ಕೆ.ಎಂ.ಸಂತೋಷ್, ಆರೂಢಿ: ಬಿ.ವೈ. ವಿಜಯೇಂದ್ರ (B.Y. Vijayendra) ಕರ್ನಾಟಕ ರಾಜ್ಯದ ಭಾರತೀಯ ಜನತಾ ಪಾರ್ಟಿಯ (BJP) ಅಧ್ಯಕ್ಷರಾಗಿ ಇಂದಿಗೆ ಎರಡು ವರ್ಷಗಳನ್ನು ಪೂರೈಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಗನ್ನಾಥ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಕ್ಷದ ಹಿರಿಯರ ಸಮ್ಮುಖದಲ್ಲಿ ವಿಜಯೇಂದ್ರ ಗೌರವಿಸಿ ಶುಭಕೋರಲಾಯಿತು.
ರಾಜ್ಯ ಬಿಜೆಪ ಅಧ್ಯಕ್ಷರಾಗಿ ವಿಜಯೇಂದ್ರ. ಮಾಡಿದ್ದೇನು..?
ಬಿ.ವೈ. ವಿಜಯೇಂದ್ರ ಅವರು ತಮ್ಮ ಅಧ್ಯಕ್ಷತೆಯಲ್ಲಿ ಬೂತ್ ಅಧ್ಯಕ್ಷರ ಮನೆಗೆ ಭೇಟಿ ಪ್ರಾರಂಭಿಸಿದ್ದರು.
ಕರ್ನಾಟಕ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ತಳಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಕಳೆದ 2ವರ್ಷಗಳಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಈಗಾಗಲೇ ಭೇಟಿ ನೀಡಿರುತ್ತಾರೆ ಎಂಬುದು ವಿಜಯೇಂದ್ರ ಬೆಂಬಲಿಗರ ಮಾತು.
ವಿಜಯೇಂದ್ರ ನೇತೃತ್ವದಲ್ಲಿ ಕೈಗೊಂಡ ಮೈಸೂರು ಮುಡಾ ಹಗರಣದ ಪಾದಯಾತ್ರೆ, ವಾಲ್ಮೀಕಿ ಹಗರಣ ಕುರಿತಾದ ಹೋರಾಟ, ಬೆಲೆ ಏರಿಕೆ ಖಂಡಿಸಿ ನಡೆಸಿದ ಅಹೋರಾತ್ರಿ ಧರಣಿ, ಬೆಲೆ ಏರಿಕೆ ವಿರುದ್ಧ ರಾಜ್ಯಾದ್ಯಂತ ಕೈಗೊಂಡ ಜನಾಕ್ರೋಶ ಯಾತ್ರೆ, ಕಬ್ಬು ಬೆಳೆಗಾರರ ಹೋರಾಟ, ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನುದಾನದ ದುರ್ಬಳಕೆಯ ವಿರುದ್ಧ ಹೋರಾಟ, ರಾಜ್ಯ ಸರ್ಕಾರದ ಶೂನ್ಯ ಅಭಿವೃದ್ಧಿಯ ವಿರುದ್ಧ ನಡೆಸಿದ ಹೋರಾಟಗಳ ಮೂಲಕ ಜನ ಸಾಮಾನ್ಯರ ದೈನಂದಿನ ಸಮಸ್ಯೆಗಳ ಕುರಿತು ಸರ್ಕಾರದ ಗಮನಸೆಳೆದು ಕಾಂಗ್ರೆಸ್ ಸರ್ಕಾರದ ಜನವಿರೋಧಿ ಆಡಳಿತದ ವಿರುದ್ಧ ಹೋರಾಟ ರೂಪಿಸಿದ್ದಾರೆ ಆದರೆ ಇದರಲ್ಲಿ ಎಷ್ಟರಮಟ್ಟಕ್ಕೆ ಯಶಸ್ವಿಯಾದರು, ಸರ್ಕಾರದ ಮೇಲೆ ಯಾವ ಪರಿಣಾಮ ಬೀರಿತು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
ವಿಜಯೇಂದ್ರರ ಯಶಸ್ವಿ ನೇತೃತ್ವ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೆಚ್ಚಿನ ಮನ್ ಕೀ ಬಾತ್ ಕಾರ್ಯಕ್ರಮದ ಅನುಷ್ಠಾನದಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿರುವುದಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಜಗನ್ನಾಥ ಭವನದಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ಯಶಸ್ವಿಯಾಗಿ ಎರಡು ವರ್ಷ ಪೂರೈಸಿ 3ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ, ಕೋರ್ ಕಮಿಟಿ ಸದಸ್ಯ ಮತ್ತು ಮಾಜಿ ಸಚಿವ ಬಿ. ಶ್ರೀರಾಮುಲು, ವಿಧಾನಸಭೆಯ ಮುಖ್ಯ ಸಚೇತಕ ದೊಡ್ಡನಗೌಡ ಹೆಚ್. ಪಾಟೀಲ್, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಮತ್ತು ಪಕ್ಷದ ಪ್ರಮುಖರು ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿ ಶುಭ ಹಾರೈಸಿದರು.
