ಬೆಂಗಳೂರು: “ಸಿಎಂ ಸಿದ್ದರಾಮಯ್ಯ (Cmsiddaramaiah) ಅವರು ಎಂದೂ ಕೊಟ್ಟ ಮಾತನ್ನು ತಪ್ಪುವವರಲ್ಲ. ಅವರು ಯಾರಿಗೆ ಮಾತು ಕೊಟ್ಟರೂ ತಪ್ಪುವುದಿಲ್ಲ” ಎಂದು ಬಮೂಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ (D.K. Suresh) ಅವರು ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಸುರೇಶ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
ನೀವು ಸಿಎಂ ಅವರನ್ನು ಭೇಟಿ ಮಾಡಿದಾಗ ಅಧಿಕಾರ ಹಸ್ತಾಂತರ ವಿಚಾರ ಚರ್ಚೆ ಮಾಡಿದಿರಾ ಎಂದು ಕೇಳಿದಾಗ, “ಸಿಎಂ ಅವರ ಬಳಿ ಅಧಿಕಾರ ಹಸ್ತಾಂತರ ವಿಚಾರ ಚರ್ಚೆ ಮಾಡಿಲ್ಲ. ಅಷ್ಟು ದೊಡ್ಡವನೂ ನಾನಲ್ಲ. ಅವರು ಹಿರಿಯ ನಾಯಕರು. ಅವರಿಗೆ ತಮ್ಮದೇ ಆದ ಜವಾಬ್ದಾರಿ ಇದೆ. ಕರ್ನಾಟಕದ ಜನರಿಗೆ ಕೊಟ್ಟ ಎಲ್ಲಾ ಭರವಸೆ ಈಡೇರಿಸಿದ್ದಾರೆ. ಈ ಸರ್ಕಾರದಲ್ಲೂ ಅವರು ಯಾರಿಗೆ ಯಾವ ಮಾತು ಕೊಟ್ಟಿದ್ದಾರೋ ಅದರಂತೆ ನಡೆಯುತ್ತಿದ್ದಾರೆ” ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗಿರುವ ಬಗ್ಗೆ ಕೇಳಿದಾಗ, “ಕರ್ನಾಟಕದ ಜನರ ಆಶೀರ್ವಾದದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಇಂದಿಗೆ ಎರಡೂವರೆ ವರ್ಷ ತುಂಬಿದೆ. ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ” ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಪವರ್ ಶೇರಿಂಗ್ ವಿಚಾರದಲ್ಲೂ ಕೊಟ್ಟ ಮಾತಿನಂತೆ ನಡೆಯುತ್ತಾರಾ ಎಂದು ಕೇಳಿದಾಗ, “ಅದು ನನಗೆ ಗೊತ್ತಿಲ್ಲದ ವಿಚಾರ. ಅವರು ಈಗ ಮುಖ್ಯಮಂತ್ರಿ ಆಗಿದ್ದಾರೆ. ಈ ವಿಚಾರವನ್ನು ಪಕ್ಷದ ವರಿಷ್ಠರು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತಾರೆ. ಈ ವಿಚಾರದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನೀವು ಮಾಧ್ಯಮಗಳಲ್ಲಿ ತೋರಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ” ಎಂದರು.
