ಬೆಂಗಳೂರು: ʼರಾಜ್ಯದಲ್ಲಿ ಅತ್ಯಾಧುನಿಕ ತಯಾರಿಕೆ, ಆಹಾರ ಸಂಸ್ಕರಣೆ, ಶುದ್ಧ ಇಂಧನ, ಡೇಟಾ ಕೇಂದ್ರಗಳ ಸ್ಥಾಪನೆಗೆ ಸಂಬಂಧಿಸಿದಂತೆ ಹೊಸ ಬಂಡವಾಳ ಹೂಡಿಕೆ, ಉದ್ಯಮ ವಿಸ್ತರಣೆ ಮತ್ತು ಪಾಲುದಾರಿಕೆಗಳು ತ್ವರಿತವಾಗಿ ಸಾಕಾರಗೊಳ್ಳಲು ದಾವೋಸ್ನ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶವು ಉತ್ತಮ ಭೂಮಿಕೆ ಸಿದ್ಧಪಡಿಸಿದೆʼ ಎಂದು ಬೃಹತ್ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ (M.B. Patila) ಅವರು ಹೇಳಿದ್ದಾರೆ.
ದಾವೋಸ್ ನ ವಿಶ್ವ ಆರ್ಥಿಕ ವೇದಿಕೆ ಸಮಾವೇಶದಲ್ಲಿ ಆದ ಸಭೆ/ಮಾತುಕತೆಗಳ ಬಗ್ಗೆ ಸಚಿವರು ಶನಿವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ʼಏರೊಸ್ಪೇಸ್ ಆ್ಯಂಡ್ ಡಿಫೆನ್ಸ್, ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್, ಪಾನೀಯಗಳು ಮತ್ತು ಆಹಾರ ಸಂಸ್ಕರಣೆ, ಬಾಹ್ಯಾಕಾಶ ತಂತ್ರಜ್ಞಾನ, ಜೀವ ವಿಜ್ಞಾನ, ಡೇಟಾ ಸೆಂಟರ್ಗಳು, ಡಿಜಿಟಲ್ ಮೂಲಸೌಲಭ್ಯ ಮತ್ತು ಶುದ್ಧ ಇಂಧನ ಮುಂತಾದ ಆದ್ಯತಾ ವಲಯಗಳಲ್ಲಿನ 25ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಕಂಪನಿಗಳು ಮತ್ತು 15ಕ್ಕೂ ಹೆಚ್ಚು ಭಾರತದ ಕಂಪನಿಗಳ ಜೊತೆಗೆ ಫಲಪ್ರದ ಸಭೆ ನಡೆಸಲಾಗಿದೆ.
ಕರ್ನಾಟಕದಲ್ಲಿ ಉದ್ಯಮ ಸ್ಥಾಪನೆ, ವಿಸ್ತರಣೆಯ ವಾಗ್ದಾನಗಳನ್ನು ಆದ್ಯತೆ ಮೇರೆಗೆ ಕಾರ್ಯಗತಗೊಳಿಸಲು ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರು ಒಲವು ತೋರಿಸಿದ್ದಾರೆ ಎಂದು ಸಚಿವರು ವಿವರಿಸಿದರು.
ʼದೇಶದ ಕೈಗಾರಿಕಾ ಭೂಪಟದಲ್ಲಿ ಕರ್ನಾಟಕವನ್ನು ಮುಂಚೂಣಿ ರಾಜ್ಯವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಉದ್ಯಮ ಸ್ನೇಹಿ ಕೈಗಾರಿಕಾ ನೀತಿ ಅಳವಡಿಸಿಕೊಂಡಿರುವ ಸರ್ಕಾರದ ಧೋರಣೆಯನ್ನು ಉದ್ಯಮ ದಿಗ್ಗಜರು ಶ್ಲಾಘಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ತಿಳಿಸಿದರು.
ಸದ್ಯದ ಜಾಗತಿಕ ಆರ್ಥಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಭಾರತದ ಬದಲಾಗುತ್ತಿರುವ ಪಾತ್ರದ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ರಾಜ್ಯದ 2 ಮತ್ತು 3ನೇ ಶ್ರೇಣಿಯ ನಗರಗಳಲ್ಲಿ ಹೂಡಿಕೆ ಹಾಗೂ ವಿಸ್ತರಣೆ ಬಗ್ಗೆ ಹಲವು ಕಂಪನಿಗಳು ಒಲವು ವ್ಯಕ್ತಪಡಿಸಿವೆ.