ವಿಜಯೇಂದ್ರ ನಾಯಕತ್ವದಲ್ಲಿ ಬಣಗಳಾಗಿ ಹೊಡೆದು ಹೋದ ಬಿಜೆಪಿ..!
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ವಿರೋಧ ಪಕ್ಷದ ನಾಯಕನಾಗಿ ಆರ್. ಅಶೋಕ ಆಯ್ಕೆಗೆ ಅನೇಕ ಬಿಜೆಪಿ ನಾಯಕರು, ಕಾರ್ಯಕರ್ತರ ಆಕ್ಷೇಪವಿದೆ. ಇದಕ್ಕೆ ಪುಷ್ಟಿ ನೀಡುವಂತೆ ವಿಜಯೇಂದ್ರ ರಾಜೀನಾಮೆಗೆ ಅನೇಕ ಶಾಸಕರು ಒತ್ತಾಯಿಸುತ್ತಿರುವ ವಿಚಾರ ಈಗಾಗಲೇ ಪಕ್ಷದೊಳಗೆ ಬಹಳ ಚರ್ಚೆಯಾಗುತ್ತಿದೆ.
ಪಕ್ಷದ ನಿಷ್ಠಾವಂತರಾದ ಕೆಎಸ್. ಈಶ್ವರಪ್ಪ, ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ, ಎರಡು ಬಾರಿ ಸಂಸದರಾಗಿದ್ದ ಪ್ರತಾಪ್ ಸಿಂಹ ಟಿಕೇಟ್ ತಪ್ಪಿಸಿದ ಆಕ್ರೋಶ, ಕಾಂಗ್ರೆಸ್ ಮುಖಂಡರ ಜೊತೆ ಒಳ ಒಪ್ಪಂದ ಎಂಬ ಆರೋಪ, ಉಪಚುನಾವಣೆಗಳಲ್ಲಿ ಸೋಲು, ಸ್ಥಳೀಯ ಬಿಜೆಪಿ ನಾಯಕರ ಬಿಟ್ಟು ಪರ್ಯಾಯ ನಾಯಕರಿಗೆ ಮಣೆ ಹಾಕುತ್ತಾರೆ ಎಂಬ ಡಾ.ಕೆ. ಸುಧಾಕರ್ ಆರೋಪ ವಿಜಯೇಂದ್ರ ಅವರಿಗೆ ಹಿನ್ನಡೆಯನ್ನು ಉಂಟು ಮಾಡಿದೆ.