ಶಿವಕುಮಾರ್ ಅವರು ಎರಡೂವರೆ ವರ್ಷಗಳ ಬಳಿಕ ಸಿಎಂ ಆಗುತ್ತಾರೆ ಎಂಬ ಚರ್ಚೆ ಅಭಿಮಾನಿ, ಕಾರ್ಯಕರ್ತರಲ್ಲಿದೆ ಎಂದು ಕೇಳಿದಾಗ, “ಎಲ್ಲರಿಗೂ ಆ ಆಸೆ ಇದೆ. ಅವರ ಅಭಿಮಾನಿಗಳು ಹೇಳುತ್ತಿರುತ್ತಾರೆ, ಪೂಜೆ ಮಾಡುತ್ತಿರುತ್ತಾರೆ, ಅವರಿಗೆ ಏನು ಬೇಕೋ ಮಾಡುತ್ತಿರುತ್ತಾರೆ. ನಾವುಗಳು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುವವರು. ಪಕ್ಷ ಏನು ಹೇಳುತ್ತದೆಯೋ ಅದನ್ನು ಸಿಎಂ, ಡಿಸಿಎಂ ಸೇರಿದಂತೆ ಎಲ್ಲಾ ನಾಯಕರು ಪಾಲನೆ ಮಾಡುತ್ತಾರೆ. ಇದು ನಮ್ಮ, ನಿಮ್ಮ ಮುಂದೆ ನಡೆಯುವ ಚರ್ಚೆಯಲ್ಲ. ಇದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಸದ್ಯಕ್ಕೆ ಸಿಎಂ ಹುದ್ದೆ ಖಾಲಿ ಇಲ್ಲ. ಏನೇ ತೀರ್ಮಾನ ಮಾಡುವುದಿದ್ದರೂ ಹೈಕಮಾಂಡ್ ತೀರ್ಮಾನ ಮಾಡಬೇಕು. ಇಲ್ಲಿ ವೈಯಕ್ತಿಕ ವಿಚಾರ ಇಲ್ಲ. ” ಎಂದು ತಿಳಿಸಿದರು.
ನಿನ್ನೆ ಶಿವಕುಮಾರ್ ಅವರು ತ್ಯಾಗದ ಮಾತುಗಳನ್ನು ಆಡಿದ್ದಾರೆ ಎಂದು ಕೇಳಿದಾಗ, “ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ನೀವು ಅವರನ್ನೇ ಕೇಳಿ” ಎಂದು ತಿಳಿಸಿದರು.
ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಾಗಿ ಆರು ವರ್ಷ ಪೂರ್ಣಗೊಳ್ಳುತ್ತಿದೆ ಎಂದು ಕೇಳಿದಾಗ, “ಅವರು ಪಕ್ಷದ ಕೆಲಸ ಮಾಡುತ್ತಿದ್ದು, ನಾಳೆ ಬೇರೆಯವರು ಅಧ್ಯಕ್ಷರಾದರೆ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತಾರೆ. ಯಾರೇ ಅಧ್ಯಕ್ಷರಾದರೂ ಅವರಿಗೆ ಅವಕಾಶ ಮಾಡಿಕೊಡಲು ಶಿವಕುಮಾರ್ ಅವರು ಸಿದ್ಧರಿದ್ದಾರೆ” ಎಂದು ತಿಳಿಸಿದರು.
ಅವರೇ ಮುಂದುವರಿಯುತ್ತಾರೆಯೇ ಎಂದು ಕೇಳಿದಾಗ, “ಅವರು ರಾಜೀನಾಮೆ ನೀಡುವುದಿಲ್ಲ ಎಂದು ನಿಮ್ಮ ಬಳಿ ಹೇಳಿಲ್ಲವಲ್ಲ. ನೀವು ಆ ರೀತಿ ಹೇಳುತ್ತಿದ್ದೀರಾ. ಅವಕಾಶ ಸಿಕ್ಕಾಗ ಏನೆಲ್ಲಾ ಮಾಡಬೇಕೋ ಅದನ್ನು ಶಿವಕುಮಾರ್ ಅವರು ಮಾಡಿದ್ದಾರೆ” ಎಂದರು.
ನಾನು ಅಧ್ಯಕ್ಷ ಸ್ಥಾನದಿಂದ ಇಳಿದರೂ ಮುಂದಾಳತ್ವ ವಹಿಸುವೆ, ಧೈರ್ಯವಾಗಿರಿ ಎಂದು ಕಾರ್ಯಕರ್ತರಿಗೆ ಹೇಳಿರುವ ಬಗ್ಗೆ ಕೇಳಿದಾಗ, “ಒಬ್ಬೊಬ್ಬರೂ ಒಂದೊಂದು ರೀತಿ ವ್ಯಾಖ್ಯಾನ ಮಾಡಿ ಕಾರ್ಯಕರ್ತರನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಹೀಗಾಗಿ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬುವುದು ಪಕ್ಷ ಹಾಗೂ ಅಧ್ಯಕ್ಷರ ಜವಾಬ್ದಾರಿ. ಹೀಗಾಗಿ ಈ ಮಾತುಗಳನ್ನು ಆಡಿರುತ್ತಾರೆ” ಎಂದು ತಿಳಿಸಿದರು.
