ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ(TAPMCS) ಐದು ವರ್ಷಗಳ ಆಡಳಿತ ಮಂಡಳಿಯ ಅಧಿಕಾರವದಿ ಮುಕ್ತಾಯವಾಗಿದೆ. ನವೆಂಬರ್ 2ಕ್ಕೆ ನಿರ್ದೇಶಕರ ಆಯ್ಕೆಗೆ ಚುನಾವಣ ದಿನಾಂಕ ನಿಗದಿಯಾಗಿದೆ. ಆದರೆ ಇನ್ನು ಚುನಾವಣೆ ವೇಳಾಪಟ್ಟಿ ಪ್ರಕಟವಾಗಿಲ್ಲ.
ಈ ಹಿನ್ನೆಯಲ್ಲಿ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದ್ದು ‘ಬಿ’ ತರಗತಿಯಿಂದ(ಷೇರುದಾರರು) 6,557 ಜನ ಮತದಾರರು ಇದ್ದಾರೆ. ತಾಲ್ಲೂಕಿನ ವ್ಯವಸಾಯ ಸೇವಾ ಸಹಕಾರ ಸಂಘಗಳಿಂದ ‘ಎ’ ತರಗತಿಗೆ 20 ಜನ ಮತದಾನ ಪ್ರತಿನಿಧಿಗಳಾಗಿ ಆಯ್ಕೆಯಾಗಿ ಬಂದಿದ್ದಾರೆ.
13 ನಿರ್ದೇಶಕ ಸ್ಥಾನಗಳನ್ನು ಹೊಂದಿರುವ ಟಿಎಪಿಎಂಸಿಎಸ್ನಲ್ಲಿ ‘ಎ’ ತರಗತಿಗೆ 5 ಸ್ಥಾನ, ‘ಬಿ’ ತರಗತಿಗೆ 8 ಸ್ಥಾನಗಳಿವೆ. 8 ಜನ ನಿರ್ದೇಶಕ ಸ್ಥಾನಗಳ ಪೈಕಿ 2 ಸಾಮಾನ್ಯ ಅಭ್ಯರ್ಥಿಗಳಿಗೆ,1 ಬಿಸಿಎಂ ‘ಬಿ’, 1 ಬಿಸಿಎಂ ‘ಎ’, 2 ಮಹಿಳಾ ಅಭ್ಯರ್ಥಿಗಳಿಗೆ, 1 ಪರಿಶಿಷ್ಟ ಜಾತಿ, 1 ಪರಿಶಿಷ್ಠ ಪಂಗಡಕ್ಕೆ ಮೀಸಲಾಗಿದೆ. ಉಳಿದಂತೆ ಬಿಡಿಸಿಸಿ ಬ್ಯಾಂಕ್ ಪ್ರತಿನಿಧಿಯಾಗಿ 1 ಹಾಗೂ ಸರ್ಕಾರದ ನಾಮನಿರ್ದೇಶನದ ಮೂಲಕ ಒಬ್ಬರು ನೇಮಕವಾಗಲಿದೆ.
ಸಹಕಾರಿ ಕ್ಷೇತ್ರದಲ್ಲಿ ಯಾವುದೇ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ನಡೆಯುವುದಿಲ್ಲ. ಆದರೂ ಸಹ ಮೂರು ರಾಜಕೀಯ ಪಕ್ಷಗಳಿಗು ಟಿಎಪಿಎಂಸಿಎಸ್ ಆಡಳಿತದ ಚುಕ್ಕಾಣಿ ನಮ್ಮ ಪಕ್ಷದವರ ಕೈಯಲ್ಲೇ ಇರಬೇಕು ಎನ್ನುವ ಪ್ರತಿಷ್ಟೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ.
