Implementation stalled due to central government's non-cooperation: DCM D.K. Shivakumar upset

ಕರ್ನಾಟಕ ನೀರಾವರಿ ಯೋಜನೆಗಳ ಪರ ಕೋರ್ಟ್ ಆದೇಶವಿದ್ದರೂ ಕೇಂದ್ರ ಸರ್ಕಾರದ ಅಸಹಕಾರದಿಂದ ಅನುಷ್ಠಾನ ಸ್ಥಗಿತ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರು: “ಕೃಷ್ಣಾ, ಮಹದಾಯಿ ಸೇರಿದಂತೆ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಪರ ನ್ಯಾಯಾಲಯದ ತೀರ್ಪು ಬಂದಿದ್ದರೂ ಅಧಿಸೂಚನೆ ಹೊರಡಿಸದ, ಅನುಮತಿ ನೀಡದ ಕೇಂದ್ರ ಸರ್ಕಾರದ ಅಸಹಕಾರದಿಂದ ಈ ಯೋಜನೆಗಳು ಸ್ಥಗಿತಗೊಂಡಿವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಬೇಸರ ವ್ಯಕ್ತಪಡಿಸಿದರು.

ತಾವು ರಚಿಸಿರುವ ‘ನೀರಿನ ಹೆಜ್ಜೆ’ ಕೃತಿಯನ್ನು ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

ಕೃಷ್ಣಾ ನದಿ ವಿವಾದದಲ್ಲಿ ಕರ್ನಾಟಕಕ್ಕೆ ಹಂಚಿಕೆಯಾಗಿರುವ ನೀರು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಟಿಸುತ್ತಿಲ್ಲ. ಅಂದು ಯೋಜನೆಗೆ ಒಪ್ಪಿದ್ದ ಮಹಾರಾಷ್ಟ್ರ ಇಂದು ವಿರೋಧ ವ್ಯಕ್ತಪಡಿಸುತ್ತಿದೆ.

ಮಹದಾಯಿ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಬಂದಿದ್ದರೂ ಅನುಷ್ಠಾನ ಆಗಿಲ್ಲ. ಗೋವಾದಲ್ಲಿ ಒಬ್ಬ ಸಂಸದ ಇದ್ದಾನೆ. ನಮ್ಮಲ್ಲಿ 28 ಸಂಸದರಿದ್ದರೂ ನಮ್ಮ ರಾಜ್ಯಕ್ಕೆ ನ್ಯಾಯ ಸಿಗುತ್ತಿಲ್ಲ. ಈ ಯೋಜನೆ ಜಾರಿಗೆ ಟೆಂಡರ್ ಕರೆಯಲಾಗಿದೆ. ಆದರೆ ಕೇಂದ್ರದ ಅರಣ್ಯ ಇಲಾಖೆ ಒಪ್ಪಿಗೆ ನೀಡುತ್ತಿಲ್ಲ ಎಂದರು.

“ರಾಜ್ಯದ ಪ್ರಮುಖ ಕೃಷ್ಣಾ, ಮಹದಾಯಿ, ತುಂಗಭದ್ರಾ, ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಕೇಂದ್ರದ ಮಂತ್ರಿಗಳನ್ನು ಐದು ಬಾರಿ ಭೇಟಿ ಮಾಡಿದ್ದೇನೆ. ಯಾವುದೇ ಫಲಿತಾಂಶ ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದ ಹಿತ ಕಾಪಾಡುವುದು ಹೇಗೆ?” ಎಂದು ಪ್ರಶ್ನಿಸಿದರು.

ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಂಸದರು ಧ್ವನಿ ಎತ್ತುತ್ತಿಲ್ಲ

ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ ನೀಡುವುದಾಗಿ ಘೋಷಣೆ ಮಾಡಿತ್ತು. ಅದರ ಅಧಾರದ ಮೇಲೆ ಬೊಮ್ಮಾಯಿ ಅವರು ಕೂಡ ರಾಜ್ಯ ಬಜೆಟ್ ನಲ್ಲಿ ಅನುದಾನ ತೋರಿಸಿದ್ದರು. ಆದರೆ ಈವರೆಗೂ ಕೇಂದ್ರ ಸರ್ಕಾರ ಬಿಡಿಗಾಸು ಕೊಟ್ಟಿಲ್ಲ. ಈ ಬಗ್ಗೆ ಪ್ರಶ್ನೆ ಮಾಡುವ ಆತ್ಮಸ್ಥೈರ್ಯ ಬಿಜೆಪಿಯ ಯಾವ ಸಂಸದರಿಗೂ ಇಲ್ಲ. ಅವರು ರಾಜ್ಯದ ಪರ ಒಂದೇ ಒಂದು ಮಾತು ಆಡಿಲ್ಲ. ಅಷ್ಟಾದರೂ ಇವರು ಸಂಸದರಾಗಿ ಹೇಗೆ ಮುಂದುವರಿಯುತ್ತಿದ್ದಾರೆ ಎಂಬುದೇ ನನಗೆ ಅರಿವಾಗುತ್ತಿಲ್ಲ. ಕೇವಲ ರಾಜ್ಯ ಸರ್ಕಾರವನ್ನು ಟೀಕೆ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ.