ಅಧಿಕಾರದ ದಾಖಲೆ ಬರೆಯುವ ಕನಸು ಶಿವಕುಮಾರ್ ಅವರಿಗಿಲ್ಲ
ಡಿ.ಕೆ. ಶಿವಕುಮಾರ್ ಅವರಿಗೆ 8 ವರ್ಷಕ್ಕಿಂತ ಹೆಚ್ಚು ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿ ದಾಖಲೆ ಬರೆಯುವ ಇಚ್ಛೆ ಇದೆಯೇ ಎಂದು ಕೇಳಿದಾಗ, “ಆ ರೀತಿ ಏನೂ ಇಲ್ಲ. ಅಧಿಕಾರದ ದಾಖಲೆ ಮಾಡುವ ಕನಸು ಅವರದ್ದಲ್ಲ. ರಾಜಕಾರಣದಲ್ಲಿ ಶಾಶ್ವತವಾಗಿ ಉಳಿಯಬೇಕಾದರೆ, ಜನರಿಗೆ ಆಗಲಿ, ಬೇರೆಯವರಿಗೆ ಆಗಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಆಗ ಶಾಶ್ವತವಾಗಿ ನಾಯಕರಾಗಿ ಉಳಿಯಲು ಸಾಧ್ಯ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ದೇವರಾಜ ಅರಸು, ನಿಜಲಿಂಗಪ್ಪ, ಎಸ್.ಎಂ. ಕೃಷ್ಣ ಸೇರಿದಂತೆ ಎಲ್ಲರೂ ಹೈಕಮಾಂಡ್ ಅಣತಿಯಂತೆ ಕೆಲಸ ಮಾಡಿದ್ದಾರೆ” ಎಂದರು.
ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು ಎಂಬುದು ಶಿವಕುಮಾರ್ ಅವರ ಆಸೆಯೇ ಎಂದು ಕೇಳಿದಾಗ, “ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿರುವುದೇ ದೊಡ್ಡ ಸಾಧನೆ. ಪಕ್ಷ ಅಧೋಗತಿಯಲ್ಲಿದ್ದ ಸಂದರ್ಭದಲ್ಲಿ ಜವಾಬ್ದಾರಿ ತೆಗೆದುಕೊಂಡು ಪಕ್ಷಕ್ಕೆ ಚೈತನ್ಯ ತುಂಬಿದ್ದಾರೆ. ಕಾರ್ಯಕರ್ತರಿಗೆ ಹುಮ್ಮಸ್ಸು ಕೊಟ್ಟಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತಂದು, ಕೊಟ್ಟ ಮಾತಿನಂತೆ ನಡೆದು ಉತ್ತಮ ಆಡಳಿತ ನಡೆಸುತ್ತಿದ್ದಾರೆ” ಎಂದು ತಿಳಿಸಿದರು.
ಕಾಂಗ್ರೆಸ್ ನೂರು ಕಚೇರಿಗಳ ಶಂಕುಸ್ಥಾಪನೆಗೆ ಹೈಕಮಾಂಡ್ ಸಹಕರಿಸುವಂತೆ ಕಾಣಿಸುತ್ತಿಲ್ಲವಲ್ಲಾ ಎಂದು ಕೇಳಿದಾಗ, “ಬಿಹಾರ ಚುನಾವಣೆ ಹಾಗೂ ಇತರೆ ವಿಚಾರವಾಗಿ ಅವರು ಕಾರ್ಯನಿರತರಾಗಿದ್ದ ಕಾರಣ ದಿನಾಂಕ ನೀಡಿರಲಿಲ್ಲ. ಅತೀ ಶೀಘ್ರದಲ್ಲಿ ಅದಕ್ಕೂ ಅವಕಾಶ ನೀಡುತ್ತಾರೆ” ಎಂದರು.