ಬೆಂಗಳೂರು ಆಚೆಗಿನ ನಗರಗಳು ಸ್ವಯಂ ಸುಸ್ಥಿರ ನಗರಗಳಾಗಿ ಬೆಳೆಯುವುದಕ್ಕೆ ರಾಜ್ಯ ಸರ್ಕಾರ ನೀಡುತ್ತಿರುವ ಆದ್ಯತೆಗೆ ಪೂರಕವಾಗಿ, ರಾಜ್ಯದಲ್ಲಿನ 2ನೇ ಸ್ಥರದ ನಗರಗಳಲ್ಲಿ ವಿಸ್ತರಣೆಗೆ ಟೆಕ್ ಮಹೀಂದ್ರಾ, ಡೇಟಾ ಕೇಂದ್ರಗಳನ್ನು ಸ್ಥಾಪಿಸಲು ಭಾರ್ತಿ ಎಂಟರ್ಪ್ರೈಸಸ್ ಮತ್ತು ಸಿಫಿ ಟೆಕ್ನಾಲಜೀಸ್ ಆಸಕ್ತಿ ತೋರಿಸಿವೆ ಎಂದರು.
ʼಕೃತಕ ಬುದ್ಧಿಮತ್ತೆ (ಎಐ), ಡೇಟಾ ಸೆಂಟರ್ಗಳು, ಸೆಮಿಕಂಡಕ್ಟರ್ಗಳು, ಸ್ಪೇಸ್ ಟೆಕ್, ಇಂಡಸ್ಟ್ರಿ 4.0, ಒಳಗೊಂಡಂತೆ ಹೊಸ ತಲೆಮಾರಿನ ಕೈಗಾರಿಕೆಗಳಿಗೆ ರಾಜ್ಯವನ್ನು ಆದ್ಯತೆಯ ತಾಣವನ್ನಾಗಿ ಜಾಗತಿಕ ಹೂಡಿಕೆದಾರರು ಮತ್ತು ತಂತ್ರಜ್ಞಾನ ದಿಗ್ಗಜರಿಗೆ ಮನದಟ್ಟು ಮಾಡಿಕೊಡಲಾಗಿದೆ ಎಂದು ಹೇಳಿದರು.
ಹೊಸ ಚಿಂತನೆಗಳ ಅಳವಡಿಕೆಗೆ ಆದ್ಯತೆ
ʼಕೃತಕ ಜಾಣ್ಮೆ (ಎಐ), ರೋಬೊಟಿಕ್ಸ್, ಕ್ವಾಂಟಂ ಮತ್ತಿತರ ಭವಿಷ್ಯದ ತಂತ್ರಜ್ಞಾನಗಳು ಒಡ್ಡಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಅಗತ್ಯ ಇರುವುದು ದಾವೋಸ್ ಭೇಟಿಯಲ್ಲಿ ಹೆಚ್ಚು ಮನದಟ್ಟಾಗಿದ್ದು, ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಲಿದೆ ಎಂದು ಸಚಿವರು ತಿಳಿಸಿದರು.
ಚೀನಾದಲ್ಲಿನ ಮೊಬೈಲ್ ತಯಾರಿಕಾ ಕಂಪನಿಯ ನಿದರ್ಶನವೊಂದನ್ನು ನೀಡಿದ ಸಚಿವರು, 500 ಜನರ ಕೆಲಸಗಳನ್ನು ಕೃತಕ ಬುದ್ಧಿಮತ್ತೆ ನೆರವಿನಿಂದ ಕೇವಲ ಐದಾರು ಜನರು ನಿರ್ವಹಿಸುತ್ತಿದ್ದಾರೆ. ಕೃತಕ ಬುದ್ಧಿಮತ್ತೆ, ರೋಬೊಟಿಕ್ಸ್, ಕ್ವಾಂಟಂ ತಂತ್ರಜ್ಞಾನದಂತಹ ಭವಿಷ್ಯದ ತಂತ್ರಜ್ಞಾನಗಳು ಈಗ ಬರೀ ಸಾಫ್ಟ್ವೇರ್ಗಷ್ಟೇ ಸೀಮಿತವಾಗಿಲ್ಲ. ತಯಾರಿಕಾ ವಲಯಕ್ಕೂ ಕಾಲಿಟ್ಟಿವೆ. ಉದ್ಯೋಗ ಅವಕಾಶಗಳು ಕಡಿಮೆಯಾಗುವ ಭೀತಿ ಸೃಷ್ಟಿಸಿವೆ.