ನೆರೆಯ ತಮಿಳುನಾಡು, ಆಂಧ್ರ ಪ್ರದೇಶದವರು ತಮ್ಮ ರಾಜ್ಯದ ವಿಚಾರ ಬಂದಾಗ ಪಕ್ಷಬೇಧ ಮರೆತು ಒಂದಾಗಿ ಧ್ವನಿ ಎತ್ತುತ್ತಾರೆ. ನಮ್ಮ ಕೈಯಲ್ಲಿ ಎಷ್ಟು ದಿನ ಅಧಿಕಾರ ಇರುತ್ತದೆ ಎಂಬುದಕ್ಕಿಂತ, ಅಧಿಕಾರ ಇದ್ದಷ್ಟು ದಿನ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ ಎಂದು ಕಿಡಿಕಾರಿದರು.

“ನೀರು ಎಲ್ಲರಿಗೂ ಬೇಕು. ಬೆಂಗಳೂರು ಅಷ್ಟು ದೊಡ್ಡದಾಗಿ ಬೆಳೆಯಲು ಕಾರಣ ನೀರು. ಬೆಂಗಳೂರು ಜಾಗತಿಕ ನಗರ ಎಂದು ವಾಜಪೇಯಿ ಅವರು ತಿಳಿಸಿದ್ದರು. ಈ ರಾಜ್ಯದಲ್ಲಿ ಮಹರಾಜರು ಕಟ್ಟಿದ ಅಣೆಕಟ್ಟುಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಅಣೆಕಟ್ಟುಗಳು ನಿರ್ಮಾಣವಾಗಿರುವುದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ. ನನಗೆ ರಾಜಕಾರಣ ಮಾತನಾಡಲು ಇಷ್ಟವಿಲ್ಲ. ಆದರೂ ಕಾಂಗ್ರೆಸ್ ಬಿಟ್ಟು ಬೇರೆ ಸರ್ಕಾರಗಳು ರಾಜ್ಯದಲ್ಲಿ ಒಂದೇ ಒಂದು ಅಣೆಕಟ್ಟು ನಿರ್ಮಿಸಿದೆಯೇ?” ಎಂದು ಪ್ರಶ್ನಿಸಿದರು.

10 ನದಿ ವಿವಾದಗಳ ಪೈಕಿ ಕರ್ನಾಟಕದ್ದೇ 5 ನದಿ ವಿವಾದಗಳಿವೆ

“ನೆಹರೂ ಅವರು ಅಣೆಕಟ್ಟುಗಳೇ ಆಧುನಿಕ ಭಾರತದ ದೇವಾಲಯ ಎಂದು ಕರೆದರು. ಅವರು ತುಂಗಭದ್ರಾ ಅಣೆಕಟ್ಟೆ ನಿರ್ಮಾಣ ಸಂದರ್ಭ ಕರ್ನಾಟಕಕ್ಕೆ ನೀಡಿ, ನೆರವು ಕೊಟ್ಟಿದ್ದರು. ದೇಶದಲ್ಲಿರುವ 10 ನದಿ ವಿವಾದಗಳ ಪೈಕಿ ಐದು ಕರ್ನಾಟಕದ್ದೇ ಆಗಿವೆ. ಈ ಬಗ್ಗೆ ಪುಸ್ತಕದಲ್ಲಿ ತಿಳಿಸಿದ್ದೇನೆ” ಎಂದರು.

“ರಾಜ್ಯದಲ್ಲಿ ಪ್ರತ್ಯೇಕ ಜಲ ಆಯೋಗ ಸ್ಥಾಪಿಸಲಾಗುವುದು. ನೀರಾವರಿಯಿಂದ ಕುಡಿಯುವ ಉದ್ದೇಶ ಹಾಗೂ ಕೈಗಾರಿಕೆಗಳಿಗೆ ನೀರು ಒದಗಿಸುವ ಬಗ್ಗೆ ಅಧ್ಯಯನ ಮಾಡಿ ಸರ್ಕಾರಕ್ಕೆ ಸಲಹೆ ನೀಡಲು ಈ ಆಯೋಗದ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.

ಮೇಕೆದಾಟು ವಿಚಾರವಾಗಿ ಸುಪ್ರೀಂ ಕೋರ್ಟ್ ತೀರ್ಪಿನ ಹಿಂದೆ ಇರುವ ಶ್ರಮ ನಮಗೆ ಮಾತ್ರ ಗೊತ್ತು

ತಮಿಳುನಾಡು ಪಾಲಿನ 177 ಟಿಎಂಸಿ ನೀರನ್ನು ಬಿಡುವುದರಲ್ಲಿ ನಮ್ಮ ತಕರಾರಿಲ್ಲ. ಈ ಹಿಂದೆ ಇದ್ದ ನ್ಯಾಯಾಧೀಶರು ಒಮ್ಮೆ ತಮಿಳುನಾಡಿನವರಿಗೆ ಒಂದು ಮಾತು ಕೇಳುತ್ತಾರೆ. ನಿಮ್ಮ ಪಾಲಿನ 177 ಟಿಎಂಸಿ ನೀರು ನಿಮಗೆ ಬರುತ್ತಿರುವಾಗ, ಅವರು ಅಣೆಕಟ್ಟು ಕಟ್ಟಲು ಯಾಕೆ ಅಡ್ಡಿ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡುತ್ತಾರೆ. ಅದು ನನ್ನ ತಲೆಯಲ್ಲಿತ್ತು. ನಾವು ಇದನ್ನೇ ಇಟ್ಟುಕೊಂಡು ನಮ್ಮ ವಾದವನ್ನು ಬಲಿಷ್ಠವಾಗಿ ಮಂಡನೆ ಮಾಡಿದೆವು.