ಕೆಲವರಿಗೆ ಕೇವಲ ಅಧಿಕಾರ ಮಾತ್ರ ಮುಖ್ಯವಾಗಿದೆ ಎಂದು ಶಿವಕುಮಾರ್ ಅವರು ಹೇಳಿರುವುದನ್ನು ನೀವು ಯಾವ ರೀತಿ ವ್ಯಾಖ್ಯಾನ ಮಾಡುತ್ತೀರಿ ಎಂದು ಕೇಳಿದಾಗ, “ಅವರು ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಯಾರೇ ಆಗಿರಲಿ, ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಆಡಳಿತ ನಡೆಸುವವರ ಕರ್ತವ್ಯ. ಪಕ್ಷವಾಗಿ ಆ ಕೆಲಸ ಮಾಡಬೇಕು” ಎಂದು ತಿಳಿಸಿದರು.
ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಬಗ್ಗೆ ಪರಿಶೀಲನೆ ಮಾಡುವ ಸಮಯ ಬಂದಿದೆಯೇ ಎಂದು ಕೇಳಿದಾಗ, “ನನಗೆ ಈ ಬಗ್ಗೆ ಮಾಹಿತಿ ಇಲ್ಲ, ನೀವು ಏನು ಹೇಳುತ್ತೀರೋ ನಾನು ಅದನ್ನು ಕೇಳುವೆ” ಎಂದು ತಿಳಿಸಿದರು.
ಶಿವಕುಮಾರ್ ಅವರ ಶ್ರಮಕ್ಕೆ ಒಂದಲ್ಲಾ ಒಂದು ದಿನ ಫಲ ಸಿಗುತ್ತದೆ
ಸಾಮಾಜಿಕ ನ್ಯಾಯ ನಂಬುವ ಕಾಂಗ್ರೆಸ್ ಪಕ್ಷದಲ್ಲಿ ಶ್ರಮಕ್ಕೆ ತಕ್ಕ ಫಲ ಇದೆಯೇ? ಶಿವಕುಮಾರ್ ಅವರ ಶ್ರಮಕ್ಕೆ ಪ್ರತಿಫಲ ಯಾವಾಗ? ಈ ಅವಧಿಯಲ್ಲೇ? ಎಂದು ಕೇಳಿದಾಗ, “ಶ್ರಮಕ್ಕೆ ತಕ್ಕ ಪ್ರತಿಫಲ ಇರುವುದಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಶಿವಕುಮಾರ್ ಅವರ ಶ್ರಮಕ್ಕೆ ಒಂದಲ್ಲಾ ಒಂದು ದಿನ ಫಲ ಸಿಕ್ಕೇ ಸಿಗುತ್ತೆ. ಕಾದು ನೋಡಬೇಕು. ಈ ಅವಧಿಯಲ್ಲಿ ಸಿಗುವುದೇ ಎಂಬುದು ನನಗೆ ಗೊತ್ತಿಲ್ಲ” ಎಂದರು.
ಶಿವಕುಮಾರ್ ಅವರು ಸಿಎಂ ಆಗುವ ಘಳಿಗೆ ಕೂಡಿ ಬಂದಿಲ್ಲವೇ, ಶಿವಕುಮಾರ್ ಅವರು ಶ್ರಮದ ಫಲ ಕೇಳುತ್ತಿದ್ದಾರೆಯೇ ಎಂದು ಕೇಳಿದಾಗ, “ಅದೃಷ್ಟ ಇದ್ದರೆ ನಮ್ಮಣ್ಣ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದೇನೆ. ಎಲ್ಲರೂ ಶ್ರಮ ಹಾಕಿದ್ದಾರೆ. ಶಿವಕುಮಾರ್ ಹಾಗೂ ಬೇರೆಯವರು ಶ್ರಮ ಹಾಕಿದ್ದಾರೆ. ಒಬ್ಬರು ಮಂತ್ರಿಯಾಗಬೇಕು, ಮತ್ತೊಬ್ಬರು ಉಪ ಮುಖ್ಯಮಂತ್ರಿಯಾಗಬೇಕು, ಸಂಸದರು, ಶಾಸಕರು ಆಗಬೇಕು ಎನ್ನುತ್ತಾರೆ. ರಾಜಕಾರಣದಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಆಸೆ, ಆಕಾಂಕ್ಷೆ ಇರುತ್ತದೆ. ಹೀಗಾಗಿ ಇದು ಸ್ವಾಭಾವಿಕ. ಇದಕ್ಕಿಂತ ಹೆಚ್ಚು ಮುಖ್ಯವಾದದ್ದು ಉತ್ತಮ ಆಡಳಿತ ನೀಡುವುದಾಗಿದೆ” ಎಂದು ತಿಳಿಸಿದರು.
