ಕೆ.ಎಂ.ಸಂತೋಷ್, ಆರೂಢಿ, (ದೊಡ್ಡಬಳ್ಳಾಪುರ): ಡಿ. 21 ರಂದು ನಡೆಯಲಿರುವ ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಗೆ (Bashettihalli Town Panchayat Election) ನಾಮಪತ್ರಗಳನ್ನು ಹಿಂಪಡೆಯಲು ಶುಕ್ರವಾರ ಕಡೆಯ ದಿನವಾಗಿದ್ದು, 10 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದು, 64 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
19 ವಾರ್ಡ್ಗಳಿಗೆ ನಡೆಯುವ ಚುನಾವಣೆಗೆ ಸಲ್ಲಿಕೆಯಾಗಿದ್ದ ಒಟ್ಟು 82 ನಾಮಪತ್ರಗಳ ಪೈಕಿ 5 ನಾಮಪತ್ರಗಳು ತಿರಸ್ಕೃತವಾಗಿದ್ದವು. ಒಟ್ಟು 74 ಅಭ್ಯರ್ಥಿಗಳಿಂದ 77 ನಾಮಪತ್ರಗಳ ಸಲ್ಲಿಕೆಯಾಗಿ ಕ್ರಮಬದ್ಧವಾಗಿದ್ದವು.
ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನದಂದು, 10 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದಾರೆ. ಚುನಾವಣೆಯ ಅಂತಿಮ ಕಣದಲ್ಲಿ ಕಾಂಗ್ರೆಸ್ನಿಂದ 19, ಬಿಜೆಪಿಯಿಂದ 18, ಜೆಡಿಎಸ್ನಿಂದ 10 ಹಾಗೂ ಪಕ್ಷೇತರರಾಗಿ 17 ಅಭ್ಯರ್ಥಿಗಳು ಸೇರಿ 64 ಅಭ್ಯರ್ಥಿಗಳಿದ್ದಾರೆ.
ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ನಂತರ ಮೊಟ್ಟಮೊದಲ ಬಾರಿಗೆ ಬಾಶೆಟ್ಟಿಹಳ್ಳಿ ಮೊದಲ ಪಟ್ಟಣ ಪಂಚಾಯಿತಿ ಚುನಾವಣೆಗೆ ಸಜ್ಜಾಗಿದೆ. ಚುನಾವಣಾ ಫಲಿತಾಂಶ ತಾಲ್ಲೂಕಿನ ರಾಜಕೀಯ ಪಕ್ಷಗಳಲ್ಲಿ ಹಲವು ಕಾರಣಗಳಿಂದ ಬಾರಿ ಕುತೂಹಲ ಮೂಡಿಸಿದೆ.
ರಾಜ್ಯದಲ್ಲೇ ಅತಿ ಹೆಚ್ಚು ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿರುವ 2ನೇ ಗ್ರಾಮ ಪಂಚಾಯಿತಿ ಎನ್ನುವ ಹೆಗ್ಗಳಿಕೆ ಹೊಂದಿದ್ದ ಬಾಶೆಟ್ಟಿಹಳ್ಳಿ ಪಂಚಾಯಿತಿಯಲ್ಲಿ 47 ಸದಸ್ಯರು ಇದ್ದರು. ಕೈಗಾರಿಕಾ ಪ್ರದೇಶ ಹೊಂದಿರುವ ಇಲ್ಲಿ ಸಹಜವಾಗಿಯೇ ಅತಿ ಹೆಚ್ಚು ತೆರಿಗೆ ಸಂಗ್ರಹ, ಬಜೆಟ್ ಮಂಡನೆಯು ನಡೆಯುತಿತ್ತು.