ನಮ್ಮ ವಕೀಲರು ಬೇರೆ ರೀತಿ ವಾದ ಮಾಡಲು ಮುಂದಾಗಿದ್ದರು. ಆದರೆ ನಾನು ನಮ್ಮ ಸರ್ಕಾರದ ನಿಲುವು ಹೀಗಿದೆ, ನಮ್ಮ ವಾದ ನೇರವಾಗಿ ಸ್ಪಷ್ಟವಾಗಿ ನ್ಯಾಯಾಲಯದ ಮುಂದೆ ಮಂಡಿಸಬೇಕು ಎಂದು ಮಾರ್ಗದರ್ಶನ ನೀಡಿದೆ. ಅದರಂತೆ ವಾದ ಮಾಡಿದ ಪರಿಣಾಮ ವಿಶೇಷ ಪೀಠ ರಚನೆಯಾಗಿ ಈ ವಿಚಾರದಲ್ಲಿ ನ್ಯಾಯಾಲಯ ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದು ತಮಿಳುನಾಡಿನ ಅರ್ಜಿಯನ್ನು ವಜಾಗೊಳಿಸಿದೆ.

ಸುಪ್ರೀಂ ಕೋರ್ಟಿನ ತೀರ್ಪು ತಮಿಳುನಾಡಿಗೂ ಅನುಕೂಲವಾಗಲಿದೆ. 66 ಟಿಎಂಸಿ ನೀರನ್ನು ಶೇಖರಣೆ ಮಾಡಿ ಕುಡಿಯುವ ಉದ್ದೇಶಕ್ಕೆ ಬಳಕೆ ಹಾಗೂ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಈ ಯೋಜನೆಯಿಂದ ನಮ್ಮ ರಾಜ್ಯಕ್ಕೆ ಆಗುವ ಉಪಯೋಗ. ಉಳಿದಂತೆ ಹೆಚ್ಚು ಅನುಕೂಲ ತಮಿಳುನಾಡಿಗೆ ಆಗಲಿದೆ ಎಂದು ತಿಳಿಸಿದರು.

“ಈಗ ನಮ್ಮ ಹೋರಾಟ ಏನಿದ್ದರೂ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕೇಂದ್ರ ಜಲ ಆಯೋಗ ಹಾಗೂ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಅನುಮತಿ ಕೊಡಿಸಬೇಕು. ನಾನು ಈಗಾಗಲೇ ಮೇಕೆದಾಟು ವಿಭಾಗದ ಕಚೇರಿ ಆರಂಭಿಸಿ, ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಪರ್ಯಾಯ ಜಮೀನು ನಿಗದಿ ಮಾಡಿದ್ದೇವೆ. ರಾಜಕೀಯದಲ್ಲಿ ಇಚ್ಛಾಶಕ್ತಿ ಇದ್ದರೆ ಇದೆಲ್ಲವೂ ಸಾಧ್ಯ” ಎಂದು ಹೇಳಿದರು.

ತುಂಗಭದ್ರಾ ಸೇರಿ ಎಲ್ಲಾ ಅಣೆಕಟ್ಟು ಗೇಟ್ ಬದಲಿಸಲು ತೀರ್ಮಾನ

“ಇನ್ನು ತುಂಗಭದ್ರಾ ನೀರಿನ ವಿಚಾರವಾಗಿ ಇಂದು ಬೆಳಗ್ಗೆ ಸಭೆ ನಡೆಯಿತು. ರೈತರು ನಮಗೆ ಒಂದು ಬೇಳೆ ನಷ್ಟವಾಗುತ್ತದೆ ಎಂದು ಒತ್ತಾಯ ಮಾಡುತ್ತಿದ್ದರು. ಆಗ ನಾನು ಅವರಿಗೆ ಕೇಳಿದೆ. ನಿಮಗೆ ಒಂದು ಬೇಳೆ ಮುಖ್ಯವೋ ಅಥವಾ ಅಣೆಕಟ್ಟು ಮುಖ್ಯವೋ ಎಂದು ಹೇಳಿದೆ. ಕೆಲವರು ರಾಜಕೀರಣ ಮಾಡಲು ಪ್ರಯತ್ನಿಸಿದರು.