ಸಂಪುಟ ಪುನಾರಚನೆ ಆದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟರೆ ಶಿವಕುಮಾರ್ ಅವರು ಮೂಲೆ ಗುಂಪಾಗುತ್ತಾರೆ ಎಂಬ ಚರ್ಚೆ ಬಗ್ಗೆ ಕೇಳಿದಾಗ, “ಯಾರ ಹಣೆಯಲ್ಲಿ ಏನು ಬರೆದಿದೆಯೋ ಅದು ಆಗಲಿದೆ. ಬೇರೆ ಏನೂ ಮಾಡಲು ಸಾಧ್ಯವಿಲ್ಲ. ತೆಲಂಗಾಣದಲ್ಲಿ ರೇವಂತ್ ರೆಡ್ಡಿ ಅವರು ಬೇರೆ ಪಕ್ಷದಿಂದ ಬಂದು ಸಿಎಂ ಆದರು. ಅವರ ಹಣೆಯಲ್ಲಿ ಬರೆದಿತ್ತು, ಹೀಗಾಗಿ ಪಕ್ಷಕ್ಕೆ ಬಂದ ಮೂರು ವರ್ಷಕ್ಕೆ ಸಿಎಂ ಆಗಿದ್ದಾರೆ. ಗುಜರಾತಿನಲ್ಲಿ ಮೊದಲ ಬಾರಿ ಶಾಸಕರಾದವರು ಸಿಎಂ ಆಗಿದ್ದಾರೆ. ರಾಜಕಾರಣದಲ್ಲಿ ಯಾವುದೂ ಅಸಾಧ್ಯವಾದುದಲ್ಲ. ಎಲ್ಲವೂ ಭರವಸೆ ಮೇಲೆ ನಡೆಯಲಿದೆ” ಎಂದು ತಿಳಿಸಿದರು.
ಭರವಸೆ ಹಾಗೂ ಆಸೆ ಎರಡೂ ಜೀವಂತ ಇರಬೇಕು ಅಲ್ಲವೇ ಎಂದು ಕೇಳಿದಾಗ, “ಭರವಸೆ, ನಂಬಿಕೆ ಮೇಲೆ ನಾವು ಬದುಕುತ್ತಿದ್ದೇವೆ. ನಿಮಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಮೇಲೆ ನೀವು ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುತ್ತೀರಿ ಅಲ್ಲವೇ” ಎಂದು ಮರುಪ್ರಶ್ನಿಸಿದರು.
ನೀವು ಹೈಕಮಾಂಡ್ ನವರನ್ನು ಭೇಟಿ ಮಾಡಿದ್ದು, ನಿಮಗೆ ಏನಾದರೂ ಭರವಸೆ ನೀಡಿದ್ದಾರಾ ಎಂದು ಕೇಳಿದಾಗ, “ನಾನು ಹೈಕಮಾಂಡ್ ಭೇಟಿ ಮಾಡಿ ರಾಜಕೀಯದ ಬಗ್ಗೆ ಚರ್ಚೆ ಮಾಡಿಲ್ಲ. ನಾನು ಸ್ವಾಭಾವಿಕವಾಗಿ ದೆಹಲಿಗೆ ಹೋದಾಗ ಪಕ್ಷದ ವರಿಷ್ಠರನ್ನು ಭೇಟಿ ಮಾಡುವೆ. ನ್ಯಾಯಾಲಯದ ಕೇಸ್ ಹಿನ್ನೆಲೆಯಲ್ಲಿ ನಾನು ದೆಹಲಿಗೆ ಹೋಗಿ, ನನ್ನ ಕೆಲಸ ಮುಗಿಸಿಕೊಂಡು ಬಂದೆ” ಎಂದರು.
ನೀವು ಸಿಎಂ ಜತೆಗೂ ಮಾತನಾಡಿದ್ದೀರಿ ಎಂದು ಕೇಳಿದಾಗ, “ಸಿಎಂ ನನಗೆ ಹೊಸಬರಲ್ಲ. ನಮ್ಮ ಸಿಎಂ ಜೊತೆ ನಾನು ಮಾತನಾಡುವುದಕ್ಕೆ ಆತಂಕ ಯಾಕೆ? ನಾನು ಬಿಜೆಪಿ ಸಿಎಂ ಜೊತೆ ಮಾತನಾಡಿದ್ದೇನಾ? ಇದಕ್ಕೆ ಬೇಸರ ಯಾಕೆ ಮಾಡಿಕೊಳ್ಳುತ್ತೀರಿ” ಎಂದರು.
ಅಧಿಕಾರ ಹಸ್ತಾಂತರ ಮಾಡಿ ಎಂದು ಹೆಚ್. ವಿಶ್ವನಾಥ್ ಅವರು ಸಿದ್ದರಾಮಯ್ಯ ಅವರಿಗೆ ತಾಕೀತು ಮಾಡಿರುವ ಬಗ್ಗೆ ಕೇಳಿದಾಗ, “ವಿರೋಧ ಪಕ್ಷದ ನಾಯಕರ ಹೇಳಿಕೆ ಬಗ್ಗೆ ಅವರನ್ನೇ ಕೇಳಿ. ಅದು ನಮಗೆ ಸಂಬಂಧಿಸಿದ ವಿಷಯವಲ್ಲ” ಎಂದು ತಿಳಿಸಿದರು.
ಅಧ್ಯಕ್ಷ ಸ್ಥಾನದ ಬಗ್ಗೆ ಹೈಕಮಾಂಡ್ ಗೆ ಏನು ಹೇಳಬೇಕೋ ಹೇಳಿದ್ದಾರೆ
ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ಬಗ್ಗೆ ಶಿವಕುಮಾರ್ ಅವರು ಪ್ರಸ್ತಾಪ ಮಾಡಿದ್ದಾರಲ್ಲಾ ಎಂದು ಕೇಳಿದಾಗ, “ಶಿವಕುಮಾರ್ ಅವರು ಪಕ್ಷದ ವರಿಷ್ಠರಿಗೆ ಏನು ತಿಳಿಸಬೇಕೋ ಅದನ್ನು ತಿಳಿಸಿದ್ದಾರೆ. ಅದು ಪಕ್ಷಕ್ಕೆ ಹಾಗೂ ಪಕ್ಷದ ನಾಯಕತ್ವಕ್ಕೆ ಬಿಟ್ಟ ವಿಚಾರ. ಸಂಘಟನೆ ವಿಚಾರದಿಂದ ಅವರು ತೀರ್ಮಾನ ಮಾಡುತ್ತಾರೆ” ಎಂದು ತಿಳಿಸಿದರು.
ಕೊಟ್ಟ ಮಾತಿಗೆ ತಪ್ಪಿದರೆ ಸಮುದಾಯಕ್ಕೆ ಅನ್ಯಾಯ ಮಾಡಿದಂತೆ ಅಲ್ಲವೇ ಎಂದು ಕೇಳಿದಾಗ, “ಕೊಟ್ಟ ಮಾತು ತಪ್ಪಿದ್ದಾರೆ ಎಂದು ನಾನು ಹೇಳಿಲ್ಲವಲ್ಲ, ನೀವ್ಯಾಕೆ ಹಾಗೇ ಊಹಿಸುತ್ತಿರಿ” ಎಂದರು.
ನಾನು ಕಾಂಗ್ರೆಸ್ ಕಾರ್ಯಕರ್ತ ಎಲ್ಲದಕ್ಕೂ ಸಾಕ್ಷಿಯಾಗಿದ್ದೇನೆ
ಎರಡೂವರೆ ವರ್ಷದ ಹಿಂದಿನ ಮಾತಿಗೆ ನೀವು ಸಾಕ್ಷಿಯಾಗಿದ್ದೀರಿ ಎಂಬ ಮಾತಿದೆಯಲ್ಲ ಎಂದು ಕೇಳಿದಾಗ, “ನಾನು ಎಲ್ಲದಕ್ಕೂ ಸಾಕ್ಷಿಯೇ. ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ” ಎಂದರು.