ಭವಿಷ್ಯದ ತಂತ್ರಜ್ಞಾನಗಳು ಒಳಿತಿನ ಜೊತೆಗೆ ಕೆಲವು ಕೆಡುಕುಗಳನ್ನೂ ಒಳಗೊಂಡಿವೆ. ನಮ್ಮಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಇರುವ ಯುವಜನರಿಗೆ ಹಾಗೂ ಮಹಿಳೆಯರಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ನಾವು ಆದ್ಯತೆ ನೀಡುತ್ತಿದ್ದೇವೆ. ಹೊಸ ತಂತ್ರಜ್ಞಾನಗಳು ಒಡ್ಡಿರುವ ಇಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ಸಮಾವೇಶದಲ್ಲಿ ಹೊಸ ಚಿಂತನೆಗಳ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ರಾಜ್ಯದ ಜನತೆಯ ಒಳಿತಿಗೆ ಭವಿಷ್ಯದ ತಂತ್ರಜ್ಞಾನಗಳನ್ನು ಸದ್ಬಳಕೆ ಮಾಡಿಕೊಳ್ಳಲು ಆದ್ಯತೆ ನೀಡಲಿದ್ದೇವೆ. ರಾಜ್ಯಕ್ಕೆ ಜಂಟಿಯಾಗಿ ಹೂಡಿಕೆಗಳನ್ನು ಆಕರ್ಷಿಸುವುದರ ಬಗ್ಗೆ ಲಿಚೆಂಟೈನ್ ಮತ್ತು ಸಿಂಗಪುರ ಸರ್ಕಾರದ ಜೊತೆಗಿನ ಮಾತುಕತೆಗಳಲ್ಲಿ ಹೆಚ್ಚು ಗಮನಹರಿಸಲಾಗಿದೆ ಎಂದರು.
ಪ್ರಜ್ಞಾಪೂರ್ವಕ ನಿರ್ಧಾರ
ಸಮಾವೇಶದಲ್ಲಿ ದೇಶಿ ಉದ್ಯಮಗಳ ಜೊತೆ ಯಾವುದೇ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಬಾರದು ಎಂದು ಪ್ರಜ್ಞಾಪೂರ್ವಕ ನಿರ್ಧಾರಕ್ಕೆ ಬರಲಾಗಿತ್ತು. ಬದಲಿಗೆ ಭವಿಷ್ಯದ ಹೂಡಿಕೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗಿದೆ.
ನಮ್ಮ ದೇಶದ ಕಂಪನಿಗಳ ಜತೆ ದಾವೋಸ್ ಗೆ ಹೋಗಿ ಒಡಂಬಡಿಕೆ ಮಾಡಿಕೊಳ್ಳುವ ಅಗತ್ಯ ಏನಿದೆ? ಇಲ್ಲೇ ಮಾಡಿಕೊಳ್ಳಬಹುದು ಎನ್ನುವುದು ಸರ್ಕಾರದ ಪ್ರಜ್ಞಾಪೂರ್ವಕ ತೀರ್ಮಾನ. ಇದಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಯಿತು. ಇದರ ನಡುವೆ ಹೂಡಿಕೆ, ಕೈಗಾರಿಕಾ ಚಟುವಟಿಕೆ, ಡೇಟಾ ಸೆಂಟರ್ಗಳ ವಿಸ್ತರಣೆಗೆ ಸಂಬಂಧಿಸಿದಂತೆ ದೇಶದ 15 ಬಹುರಾಷ್ಟ್ರೀಯ ಕಂಪನಿಗಳ ಜೊತೆಗೂ ಮಾತುಕತೆ ನಡೆಸಲಾಯಿತು ಎಂದು ಸಚಿವರು ವಿವರಿಸಿದರು.
ʼರಾಜ್ಯದ ಮಹತ್ವಕಾಂಕ್ಷೆಯ ʼಕ್ವಿನ್ ಸಿಟಿʼ ಯೋಜನೆಯ ಭಾಗವಾಗುವುದಕ್ಕೆ ಟಾಟಾ ಸನ್ಸ್ ಆಸಕ್ತಿ ವ್ಯಕ್ತಪಡಿಸಿದೆ. ಈ ಸಂಬಂಧ ಮಾತುಕತೆ ಮುಂದುವರೆಸಲು ಟಾಟಾ ಸನ್ಸ್ ಚೇರ್ಮನ್ ಎನ್. ಚಂದ್ರಶೇಖರನ್ ಅವರು ಒಲವು ವ್ಯಕ್ತಪಡಿಸಿದ್ದಾರೆʼ ಎಂದು ಸಚಿವರು ವಿವರಿಸಿದರು.
ʼಜಿಐಎಂʼ ಹೂಡಿಕೆ ಬದ್ಧತೆಗಳಲ್ಲಿ ಶೇಕಡ 46ರಷ್ಟು ಜಾರಿ
ʼಬೆಂಗಳೂರಿನಲ್ಲಿ ಕಳೆದ ವರ್ಷ ನಡೆದಿದ್ದ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ (ಜಿಐಎಂ) ಘೋಷಿಸಲಾಗಿದ್ದ ₹10.27 ಲಕ್ಷ ಕೋಟಿ ಮೊತ್ತದ ಹೂಡಿಕೆ ಬದ್ಧತೆಗಳಲ್ಲಿ ಈಗಾಗಲೇ ಶೇಕಡ 46ರಷ್ಟು ಕಾರ್ಯಗತಗೊಂಡಿವೆʼ ಎಂದು ಸಚಿವ ಎಂ.ಬಿ. ಪಾಟೀಲ ಅವರು ತಿಳಿಸಿದರು.