ರಾಜಕಾರಣ ಮಾಡುವುದಾದರೆ ಇಲ್ಲಿಗೆ ಬರಬೇಡಿ ಎಂದು ಹೇಳಿದೆ. ನನ್ನ ಸ್ಥಾನದಲ್ಲಿ ಕೂತು ಆಲೋಚಿಸಿ ಎಂದಾಗ ಅವರು ಒಪ್ಪಿದರು. ಅಣೆಕಟ್ಟಿನಲ್ಲಿ ಹೂಳು ತಂಬಿ 28 ಟಿಎಂಸಿ ನೀರು ನಷ್ಟವಾಗುತ್ತಿದೆ. ಈ ಇದಕ್ಕೆ ಪರ್ಯಾಯ ಯೋಜನೆ ರೂಪಿಸುವ ಬಗ್ಗೆ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಐದು ಬಾರಿ ಕರೆ ಮಾಡಿ ಸಭೆಗೆ ಸಮಯ ನಿಗದಿ ಮಾಡುವಂತೆ ಕೋರಿದ್ದೇನೆ. ಆದರೆ ಅವರಿಗೆ ಹೆಚ್ಚಿನ ನೀರು ಸಿಗುತ್ತಿದೆ ಎಂದು ಇದರ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನೀರಾವರಿ ಯೋಜನೆಗಳ ವಿಚಾರವಾಗಿ ನಮ್ಮ ಸರ್ಕಾರದಿಂದ ದಿಟ್ಟ ಕ್ರಮ

ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ಬೊಮ್ಮಾಯಿ ಅವರ ಸರ್ಕಾರ ನಿಗದಿಪಡಿಸಿದ ದರವನ್ನು ರೈತರು ಒಪ್ಪಿಕೊಳ್ಳಲಿಲ್ಲ. ಆದರೆ ನಮ್ಮ ಸರ್ಕಾರ ಪ್ರತಿ ಎಕರೆಗೆ 40 ಲಕ್ಷ ಪರಿಹಾರ ನಿಗದಿ ಪಡಿಸಿ ರೈತರ ಪರಿಹಾರಕ್ಕಾಗಿಯೇ 78 ಸಾವಿರ ಕೋಟಿ ಹಣವನ್ನು ನೀಡಲು ತೀರ್ಮಾನಿಸಿದೆ.

ರೈತರ ಹಿತಕ್ಕಾಗಿ ನಾವು ಈ ತೀರ್ಮಾನ ಮಾಡಿದ್ದೇವೆ. ಇನ್ನು ಕಾಲುವೆಗಳಲ್ಲಿ ಮೋಟಾರ್ ಇಟ್ಟು ನೀರು ಕದಿಯುತ್ತಿದ್ದವರ ವಿರುದ್ಧ ಕ್ರಮಕ್ಕೆ ಕಾನೂನು ತಂದಿದ್ದೇವೆ. ಎತ್ತಿನಹೊಳೆ ಯೋಜನೆಯಿಂದ ನೀರನ್ನು ಹೊರ ತೆಗೆಯಲು ಸಾಧ್ಯವಿಲ್ಲ ಎಂದು ಅನೇಕರು ಹೇಳುತ್ತಿದ್ದರು. ಆದರೆ ನಾವು ಅಧಿಕಾರಕ್ಕೆ ಬಂದ ನಂತರ ನೀರನ್ನು ಹೊರಕ್ಕೆ ಹರಿಸಿದ್ದೇವೆ. ಈ ಮಧ್ಯೆ ಅರಣ್ಯ ಇಲಾಖೆ ತಕರಾರು ಮಾಡುತ್ತಿದ್ದಾರೆ.

ನಾವು ಅರಣ್ಯ ಇಲಾಖೆಗೆ ಪರ್ಯಾಯ ಭೂಮಿ ನೀಡುವುದಾಗಿ ಹೇಳಿದರೂ ಅನುಮತಿ ನೀಡುತ್ತಿಲ್ಲ. ಈ ಅಡಚಣೆ ಮಾಡದೇ ಇದ್ದರೆ ಇಷ್ಟುಹೊತ್ತಿಗೆ ಎತ್ತಿನಹೊಳೆ ನೀರನ್ನು ತುಮಕೂರಿನವರೆಗೆ ಹರಿಸುತ್ತಿದ್ದೆವು ಎಂದು ಹೇಳಿದರು.

“ಈ ಯೋಜನೆಗಾಗಿ ಗುಬ್ಬಿಯಲ್ಲಿ ನಿರ್ಮಿಸಿರುವ ಅಕ್ವಾಡೆಕ್ ಇಡೀ ಎಷ್ಯಾದಲ್ಲಿ ಎಲ್ಲೂ ಇಲ್ಲ. ಕುಡಿಯುವ ನೀರು ತರಲು ಇದನ್ನು ನಿರ್ಮಿಸಿದ್ದೇವೆ. ಈ ಯೋಜನೆಯಲ್ಲಿ ಮೊದಲು ಕುಡಿಯುವ ನೀರನ್ನು ಪೂರೈಸಬೇಕು. ಆನಂತರ ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ ನೋಡೋಣ ಎಂದು ಸಿಎಂ ನನಗೆ ಮಾರ್ಗದರ್ಶನ ನೀಡಿದ್ದಾರೆ” ಎಂದು ತಿಳಿಸಿದರು.