ಸರ್ಕಾರ ರಚನೆ ಸಂದರ್ಭದಲ್ಲಿ, ಸಿಎಂ ಆಯ್ಕೆ ವಿಚಾರದಲ್ಲಿ ನೀವು ಪ್ರಮುಖ ಪಾತ್ರ ವಹಿಸಿದ್ದೀರಿ ಎಂಬ ಮಾತಿನ ಬಗ್ಗೆ ಕೇಳಿದಾಗ, “ನಾನೊಬ್ಬನೇ ಅಲ್ಲ, ನೂರಾರು ಶಾಸಕರು, ಮುಖಂಡರು ಇದ್ದರು. ಪಕ್ಷದ ವರಿಷ್ಠರು ತೀರ್ಮಾನ ಮಾಡಿದ್ದು, ಅದು ನಾಲ್ಕು ಗೋಡೆಗಳ ಮಧ್ಯೆ ತೆಗೆದುಕೊಂಡ ತೀರ್ಮಾನ. ಆ ಸಂದರ್ಭದಲ್ಲಿ ಇದ್ದೆನೋ ಇಲ್ಲವೋ, ಈ ವಿಚಾರವಾಗಿ ನೀವು ಪಕ್ಷದ ವರಿಷ್ಠರನ್ನೇ ಕೇಳಿ” ಎಂದರು.
ವರಿಷ್ಠರು ನಮಗೆ (ಮಾಧ್ಯಮ) ಸಿಗುವುದಿಲ್ಲ ಎಂದಾಗ, “ಹುಡುಕಬೇಕು, ಸಿಗುತ್ತಾರೆ. ನನಗಿಂತ ಹೆಚ್ಚಾಗಿ ನಿಮಗೇ ಸಿಗುತ್ತಾರೆ” ಎಂದರು.
ಹೈಕಮಾಂಡ್ ಈ ವಿಚಾರವಾಗಿ ಸ್ಪಷ್ಟನೆ ನೀಡಲಿದೆಯೇ ಎಂದು ಕೇಳಿದಾಗ, “ಖಂಡಿತವಾಗಿಯೂ ಸ್ಪಷ್ಟನೆ ನೀಡುತ್ತಾರೆ. ಅವರು ಎಲ್ಲವನ್ನೂ ಗಮನಿಸುತ್ತಿದ್ದಾರೆ” ಎಂದು ತಿಳಿಸಿದರು.
ನಿಮ್ಮ ಮನವಿ, ಬೇಡಿಕೆಗಳಿಗೆ ಹೈಕಮಾಂಡ್ ಮಟ್ಟದಲ್ಲಿ ಮನ್ನಣೆ ಸಿಗುತ್ತದೆಯೇ ಎಂದು ಕೇಳಿದಾಗ, “ನನ್ನ ಯಾವುದೇ ಬೇಡಿಕೆ, ಮನವಿ ಇಲ್ಲ. ನನ್ನ ಆಸೆ ಇದೆ. ಆ ಆಸೆ ಈಡೇರುವ ಬಗ್ಗೆ ಗೊತ್ತಿಲ್ಲ. ಎಲ್ಲವೂ ಭಗವಂತನ ಆಶೀರ್ವಾದ” ಎಂದು ತಿಳಿಸಿದರು.
ಜಿಬಿಎ ಚುನಾವಣೆ ಯಾರ ನೇತೃತ್ವದಲ್ಲಿ ನಡೆಯಲಿದೆ ಎಂದು ಕೇಳಿದಾಗ, “ಕಾಂಗ್ರೆಸ್ ನೇತೃತ್ವದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆಯಲಿದೆ” ಎಂದರು.
ಆಗ ಪಕ್ಷದ ಅಧ್ಯಕ್ಷರು ಯಾರಾಗಿರುತ್ತಾರೆ ಎಂದು ಕೇಳಿದಾಗ, “ಎಲ್ಲಿಯವರೆಗೆ ಅವರು ಅಧ್ಯಕ್ಷರಾಗಿ ಇರುತ್ತಾರೋ, ಅಲ್ಲಿಯವರೆಗೆ ಅವರ ನೇತೃತ್ವ ಇದ್ದೇ ಇರುತ್ತದೆ” ಎಂದು ಹೇಳಿದರು.
