕಾಲುವೆಗಳ ದುರಸ್ಥಿ ಕಾಮಗಾರಿ ಕೈಗೆತ್ತಿಕೊಳ್ಳಲು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದರು.