ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ದ ಮಧುರೆ ಹೋಬಳಿ ಕನಸವಾಡಿ (ಚಿಕ್ಕಮಧುರೆ – Kanasavadi) ಕ್ಷೇತ್ರದಲ್ಲಿ ಗುರುವಾರ ಶ್ರೀ ಶನಿಮಹಾತ್ಮ ಸ್ವಾಮಿಯ (Sri Shanimahatma Swamy) 71ನೇ ವರ್ಷದ ಬ್ರಹ್ಮ ರಥೋತ್ಸವ (Brahma Rathotsava) ವಿಜೃಂಭಣೆಯಿಂದ ನಡೆಯಿತು.
ದೊಡ್ಡಬಳ್ಳಾಪುರ, ಬೆಂಗಳೂರು, ನೆಲಮಂಗಲ ಸೇರಿದಂತೆ ರಾಜ್ಯ ವಿವಿದೆಡೆಗಳಿಂದ ಸಹಸ್ರಾರು ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿ ಹಣ್ಣು, ದವನ ಸಮರ್ಪಿಸಿ ಧನ್ಯತೆ ಮೆರೆದರು.
ರಥೋತ್ಸವದಲ್ಲಿ ವೀರಗಾಸೆ, ಚಂಡೆ ವಾದ್ಯ, ಗಾರುಡಿ ಬೊಂಬೆ, ಸೋಮನ ಕುಣಿತ, ಕೇರಳದ ಕಲಾವಿದರ ದೇವತಾ ಮೂರ್ತಿಗಳ ಪ್ರದರ್ಶನಗಳ ತಂಡಗಳೊಡನೆ ತಮಟೆ ವಾದನೆ, ಮಂಗಳವಾದ್ಯ ಜಾನಪದ ಕಲಾತಂಡಗಳು ಭಾಗವಹಿಸಿದ್ದವು.
ಬ್ರಹ್ಮ ರಥೋತ್ಸವದ ಅಂಗವಾಗಿ, ಶ್ರೀ ಶನಿಮಹಾತ್ಮ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯದಲ್ಲಿ ಮಹಾಗಣಪತಿ, ನವಗ್ರಹ, ಶ್ರೀಶನೇಶ್ವರ ಹೋಮ, ಪೂಜಾ ಕಾರ್ಯ್ಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆಗಮಿಸಿದ್ದ ಭಕ್ತಾದಿಗಳಿಗೆ ದೇವಾಲಯದ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಕೋಡಿಹಳ್ಳಿ, ಮಾರಸಂದ್ರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ದೊಡ್ಡ ಗಾತ್ರದ ತಪ್ಪಲೆಗಳಲ್ಲಿ ಪಾನಕ, ಕೋಸಂಬರಿ, ಪ್ರಸಾದಗಳನ್ನು ಮಾಡಿಕೊಂಡು ವಿವಿಧ ವಾಹನಗಳಲ್ಲಿ ಬಂದಿದ್ದ ಗ್ರಾಮಸ್ಥರು ಭಕ್ತಾದಿಗಳಿಗೆ ಹಂಚಿಕೆ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ರಥೋತ್ಸವಕ್ಕೂ ಮುನ್ನ ಶನಿಮಹಾತ್ಮಸ್ವಾಮಿ ಮೆರವಣಿಗೆ ದೇವರನ್ನು ಪಾನಕ ಹಂಚಿಕೆ ಸ್ಥಳಕ್ಕೆ ಹೊತ್ತುಕೊಂಡು ಹೋಗಿ ಪೂಜೆ ಸಲ್ಲಿಸಲಾಯಿತು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಪೌರಾಣಿಕ ನಾಟಕೋತ್ಸವ
ನಿತ್ಯ ರಾತ್ರಿ 8-30ಕ್ಕೆ ನಡೆಯುವ ನಾಟಕೋತ್ಸವದಲ್ಲಿ ಫೆ.27ರಂದು ಕರುನಾಡ ಕನ್ನಡಾಂಭೆ ಸಾಂಸ್ಕೃತಿಕ ವೇದಿಕೆ ವತಿಯಿಂದ ರಾಜಾ ವಿಕ್ರಮ, ಫೆ.28ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದಿಂದ ಶನಿ ಪ್ರಭಾವ, ಮಾ.1ರಂದು ವಿಜಯಕುಮಾರಿ ಮಹಿಳಾ ಕಲಾ ತಂಡದಿಂದ ಕುರುಕ್ಷೇತ್ರ, ಮಾ.2ರಂದು ಚೆನ್ನಕೇಶವ ಕೃಪಾಪೋಷಿತ ನಾಟಕ ಮಂಡಲಿಯಿಂದ ಸಂಪೂರ್ಣ ರಾಮಾಯಣ, ಮಾ.3ರಂದು ಶ್ರೀ ಗಜೇಂದ್ರ ಕೃಪಾಪೋಷಿತ ನಾಟಕ ಮಂಡಲಿಯಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನಗಳು ನಡೆಯಲಿವೆ.