ನೀರಿಗೆ ಜಾತಿ, ಬಣ್ಣ, ಧರ್ಮದ ಭೇದವಿಲ್ಲ. ನೀರು ನಮ್ಮ ಜೀವವಾಗಿದೆ. ನೀರನ್ನು ಸದುಪಯೋಗ ಮಾಡಿಕೊಳ್ಳಬೇಕು, ರೈತರನ್ನು ಬದುಕಿಸಬೇಕು, ಈ ವಿಚಾರದಲ್ಲಿ ನನ್ನ ಕೈಲಾದ ಸೇವೆ ಮಾಡಬೇಕು ಎಂದು ತೀರ್ಮಾನಿಸಿದ್ದೇನೆ. ನಾನು ಕಾವೇರಿ ಆರತಿ ಮಾಡಿದಾಗ ಅನೇಕರು ಲೇವಡಿ ಮಾಡಿ ನಕ್ಕರು.

ತುಂಗಭದ್ರ ಅಣೆಕಟ್ಟು ಗೇಟ್ ತುಂಡರಿಸಿದಾಗ ವಿರೋಧ ಪಕ್ಷದವರೆಲ್ಲರೂ ಟೀಕೆ ಮಾಡಿದರು. ನಾವು ಕೆಲವೇ ದಿನಗಳಲ್ಲಿ ಅದನ್ನು ದುರಸ್ಥಿ ಮಾಡಿ ಅಣೆಕಟ್ಟು, ನೀರು ಹಾಗೂ ರೈತರನ್ನು ಕಾಪಾಡಿದೆವು.

ಇಂದು ಕೂಡ ತುಂಗಭದ್ರಾ ವಿಚಾರವಾಗಿ ಸಭೆ ಮಾಡಿದೆವು. ರಾಜ್ಯದ ಎಲ್ಲಾ ಅಣೆಕಟ್ಟುಗಳ ಗೇಟ್ ಬದಲಿಗೆ ತೀರ್ಮಾನಿಸಿದ್ದೇವೆ. ರಾಜಕಾರಣ ಉದ್ದೇಶದಿಂದ ಟೀಕೆ ಮಾಡಿದಾಗ, ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಹೇಳಿದೆ ಎಂದು ಸ್ಮರಿಸಿದರು.

ಒತ್ತಡಕ್ಕೆ ಮಣಿಯದೇ ಮೇಕೆದಾಟು ಪಾದಯಾತ್ರೆ

ನಾನು ದೊಡ್ಡ ತಜ್ಞನಲ್ಲ. ರಾಯಚೂರು ಚುನಾವಣೆ ಸಮಯದಲ್ಲಿ ಕಾವೇರಿ ನೀರಿನ ವಿಚಾರವಾಗಿ ನಮಗೆ ಒಂದು ಮಾಹಿತಿ ಬಂದಿತು. ನಂತರ ಬೆಂಗಳೂರಿಗೆ ಬಂದು ನಾವು ಚರ್ಚೆ ಮಾಡಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಮಾಡಲು ತೀರ್ಮಾನಿಸಿದೆವು. ಈ ಸಂದರ್ಭದಲ್ಲಿ ಕೋವಿಡ್ ಬಂದಿತು. ಎಲ್ಲಾ ಸಿದ್ಧತೆ ಮಾಡಿಕೊಂಡ ನಂತರ ನಿಲ್ಲಿಸಬೇಕು ಎಂದು ಒತ್ತಡ ಹಾಕಿದರು. ಆಗ ನಾನು ಒಂದು ಮಾತು ಹೇಳಿದೆ. ಯಾರು ಬರುತ್ತಾರೋ ಬಿಡುತ್ತಾರೋ ನಾನು ಹಾಗೂ ಸಿದ್ದರಾಮಯ್ಯನವರು ಒಟ್ಟಿಗೆ ಹೆಜ್ಜೆ ಹಾಕುತ್ತೇವೆ ಎಂದು ಹೇಳಿದೆ ಎಂದು ತಿಳಿಸಿದರು.

ಈ ಪಾದಯಾತ್ರೆ ವೇಳೆ ನಮ್ಮ ಎಲ್ಲರ ಮೇಲೆ ಪ್ರಕರಣ ದಾಖಲಿಸಿದರು. ಈ ಪಾದಯಾತ್ರೆ ಮಧ್ಯದಲ್ಲಿ ನಿಲ್ಲಿಸಲು ದೆಹಲಿಯಿಂದ ಒತ್ತಡ ತಂದರು. ನನಗೆ ಕೋವಿಡ್ ಪರೀಕ್ಷೆ ಮಾಡಿ ಕೋವಿಡ್ ಇದೆ ಎಂದು ವರದಿ ನೀಡಲು ಒಬ್ಬ ಬಂದಿದ್ದ. ಅವನಿಗೆ ಆಗ ತಕ್ಕ ಉತ್ತರ ನೀಡಿದೆ. ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ಆಯಾಸದಿಂದ ತೂರಾಡಿದ್ದಕ್ಕೆ ಕೆಲವರು ಮದ್ಯ ಸೇವನೆ ಮಾಡಿ ತೂರಾಡುತ್ತಿದ್ದೇನೆ ಎಂದು ಲೇವಡಿ ಮಾಡಿದರು. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ ಎಂದು ಮೆಲುಕು ಹಾಕಿದರು.

