
ಚಿಕ್ಕಬಳ್ಳಾಪುರ: ಅವರಿಬ್ಬರೂ ಅಣ್ಣತಮ್ಮಂದಿರು ಹಾಗೂ ಅವರ ಜೊತೆಗೆ ಇಬ್ಬರು ಸ್ನೇಹಿತರು ನಾಲ್ವರು ಸೇರಿ ಜಿಲ್ಲಾ ಕೇಂದ್ರದಿಂದ ಒಂದೇ ಬೈಕಿನಲ್ಲಿ ಊರಿನತ್ತ ಹೊರಟಿದ್ದರು. ಆದರೆ ದುರದೃಷ್ಟವಶಾತ್ ಎಂಬಂತೆ ಹೆದ್ದಾರಿಯಲ್ಲಿ ಯಮಸ್ವರೂಪಿ ಯಂತೆ ಅಡ್ಡ ಬಂದ ಟಿಪ್ಪರ್ ಲಾರಿಗೆ ಬೈಕ್ ಡಿಕ್ಕಿಯಾಗಿ (Accident) ಒಂದೇ ಗ್ರಾಮದ ನಾಲ್ವರು ಯುವಕರು ಸ್ಥಳದಲ್ಲಿ ದುರ್ಮರಣಕ್ಕೆ ಈಡಾಗಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಸೂತಕದ ವಾತಾವರಣ ಆವರಿಸಿದೆ.
ಹೌದು ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಒಂದೇ ಗ್ರಾಮದ ನಾಲ್ವರು ಯುವಕರು ಮೃತಪಟ್ಟಿರುವಂತಹ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟ್ ಬಳಿ ನಡೆದಿದೆ.
ಅಜ್ಜವಾರ ಗ್ರಾಮದ ಅಣ್ಣ ತಮ್ಮಂದಿರಾದ ನರಸಿಂಹಮೂರ್ತಿ ಹಾಗೂ ನಂದೀಶ್ ಸೇರಿದಂತೆ ಅರುಣ್ ಹಾಗೂ ಮನೋಜ್ ಮೃತರು.
ಅಂದಹಾಗೆ ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಈ ನಾಲ್ವರು ಚಿಕ್ಕಬಳ್ಳಾಪುರ ನಗರದ ಚರ್ಚ್ ಗಳಿಗೆ ಭೇಟಿ ನೀಡಿ ಮರಳಿ ಸ್ವಗ್ರಾಮದತ್ತ ಹೊರಟಿದ್ದರು.
ಮೃತ ನಾಲ್ವರು ಯುವಕರು ಸಹ ನರಸಿಂಹಮೂರ್ತಿಗೆ ಸೇರಿದ ಸಿಟಿ 100 ಬೈಕಿನಲ್ಲಿ ಹೊರಟಿದ್ದು, ಇನ್ನೇನು ಅಜ್ಜವಾರ ಗ್ರಾಮಕ್ಕೆ ಹೈವೆಯಿಂದ ಬಲತಿರುವು ಪಡೆದುಕೊಳ್ಳಬೇಕಿತ್ತು. ಆದ್ರೆ ಅಷ್ಟರಲ್ಲೇ ಯಮಸ್ವರೂಪಿಯಂತೆ ಟಿಪ್ಪರ್ ಲಾರಿ ಅಡ್ಡ ಬಂದಿದ್ದು ಮುಖಾಮುಖಿ ಡಿಕ್ಕಿಯಾಗಿದೆ. ಇದರಿಂದ ನಾಲ್ವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.
ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಆದ ಪರಿಣಾಮ ಸಿಟಿ 100 ಬೈಕ್ ಸಂಪೂರ್ಣ ನಜಗುಜ್ಜಾಗಿದೆ. ಘಟನೆಯಲ್ಲಿ ಮೃತಪಟ್ಟ ನಾಲ್ವರು ಸ್ನೇಹಿತರಾಗಿದ್ದಾರೆ. ನಾಲ್ವರಲ್ಲಿ ನಂದೀಶ್ ಹಾಗೂ ನರಸಿಂಹಮೂರ್ತಿ ಇಬ್ಬರು ಅಣ್ಣ-ತಮ್ಮಂದಿರಾಗಿದ್ದು, ಇಬ್ಬರು ಮಕ್ಕಳನ್ನ ಕಳೆದುಕೊಂಡಿರುವ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಮತ್ತೊಂದೆಡೆ ಮೃತ ನರಸಿಂಹಮೂರ್ತಿ ಕಳೆದ ಆರು ತಿಂಗಳ ಹಿಂದೆಯಷ್ಟೇ, ಪ್ರೇಮ ವಿವಾಹವಾಗಿದ್ದ. ಅಪಘಾತದ ವಿಚಾರ ತಿಳಿದು ನವವಿವಾಹಿತ ನರಸಿಂಹಮೂರ್ತಿ ಪತ್ನಿ ಚೈತ್ರಾ ಸಹ ಆಘಾತಕ್ಕೆ ಗುರಿಯಾಗಿದ್ದಾಳೆ.
ಇನ್ನು ಅಪಘಾತದ ವಿಚಾರ ತಿಳಿದು ಸ್ಥಳಕ್ಕೆ ಎಸ್ ಪಿ ಕುಶಲ್ ಚೌಕ್ಸಿ ಹಾದಿಯಾಗಿ ಚಿಕ್ಕಬಳ್ಳಾಪುರ ಪೊಲೀಸರು ಭೇಟಿ ಮಾಡಿ ಮೃತ ದೇಹಗಳನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ.
ಅಪಘಾತ ನಂತರ ಟಿಪ್ಪರ್ ಚಾಲಕ ಎಸ್ಕೇಪ್ ಆಗಿದ್ದು, ಸದ್ಯ ಟಿಪ್ಪರ್ ಅನ್ನು ವಶಕ್ಕೆ ಪಡೆದಿರುವ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ಒಟ್ನಲ್ಲಿ ಒಂದೇ ಗ್ರಾಮದ ನಾಲ್ವರು ಯುವಕರ ಸಾವಿನಿಂದ ಇಡೀ ಗ್ರಾಮದಲ್ಲಿ ಸೂತಕದ ವಾತಾವರಣ ಮನೆ ಮಾಡಿದೆ.