ಇಲ್ಲಿನ ಗ್ರಾಮ ಪಂಚಾಯಿತಿ ಸರ್ಕಾರದ ಯಾವುದೇ ಅನುದಾನ ಇಲ್ಲದೆ ಸ್ವಂತ ತೆರಿಗೆ ಹಣದಲ್ಲಿ ಒಳಚರಂಡಿ ಸೌಲಭ್ಯ ಕಲ್ಪಿಸಿ-ಕೊಂಡಿತ್ತು. ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿದ್ದರಿಂದ ರಾಜ್ಯ ಸರ್ಕಾರದಿಂದ ನೀಡಲಾಗುವ ಗಾಂಧಿ ಸ್ವಚ್ಛ ಗ್ರಾಮ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿ ಪಡೆದಿದೆ. ಈಗ ಮೊದಲ ಪಟ್ಟಣ ಪಂಚಾಯಿತಿ ಚುನಾವಣೆ ಎದುರಿಸುತ್ತಿದೆ. 19 ವಾರ್ಡ್ಗಳಿಗೆ ಸ್ಪರ್ಧೆ ನಡೆಯಲಿದೆ.
ಮುರಿದುಬಿದ್ದ ಬಿಜೆಪಿ-ಜೆಡಿಎಸ್ ಮೈತ್ರಿ..!
ತೀವ್ರ ಕುತೂಹಲ ಕೆರಳಿಸಿರುವ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಒಮ್ಮತ ಮೂಡದ ಕಾರಣ ಬಿಜೆಪಿ-ಜೆಡಿಎಸ್ ಮೈತ್ರಿ ಮುರಿದುಬಿದ್ದಿದ್ದು, ಎರಡೂ ಪಕ್ಷಗಳು ಪ್ರತ್ಯೇಕವಾಗಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಗ್ರಾಮಪಂಚಾಯಿತಿಯಿಂದ ಲೋಕಸಭೆವರೆವಿಗೂ ಮೈತ್ರಿ ಮುಂದುವರೆಸುತ್ತೇವೆ ಎಂದು ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡ ಹೇಳಿದ್ದರೂ. ಆದರೆ ಬಾಶೆಟ್ಟಿಹಳ್ಳಿಯಲ್ಲಿ ಚುನಾವಣೆಗೆ ಮುನ್ನವೇ ಜೆಡಿಎಸ್ ಮುಖಂಡರನ್ನು ಬಿಜೆಪಿ ಆಪರೇಷನ್ ಕಮಲ ಮಾಡಿರುವುದು ಜೆಡಿಎಸ್ ಮುಖಂಡರನ್ನು ಕೆರಳಿಸಿದೆ.
ಈ ಹಿನ್ನೆಲೆಯಲ್ಲಿ ಜೆಡಿಎಸ್ ಪ್ರತ್ಯೇಕವಾಗಿ 14 ವಾರ್ಡ್ಗಳಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದಾಗ್ಯೂ ನಾಮಪತ್ರ ಹಿಂಡೆಯಲು ಕೊನೆಯ ದಿನವಾದ ಇಂದು ಸಮನ್ವಯ ಸಮಿತಿ ನಡೆಸಲು ಜೆಡಿಎಸ್ ಮುಖಂಡರು ಮುಂದಾಗಿದ್ದರು.
ಆದರೆ ಒಮ್ಮತ ಮೂಡದ ಕಾರಣ ಸಭೆ ನಡೆಯದೆ, ತನ್ನ ಪ್ರಭಾವ ಇರುವ 10 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಉಳಿಸಿ ಕೊಂಡಿರುವ ಜೆಡಿಸ್ ಬಿಜೆಪಿಗೆ ಸೆಡ್ಡು ಹೊಡೆದಿದೆ ಎನ್ನಲಾಗುತ್ತಿದೆ.
.
ಇನ್ನೂ ಜೆಡಿಎಸ್ನ ಪ್ರಭಾವಿ ಮುಖಂಡರನ್ನೇ ಹೈಜಾಕ್ ಮಾಡಿರುವ ಬಿಜೆಪಿ ಯಾವ ರೀತಿ ತಿರುಗೇಟು ನೀಡಲಿದೆ..? ಈ ಎರಡು ಪಕ್ಷಗಳ ಮೈತ್ರಿ ಮುರಿದು ಬಿದ್ದಿರುವುದರಿಂದ ಕಾಂಗ್ರೆಸ್ಗೆ ಯಾವ ರೀತಿ ಅನುಕೂಲವಾಗಲಿದೆ ಕಾದು ನೋಡಬೇಕಿದೆ.