ಈ ರಾಜ್ಯದ ರೈತರಿಗಾಗಿ ನಾವು ಈ ಹೋರಾಟ ಮಾಡಿದೆವು. ಗುರುವಾರ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕವಾದುದು. ಈ ತೀರ್ಪು ಹೇಗೆ ಬಂದಿದೆ ಎಂದು ನನಗೆ ಸಿಎಂ ಅವರಿಗೆ, ಅಡ್ವೋಕೇಟ್ ಜನರಲ್ ಅವರಿಗೆ ಮಾತ್ರ ಗೊತ್ತು. ನಮ್ಮ ಶ್ರಮ, ಆಲೋಚನೆ ಎಷ್ಟಿದೆ ಎಂದು ನಮಗೆ ಮಾತ್ರ ಗೊತ್ತು. ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿದೆ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ. ಅದಕ್ಕೆ ಈ ತೀರ್ಪು ಸಾಕ್ಷಿ ಎಂದರು.

ನಾನು ಮೊದಲು ಬೆಂಗಳೂರಿನಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಮಾಡಿದೆ. ಅದಕ್ಕೆ ಪರ ವಿರೋಧ ವ್ಯಕ್ತಪಡಿಸಿದರು. ನಂತರ ಕೆಆರ್ಎಸ್ ನಲ್ಲಿ ಕಾವೇರಿ ಆರತಿ ಮಾಡಲು ಹೋದಾಗ ಕೆಲವು ರೈತಸಂಘದವವರಿಂದ ವಿರೋಧ ಬಂದಿತು. ಪ್ರಾರ್ಥನೆ ಮಾಡಲು ಯಾರ ಅನುಮತಿ ಬೇಕಾಗಿದೆ? ಎಲ್ಲರೂ ತಮ್ಮ ಪ್ರಾರ್ಥನೆ ಮಾಡುತ್ತಾರೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬುದು ನನ್ನ ನಂಬಿಕೆ. ನನ್ನ ಈ ನಂಬಿಕೆ ಮೇಲೆ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ. ಈ ತೀರ್ಪಿನ ಶಕ್ತಿ ಆಡಳಿತದಲ್ಲಿರುವವರಿಗೆ ಮಾತ್ರ ಗೊತ್ತಿದೆ ಎಂದು ಹೇಳಿದರು.

ಬೊಮ್ಮಾಯಿ ಅವರಿಗೂ ಆಹ್ವಾನ ನೀಡಿದ್ದೆ

“ಮಾಜಿ‌ ನೀರಾವರಿ ಸಚಿವರನ್ನು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆಹ್ವಾನ ಮಾಡಿದ್ದೆ. ಈ ಹಿಂದೆ ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಿದ್ದೆ. ಆದರೆ ಅವರು ‘ನೀವು ನಮ್ಮನ್ನು ಟೀಕೆ ಮಾಡಿದ್ದೀರಿ, ಹೇಗೆ ಬರುವುದು’ ಎಂದು ಕೇಳಿದರು. ನಾನು ಇರುವ ವಾಸ್ತವವನ್ನು ತಿಳಿಸಬೇಕು. ಯಾರು ಯಾವ ಕಾಲದಲ್ಲಿ ಎಷ್ಟು ಸಹಕಾರ ನೀಡಿದ್ದಾರೆ, ಕೇಂದ್ರ ಸರ್ಕಾರ ಎಲ್ಲಿ ಸಹಕಾರ ನೀಡಲು ವಿಫಲವಾಗಿದೆ ಎಂದು ಈ ಪುಸ್ತಕದಲ್ಲಿ ತಿಳಿಸಿದ್ದೇನೆ” ಎಂದರು.

“ನಮ್ಮ ರಾಜ್ಯದಲ್ಲಿ ಯಾರೇ ಜಲಸಂಪನ್ಮೂಲ ಸಚಿವರಾದರೂ ನಾಲ್ಕೂ ನೀರಾವರಿ ನಿಗಮಗಳಿಗೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ. ಅವರೇ ಅಂತಿಮ ನಿರ್ಣಯ ಕೈಗೊಳ್ಳುತ್ತಾರೆ. ಹೀಗಾಗಿ ಮುಖ್ಯಮಂತ್ರಿಗಳಿಂದ ಪುಸ್ತಕ ಬಿಡುಗಡೆ ಮಾಡಿಸಿದ್ದೇವೆ. ನನ್ನ ಕರೆಗೆ ಓಗೊಟ್ಟು ಈ ಪುಸ್ತಕ ಬಿಡುಗಡೆಗೆ ಬಂದ ಮುಖ್ಯಮಂತ್ರಿಗಳಿಗೆ ತುಂಬು ಹೃದಯದಿಂದ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.