ವಿಜಯೇಂದ್ರ ವಿರುದ್ಧ ಬಿಜೆಪಿ ಹಿರಿಯ ನಾಯಕರ ಸಮರ
ಮಾಜಿ ಕೇಂದ್ರ ಸಚಿವ ಸದಾನಂದ ಗೌಡ, ಮಾಜಿ ಸಚಿವ ಅರವಿಂದ ಲಿಂಗಾವಳಿ, ಕುಮಾರ್ ಬಂಗಾರಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ, ಹಾಲಿ ಸಂಸದ ಡಾ.ಸುಧಾಕರ್, ಮಾಜಿ ಶಾಸಕ ರಮೇಶ್ ಜಾರಕ್ಕಿಹೊಳಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕೆ.ಎಸ್. ಈಶ್ವರಪ್ಪ ಸೇರಿದಂತೆ ಅನೇಕ ನಾಯಕರು ವಿಜಯೇಂದ್ರ ವಿರುದ್ಧ ಕೆರಳಿ ಪದೇ ಪದೇ ಹೇಳಿಕೆ ನೀಡಿರುವುದು ಎಲ್ಲರಿಗೂ ತಿಳಿದ ವಿಚಾರ.
ಅದರಲ್ಲಿಯೂ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಮಯ ಸಿಕ್ಕಾಗಲೆಲ್ಲ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಕೈಯಿಂದ ಬಿಜೆಪಿ ಮುಕ್ತವಾದರೆ ಮಾತ್ರ ರಾಜ್ಯ ಬಿಜೆಪಿ ಉದ್ಧಾರವಾಗುತ್ತದೆ ಎಂದು ಬಹಿರಂಗವಾಗಿಯೇ ಹೇಳುತ್ತಲೇ ಇರುತ್ತಾರೆ.
ಕಾರ್ಯಕರ್ತರ ಬೇಸರ
ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತದಿಂದ ಕಾರ್ಯಕರ್ತರು ಕಂಗಾಲಾಗಿ ಹೋಗಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ ನಿಲುವಿನ ವಿರುದ್ದ ಬಣ ಬಡಿದಾಟಕ್ಕೆ ಕೇಸರಿ ನಾಯಕರು ಚದುರಿಹೋಗಿದ್ದಾರೆ.
ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಇಂದಿಗೆ ಎರಡು ವರ್ಷ ಕಳೆದಿದ್ದು, ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು ಎರಡುವರೆ ವರ್ಷವಾಗುತ್ತಿದೆ. ಆದರೆ ಈವರೆಗೆ ಪ್ರಧಾನಿ ಮೋದಿ ಜಪ, ಬೇರೆ ರಾಜ್ಯಗಳಲ್ಲಿನ ಬಿಜೆಪಿ ವಿಜಯವನ್ನು ಲಾಡು ಹಂಚಿ ಸಂಭ್ರಮಿಸುವುದು ಬಿಟ್ಟರೆ, ರಾಜ್ಯ ಬಿಜೆಪಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾಧ್ಯವಾಗುತ್ತಿಲ್ಲ.
ರಾಜ್ಯ ಸರ್ಕಾರದ ವಿರುದ್ಧ ಅಭಿವೃದ್ಧಿಗೆ ಅನುದಾನ ಕೊರತೆ, ಬಡವರ ಪಡಿತರ ಚೀಟಿ ಕಡಿತ, ವಿದ್ಯುತ್ ಸಂಪರ್ಕಕ್ಕೆ ದುಬಾರಿ ದರ ಸೇರಿದಂತೆ ರೈತರ ಅನೇಕ ಸಮಸ್ಯೆ, ಅನೇಕ ಯೋಜನೆಗಳಿಗೆ ಅನುದಾನ ಕಡಿತ ಸೇರಿದಂತೆ ಮೂಲ ಸಮಸ್ಯೆಗಳನ್ನು ಎಕ್ಕಿತೆಗೆದು ಸರ್ಕಾರವನ್ನು ಇಕಟ್ಟಿಗೆ ಸಿಲುಕಿಸಲು ಬಹುತೇಕ ವಿಫಲವಾಗಿದೆ.