ʼಕೇವಲ ಘೋಷಣೆಗಳಿಗೆ ಸೀಮಿತವಾಗಿರದೆ, ಈ ಬದ್ಧತೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ನಾವು ಗಮನ ಕೇಂದ್ರೀಕರಿಸಿದ್ದೇವೆ. ಯೋಜನೆಗಳು ಕಾರ್ಯಗತಗೊಳ್ಳುವ ಪ್ರಗತಿ ಪಥದಲ್ಲಿ ತಯಾರಿಕಾ ವಲಯವು (ಶೇಕಡ 58ರಷ್ಟು) ಮುಂಚೂಣಿಯಲ್ಲಿ ಇರುವುದು ಸೇರಿದಂತೆ ಒಟ್ಟಾರೆ ಹೂಡಿಕೆ ಯೋಜನೆಗಳು ನಿರೀಕ್ಷೆಯಂತೆ ಕಾರ್ಯಗತಗೊಳ್ಳುತ್ತಿವೆ. ಈ ಎಲ್ಲ ಯೋಜನೆಗಳಿಂದ ರಾಜ್ಯದಲ್ಲಿ ಅಂದಾಜು 6 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿ ಆಗುವುದನ್ನು ನಿರೀಕ್ಷಿಸಲಾಗಿದೆ ಎಂದು ಅವರು ವಿವರಿಸಿದರು.
ʼಜಿಐಎಂʼನಲ್ಲಿನ ಘೋಷಣೆಗಳಿಗೆ ಹೊರತಾಗಿ, ಕಳೆದ 11 ತಿಂಗಳುಗಳಲ್ಲಿ ತಯಾರಿಕೆ, ನವೀಕರಿಸಬಹುದಾದ ಇಂಧನ ಮೂಲಗಳು, ಡೇಟಾ ಸೆಂಟರ್ ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳ ಸ್ಥಾಪಿಸುವುದಕ್ಕೆ (ಜಿಸಿಸಿ) ಸಂಬಂಧಿಸಿದಂತೆ ₹ 1.1 ಲಕ್ಷ ಕೋಟಿ ಮೊತ್ತದ ಹೊಸ ಹೂಡಿಕೆಗಳು ಹರಿದು ಬಂದಿವೆ.
ʼಇದಕ್ಕೆ ಪೂರಕವಾಗಿ, ಹಲವು ವಲಯಗಳಲ್ಲಿ ₹ 1.5 ಲಕ್ಷ ಕೋಟಿ ಮೊತ್ತದ ಹೊಸ ಬಂಡವಾಳ ಹೂಡಿಕೆಯನ್ನೂ ನಿರೀಕ್ಷಿಸಲಾಗಿದೆ.
ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್ (ಇಎಸ್ಡಿಂ) / ಸೆಮಿಕಂಡಕ್ಟರ್ಸ್, ವಾಹನ ಹಾಗೂ ವಿದ್ಯುತ್ಚಾಲಿತ ವಾಹನ (ಇವಿ) ತಯಾರಿಕೆ, ಏರೋಸ್ಪೇಸ್ ಆ್ಯಂಡ್ ಡಿಫೆನ್ಸ್ ತಯಾರಿಕಾ ವಲಯಗಳಲ್ಲಿ ಈ ಹೂಡಿಕೆ ಹರಿದು ಬರಲಿದೆ. ಇವೆಲ್ಲವು ಬಂಡವಾಳ ಹೂಡಿಕೆಗೆ ಕರ್ನಾಟಕವು ಆದ್ಯತೆಯ ತಾಣವಾಗಿರುವುದಕ್ಕೆ ಮತ್ತು ವಿಶ್ವದಾದ್ಯಂತ ಬಂಡವಾಳ ಆಕರ್ಷಿಸಲು ಮುಂಚೂಣಿಯಲ್ಲಿ ಇರುವುದಕ್ಕೆ ನಿದರ್ಶನವಾಗಿದೆʼ ಎಂದು ಸಚಿವರು ವಿವರಿಸಿದ್ದಾರೆ.
ಬೃಹತ್ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ಬಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಇನ್ವೆಸ್ಟ್ ಕರ್ನಾಟಕ ಫೋರಂ ಸಿಇಒ ಜೋತ್ಸ್ನಾ, ಕೆಐಎಡಿಬಿ ಸಿಇಒ ಡಾ.ಮಹೇಶ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಇದ್ದರು.