ರಾಹುಲ್ ಗಾಂಧಿ ಅವರ ಸೂಚನೆ ಮೇರೆಗೆ ನೀರಾವರಿ ಇಲಾಖೆ ಜವಾಬ್ದಾರಿ ತೆಗೆದುಕೊಂಡೆ

“ರಾಹುಲ್ ಗಾಂಧಿ ಅವರು ನೀವೆ ನೀರಾವರಿ ಇಲಾಖೆಯ ಜವಾಬ್ದಾರಿ ತೆಗೆದುಕೊಳ್ಳಬೇಕು. ವಿದ್ಯುತ್ ಖಾತೆ ಬೇಡ ಎಂದರು. ಇದಕ್ಕೆ ಸಿದ್ದರಾಮಯ್ಯ ಅವರೇ ಸಾಕ್ಷಿ. ಆಗ ಸಮ್ಮಿಶ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಇಲಾಖೆಯ ಜವಾಬ್ದಾರಿ ನನ್ನ ಹೆಗಲಿಗೆ ಬಂದಿತು. ಪಾವಗಡದಲ್ಲಿ ಯಾವ ರೈತರ ಜಮೀನನ್ನೂ ಸ್ವಾಧೀನ ಪಡಿಸಿಕೊಳ್ಳದೇ 13 ಸಾವಿರ ಎಕರೆಯಲ್ಲಿ ಸೋಲಾರ್ ಪಾರ್ಕ್ ಅನ್ನು ನಾವು ಮಾಡಿದ್ದೇವೆ‌. ಪ್ರತಿ ತಾಲ್ಲೂಕಿನಲ್ಲೂ 20 – 50 ಮೆ.ವ್ಯಾ ಸಾಮರ್ಥ್ಯದ ಸೋಲಾರ್ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶ ನಮಗಿದೆ” ಎಂದು ತಿಳಿಸಿದರು.

“ನೀರು ನೀಲಿ ಬಂಗಾರ. ಸಾಕಷ್ಟು ಇತಿಹಾಸಗಳ ಅಧ್ಯಯನ ಮಾಡಿ ಈ ಪುಸ್ತಕವನ್ನು ರಚಿಸಲಾಗಿದೆ. ಅಂತಾರಾಷ್ಟ್ರೀಯ ಒಪ್ಪಂದಗಳು, ನಮ್ಮ ರಾಜ್ಯದ ನದಿಗಳ ವಿಚಾರ ಸೇರಿದಂತೆ 10 ರಾಜ್ಯಗಳ ನದಿಗಳ ವಿಚಾರ, ದೇವೇಗೌಡರು ತೆಗೆದುಕೊಂಡು ತೀರ್ಮಾನ, ಒಪ್ಪಂದ ಹಾಗೂ ಅದರ ಯಶಸ್ಸು ಎಲ್ಲವನ್ನು ಇದರಲ್ಲಿ ಉಲ್ಲೇಖಿಸಿದ್ದೇನೆ. ಇದರಲ್ಲಿ ನಾನು ರಾಜಕೀಯ ಮಾಡದೇ ಅವರನ್ನು ಅಭಿನಂದಿಸಿದ್ದೇನೆ. ಸದನದಲ್ಲಿ ನಂಜೇಗೌಡರು ನೀರಾವರಿ ಬಗ್ಗೆ ಚರ್ಚೆ ಮಾಡುವಾಗ ನಾನು ಅದನ್ನು ಆಲಿಸಿದ್ದೆ” ಎಂದು ಹೇಳಿದರು.

ಜಲ ವಿವಾದ ಇಂದಿನದ್ದಲ್ಲ. ಪುರಾಣದಲ್ಲೂ ನಾವು ನೀರಿನ ವಿವಾದಗಳನ್ನು ನೋಡಿದ್ದೇವೆ. ಭಗೀರಥ ತಪಸ್ಸು ಮಾಡಿ ಗಂಗೆಯನ್ನು ಭೂಮಿಗೆ ಕರೆತರುತ್ತಾನೆ. ಗಂಗೆಯ ರಭಸಕ್ಕೆ ಭೂಮಿ ಕೊಚ್ಚಿಕೊಂಡು ಹೋಗುತ್ತದೆ ಎನ್ನುವ ಭಯ ಎದುರಾಯಿತು. ಆಗ ಶಿವ ತನ್ನ ಶಿರದ ಜಟೆಯಲ್ಲಿ ಗಂಗೆಯನ್ನು ಕಟ್ಟಿ ರಭಸ ಕಡಿಮೆ ಮಾಡಿದನು.

ನನ್ನ ಪ್ರಕಾರ ಜಗತ್ತಿನ ಮೊಟ್ಟ ಮೊದಲ ಜಲ ಒಪ್ಪಂದ ಇದಾಗಿದೆ. ದೇವೇಗೌಡರು ಸಿಎಂ ಆಗಿದ್ದಾಗ ಬಾಲಗಂಗಾಧರ ಸ್ವಾಮೀಜಿ ಅವರ ಜನ್ಮದಿನ ಕಾರ್ಯಕ್ರಮಕ್ಕೆ ಸಾಬಿಬಾಬಾ ಅವರು ಆಗಮಿಸಿದ್ದರು. ಆಗ ಅವರು 8 ಭಗವದ್ಗೀತೆ ಶ್ಲೋಕ ಹೇಳಿದರು. ಅವರ ಭಾಷಣ ಕೇಳಿದೆ. ಆಗ ಅವರು ಹಣ ಹಾಗೂ ರಕ್ತ ಒಂದೇ ಕಡೆ ನಿಲ್ಲಬಾರದು. ನಿರಂತರವಾಗಿ ಸಂಚರಿಸುತ್ತಿರಬೇಕು ಎಂದು ಹೇಳಿದರು ಎಂದು ಸ್ಮರಿಸಿದರು.