40 ವರ್ಷಗಳಿಂದ ಶಿವಕುಮಾರ್ ಒಬ್ಬರೇ ದೆಹಲಿಗೆ ಹೋಗಿ ಬರುತ್ತಾರೆ
ಸಿಎಂ ದೆಹಲಿಗೆ ಹೋದರೆ ತಮ್ಮ ಬಣದ ಜೊತೆಗೆ ಹೋಗುತ್ತಾರೆ, ಶಿವಕುಮಾರ್ ಅವರು ಏಕಾಂಗಿಯಾಗಿ ಹೋಗುತ್ತಾರೆ ಎಂದು ಕೇಳಿದಾಗ, “ಶಿವಕುಮಾರ್ ಅವರ ದೆಹಲಿ ಸಂಪರ್ಕ 40 ವರ್ಷಗಳದ್ದು. ಅಂದಿನಿಂದಲೂ ಅವರು ಒಬ್ಬರೇ ದೆಹಲಿಗೆ ಹೋಗಿ ಬರುತ್ತಾರೆ” ಎಂದು ತಿಳಿಸಿದರು.
ಸರ್ಕಾರ ಬರಲು ಶಿವಕುಮಾರ್ ಅವರ ಶ್ರಮ ಏನು ಎಂದು ಹೈಕಮಾಂಡ್ ನಾಯಕರಿಗೆ ಗೊತ್ತಿದ್ದರೂ ಇಷ್ಟು ಕಾಯಿಸುತ್ತಿರುವುದೇಕೆ, ಈ ವಿಚಾರದಲ್ಲಿ ಸ್ಪಷ್ಟ ನಿಲುವು ತಿಳಿಸಬಹುದಲ್ಲವೇ ಎಂದು ಕೇಳಿದಾಗ, “ಹೈಕಮಾಂಡ್ ಮುಂದೆ ಕೇವಲ ಕರ್ನಾಟಕ ವಿಚಾರ ಮಾತ್ರವಲ್ಲ, ಅನೇಕ ವಿಚಾರ ಇರುತ್ತದೆ. ಯಾವುದೇ ತೀರ್ಮಾನ ಮಾಡಬೇಕಾದರೂ ಹಲವು ರೀತಿ ಆಲೋಚನೆ ಮಾಡಬೇಕು. ಬಿಹಾರ ಚುನಾವಣೆ ಸೋಲಿನ ಪರಾಮರ್ಶೆ ಮಾಡುತ್ತಿದ್ದಾರೆ. ಬೇರೆ, ಬೇರೆ ರಾಜ್ಯಗಳಲ್ಲಿ ಮುಂಬರುವ ಚುನಾವಣೆ ಬಗ್ಗೆಯೂ ಚರ್ಚೆ ಮಾಡಬೇಕು. ಎಸ್ ಐ ಆರ್ ಬಗ್ಗೆ ಚರ್ಚೆ ನಡೆಯುತ್ತಿದೆ. ಹೀಗಾಗಿ 12 ರಾಜ್ಯಗಳ ಬಗ್ಗೆ ಚಿಂತನೆ ಮಾಡಬೇಕು. ಪಕ್ಷ ಸಂಘಟನೆ, ಹೋರಾಟ, ವಿರೋಧ ಪಕ್ಷವಾಗಿ ಕಾರ್ಯತಂತ್ರ ರೂಪಿಸುವ ಬಗ್ಗೆ ಆಲೋಚನೆ ಮಾಡಬೇಕಿದೆ. ಹೈಕಮಾಂಡ್ ನಾಯಕರು ಈ ವಿಚಾರಗಳಲ್ಲಿ ನಿರತರಾಗಿದ್ದಾರೆ” ಎಂದು ತಿಳಿಸಿದರು.
ಶಾಸಕರ ಅಭಿಪ್ರಾಯ ಮುಖ್ಯ ಎಂದು ಕೇಳಿದಾಗ, “ನಾಯಕತ್ವ ಬದಲಾವಣೆ ವಿಚಾರ ಬಂದಾಗ ಶಾಸಕರ ಅಭಿಪ್ರಾಯ ಮುಖ್ಯವಾಗುತ್ತದೆ. ಈಗ ಆ ಪ್ರಶ್ನೆ ಇಲ್ಲವಲ್ಲ. ಸದ್ಯಕ್ಕೆ ಆ ಚರ್ಚೆ ಇಲ್ಲ, ಕಾದು ನೋಡೋಣ” ಎಂದರು.