ದೊಡ್ಡಬಳ್ಳಾಪುರ (Doddaballapura): ವಿಶ್ವಹಿಂದೂಪರಿಷತ್ ಬಜರಂಗದಳ ದೊಡ್ಡಬಳ್ಳಾಪುರ ಪ್ರಖಂಡವತಿಯಿಂದ ಆಯೋಜಿಸಲಾಗಿರುವ ಶ್ರೀರಾಮ ಶೋಭಾ ಯಾತ್ರೆ ಅದ್ದೂರಿಯಾಗಿ ನಡೆಯುತ್ತಿದೆ.
ಮಧ್ಯಾಹ್ನ 3ಗಂಟೆಗೆ ನಗರದ ಪಿಎಲ್ಡಿ ಬ್ಯಾಂಕ್ ಮುಂಭಾಗದಿಂದ ಆರಂಭವಾಗಿರುವ ಶೋಭಾಯಾತ್ರೆ ಮಳೆಯ ನಡುವೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಿದೆ.
ಭಾರತ ಮಾತೆ, ಶ್ರೀರಾಮ, ಹನುಮ, ಶಿವ, ಭುವನೇಶ್ವರಿ, ಡಾ.ಬಿ.ಆರ್.ಅಂಬೇಡ್ಕರ್, ಶಿವಾಜಿ ಪ್ರತಿಮೆಗಳೊಂದಿಗೆ ವಿವಿಧ ಕಲಾತಂಡಗಳು ಭಾಗವಹಿಸಿವೆ.
ಶ್ರೀರಾಮನ ಚಿತ್ರವುಳ್ಳ ಕೇಸರಿ ಧ್ವಜ ಹಿಡಿದು ಜೈ ಶ್ರೀ ರಾಮ್.. ಜೈ ಶ್ರೀ ರಾಮ್ ಎಂದು ಭಕ್ತಿ ಭಾವದಿಂದ ಭಕ್ತರು ಉದ್ಘೋಷ ಕೂಗಿದರು.
ಶೋಭಾ ಯಾತ್ರೆಯಲ್ಲಿ ಸಾವಿರಾರು ಯುವಕರು ಶ್ರೀ ರಾಮನ ಭಕ್ತಿಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸುತ್ತಿದ್ದಾರೆ.
ಅಪರ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜ್, ಡಿವೈಎಸ್ಪಿ ರವಿ, ಇನ್ಸ್ಪೆಕ್ಟರ್ಗಳಾದ ಅಮರೇಶ್ ಗೌಡ, ಸಾಧಿಕ್ ಪಾಷಾ, ಡಾ.ಎಂ.ಬಿ.ನವೀನ್ ಕುಮಾರ್, ರಾವ್ ಗಣೇಶ್ ಜನಾರ್ಧನ್, ಸೇರಿದಂತೆ ವಿಶ್ವನಾಥಪುರ, ನೆಲಮಂಗಲ ಮುಂತಾದ ಕಡೆಗಳಿಂದ ಸಾವಿರಾರು ಸಿಬ್ಬಂದಿಗಳು ಭದ್ರತೆಯಲ್ಲಿ ನಿರತರಾಗಿದ್ದಾರೆ.
ಸಂಜೆ ಕಾಸರಗೂಡಿನ ಕುಂಟಾರು ರವೀಶ್ ತಂತ್ರಿ ಅವರಿಂದ ದಿಕ್ಸೂಚಿ ಭಾಷಣವಿದೆ. ಸಂಜೆ ಭಗತ್ಸಿಂಗ್ ಕ್ರೀಡಾಂಗಣದಲ್ಲಿ ಲೇಸರ್ ಶೋ, ಬೃಹತ್ ರಾವಣ ದಹನ ಮತ್ತು ಆಕರ್ಷಕ ಸಿಡಿಮದ್ದುಗಳ ಪ್ರದರ್ಶನ ಕಾರ್ಯಕ್ರಮಗಳಿವೆ.