“ಗಂಗೆ ಪುತ್ರ ಭೀಷ್ಮರು ಒಂದು ಮಾತು ಹೇಳಿದ್ದಾರೆ. ಮನುಷ್ಯ ಹುಟ್ಟುವಾಗ ನಾಲ್ಕು ಋಣದೊಂದಿಗೆ ಹುಟ್ಟುತ್ತಾನೆ. ತಂದೆತಾಯಿ ಋಣ, ದೇವರ ಋಣ, ಗುರುವಿನ ಋಣ, ಸಮಾಜದ ಋಣ. ಈ ಋಣವನ್ನು ನಾವು ತೀರಿಸುವಾಗ ಧರ್ಮದಿಂದ ತೀರಿಸಬೇಕು ಎಂದು ಹೇಳಿದ್ದಾರೆ. ಅದೇ ರೀತಿ ನನಗೆ ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಅವರು ಈ ಜವಾಬ್ದಾರಿ ನೀಡಿದ ಬಳಿಕ ನನ್ನ ಕೈಲಾದ ಪ್ರಯತ್ನ ಮಾಡುತ್ತಿದ್ದೇನೆ” ಎಂದು ತಿಳಿಸಿದರು.

ರಾಜಕೀಯ

ಶಾಸಕ ಚಂದ್ರು ಲಮಾಣಿ ಬಂಧನ: ಬಿ.ವೈ. ವಿಜಯೇಂದ್ರ ಹೇಳಿದ್ದು ಹೀಗೆ

ಶಾಸಕ ಚಂದ್ರು ಲಮಾಣಿ ಬಂಧನ: ಬಿ.ವೈ. ವಿಜಯೇಂದ್ರ ಹೇಳಿದ್ದು ಹೀಗೆ

ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಂಜಾರ ಸಮಾಜವನ್ನೇ ಟಾರ್ಗೆಟ್ ಮಾಡುತ್ತಿರುವುದು ಎಲ್ಲರಿಗು ಗೊತ್ತಿರುವ ವಿಚಾರ; ಬಿ.ವೈ. ವಿಜಯೇಂದ್ರ (B.Y. Vijayendra)

[ccc_my_favorite_select_button post_id="119679"]
ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟವನ್ನು ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟವನ್ನು ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಬೇಕೆಂದು ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರೆ ನೀಡಿದರು.

[ccc_my_favorite_select_button post_id="119685"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ದೊಡ್ಡಬಳ್ಳಾಪುರ: ರಘು ದೀಕ್ಷಿತ್ ಕಾರ್ಯಕ್ರಮದ ವೇಳೆ ಕಿಡಿಗೇಡಿಗಳ ಉಪಟಳ.. ಬಾಲಕನ ಕಾಲು ಮುರಿತ..!

ದೊಡ್ಡಬಳ್ಳಾಪುರ: ರಘು ದೀಕ್ಷಿತ್ ಕಾರ್ಯಕ್ರಮದ ವೇಳೆ ಕಿಡಿಗೇಡಿಗಳ ಉಪಟಳ.. ಬಾಲಕನ ಕಾಲು ಮುರಿತ..!

ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಖಾಸಗಿ ಕಾರ್ಯಕ್ರಮದಲ್ಲಿ ನಡೆಸಲಾಗುತ್ತಿದ್ದ ರಘು ದೀಕ್ಷಿತ್ ( Raghu Dixit) ಅವರ ಸಂಗೀತ ಸಂಜೆ ವೇಳೆ ಕಿಡಿಗೇಡಿಗಳ ಉಪಟಳದಿಂದ ಬಾಲಕ ಕಾಲು ಮುರಿದಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.

[ccc_my_favorite_select_button post_id="119672"]
ದೊಡ್ಡಬಳ್ಳಾಪುರ: Accident.. ಗೀತಂ ವಿವಿ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ದೊಡ್ಡಬಳ್ಳಾಪುರ: Accident.. ಗೀತಂ ವಿವಿ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಮುಂದೆ ಸಾಗುತ್ತಿದ್ದ ಟಿಪ್ಪರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ (Accident) ಓರ್ವ ವಿದ್ಯಾರ್ಥಿ ಸಾವನಪ್ಪಿದ್ದು, ಮತ್ತೋರ್ವ ಗಾಯಗೊಂಡಿರುವ ಘಟನೆ ನಗರದ ಹೊರವಲಯದಲ್ಲಿರುವ ರೈಲ್ವೆ ಸ್ಟೇಷನ್ ಪೆಟ್ರೋಲ್ ಬಂಕ್ ಮುಂಭಾಗ ಸಂಭವಿಸಿದೆ.

[ccc_my_favorite_select_button post_id="119695"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!