ಇವುಗಳ ಬದಲಾಗಿದೆ ಜನವರಿ ಕ್ರಾಂತಿ, ಅಕ್ಟೋಬರ್ ಕ್ರಾಂತಿ, ನವೆಂಬರ್ ಕ್ರಾಂತ್ರಿ, ಡಿಸೆಂಬರ್ ಕ್ರಾಂತಿ ಎನ್ನುತ್ತಾ ಕಾಲ ಕಳೆಯುತ್ತಿದ್ದಾರೆಯೇ ಹೊರತು, ಮುಂಬರುವ ಚುನಾವಣೆಗೆ ಪಕ್ಷವನ್ನು ಸಂಘಟಿಸಲು ಸಂಪೂರ್ಣ ವಿಫಲವಾಗಿದ್ದಾರೆ.
ವಾಸ್ತವಾಗಿ ರಾಜ್ಯದಲ್ಲಿ ನಗರ ಪ್ರದೇಶ ಹೊರತು ಪಡಿಸಿದರೆ ಗ್ರಾಮಾಂತರ ಪ್ರದೇಶಗಳಲ್ಲಿ ಬಿಜೆಪಿ ಪರ ಒಲವು ಕಡಿಮೆ. ಆದಾಗ್ಯೂ ಬಿಜೆಪಿ – ಜೆಡಿಎಸ್ ಮೈತ್ರಿ ಹೊಂದಿದ್ದು, ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸದೆ, ಮಿತ್ರ ಪಕ್ಷ ಜೆಡಿಎಸ್ ನಾಯಕರಿಗೆ ಗಾಳ ಹಾಕಿ, ಜೆಡಿಎಸ್ ಮುಖಂಡರ ಅಸಮಾಧಾನಕ್ಕೂ ಕಾರಣವಾಗುತ್ತಿದೆ.
ಡಿ.ಕೆ. ಶಿವಕುಮಾರ್ ಸಿಎಂ ಅಭ್ಯರ್ಥಿ ಆದರೆ ರಾಜ್ಯ ಬಿಜೆಪಿ ಗತಿಯೇನು..?
ಈಗಾಗಲೆ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಮಹಿಳೆಯರ ಮನಗೆದ್ದಿರುವ ಸಿದ್ದು, ಡಿಕೆ ಜೋಡಿ, ಮುಂಬರುವ ಚುನಾವಣೆಗ ಯಾವ ಗ್ಯಾರಂಟಿ ಅಸ್ತ್ರ ಬಿಡುತ್ತದೆಯೋ..? ಎಂಬ ಕುತೂಹಲ ಎಲ್ಲರಲ್ಲಿದೆ.
ಇದರ ನಡುವೆ ಬಹುತೇಕ ಈ ಅವಧಿಯಲ್ಲಿ ಸಿಎಂ ಆಸೆ ಕೈಬಿಟ್ಟಂತೆ ಕಾಣುತ್ತಿರುವ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಮುಂಬರುವ ಚುನಾವಣೆಗೆ ಸಿಎಂ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಿ ಬಿಟ್ಟರೆ ಗತಿಯೇನು.?
ಈಗಾಗಲೇ ನಾಯಕತ್ವದ ಕೊರತೆ, ಬಣಬಡಿದಾಟ, ನಿಷ್ಠಾವಂತ ಕಾರ್ಯಕರ್ತರು ಅಂತರ ಕಾಯ್ದುಕೊಂಡಿರುವುದರಿಂದ ಕರ್ನಾಟಕ ಬಿಜೆಪಿ ಬಹುತೇಕ ಬಸವಳಿಯುತ್ತಿದೆ. ಜೆಡಿಎಸ್ ಜೊತೆ ಮೈತ್ರಿ ಹೊಂದಿದ್ದರು, ತಳಮಟ್ಟದಲ್ಲಿ ಕಾರ್ಯಕರ್ತರ ವಿಶ್ವಾಸಪಡೆಯಲು ಕಾರ್ಯಕ್ರಮ ರೂಪಿಸದೆ ಉಳಿದಿದೆ ಎಂಬ ಬೇಸರ ಬಿಜೆಪಿ ಕಾರ್ಯಕರ್ತರದ್ದಾಗಿದೆ.