ಸಂಘದ ಅಧಿಕಾರವದಿ ಮುಕ್ತಾಯವಾಗುತ್ತಿದಂತೆ ಅರ್ಹ ಹಾಗೂ ಸಮರ್ಥ ಅರ್ಥಿಗಳನ್ನು ಚುನಾವಣ ಕಣಕ್ಕೆ ಇಳಿಸಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಮೊದಲ ಸುತ್ತಿನ ಪೂರ್ವಭಾವಿ ಸಭೆಗಳನ್ನು ನಡೆಸಿ ಆಕಾಂಕ್ಷಿಗಳ ಪಟ್ಟಿಯನ್ನು ಪಡೆದಿದ್ದಾರೆ.
ಪ್ರಸ್ತುತ ‘ಎ’ ತರಗತಿಯಿಂದ ನಿರ್ದೇಶಕರಾಗಿದ್ದ ಎಂ.ಗೋವಿಂದರಾಜು, ಎಂ.ವೆಂಕಟೇಶ್, ಡಿ.ಸಿದ್ದರಾಮಯ್ಯ ಅವರು ‘ಎ’ತರಗತಿಗೆ ಸ್ಪರ್ಧಿಸಲು ಪ್ರತಿನಿಧಿಗಳಾಗಿ ಆಯ್ಕೆಯಾಗಿ ಬಂದಿದ್ದು ಟಿಎಪಿಎಂಸಿಎಸ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುವ ಅರ್ಹತೆ ಪಡೆದಿದ್ದಾರೆ.
ಬಿಜೆಪಿಗೆ ಪ್ರತಿಷ್ಠೆ
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಬಿಜೆಪಿ ಶಾಸಕರು ಅಧಿಕಾರದಲ್ಲಿ ಇರುವ ಹಿನ್ನೆಲೆಯಲ್ಲಿ ಟಿಎಪಿಎಂಸಿಎಸ್ನಲ್ಲಿ ಹೆಚ್ಚಿನ ನಿರ್ದೇಶಕ ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು ಎನ್ನುವ ಪ್ರತಿಷ್ಠೆಯಾಗಿದೆ.
ಸೋಮವಾರ ಕಾಂಗ್ರೆಸ್ ಪಟ್ಟಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಹೆಚ್ಚಿನ ಸ್ಥಾನಗಳಲ್ಲಿ ಆಯ್ಕೆಯಾಗುವ ಮೂಲಕ ಪಕ್ಷ ಸಂಘಟನೆಗೆ ಈ ಚುನಾವಣೆಯನ್ನು ದಿಕ್ಸೂಚಿಯಾಗಿಸಿಕೊಳ್ಳುವ ತವಕ ಕಾಂಗ್ರೆಸ್ಗಿದ್ದು, ಮಾಜಿ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಸಿದ್ದವಾಗಿಸಿದ್ದು, ಅಂತಿಮವಾಗಿ ಪರಿಶೀಲಿಸಿ ಸೋಮವಾರ ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.
ಜೆಡಿಎಸ್ಗೆ ಮೈತ್ರಿ ಗೊಂದಲ
ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ಅವರ ನೇತೃತ್ವದಲ್ಲಿ ಹಲವು ಸಭೆ ಬಳಿಕ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಸಿದ್ದವಾಗಿದೆ. ಆದರೆ ಇತ್ತೀಚೆಗೆ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡ ಅವರು ಪಂಚಾಯಿತಿಯಿಂದ ಶಾಸಕ ಸ್ಥಾನದವರೆಗೆ ಜೆಡಿಎಸ್- ಬಿಜೆಪಿ ಮೈತ್ರಿ ಮುಂದುವರಿಯಲಿದೆ ಎಂದಿರುವುದು ಗೊಂದಲಕ್ಕೆ ಕಾರಣವಾಗಿದ್ದು, ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ತಡೆ ಬಿದ್ದಿದೆ ಎನ್ನಲಾಗುತ್ತಿದೆ.
ಜೆಡಿಎಸ್ ಪಕ್ಷದ ಕೆಲ ಮುಖಂಡರು ಬಿಜೆಪಿಯೊಂದಿಗಿನ ಎನ್ಡಿಎ ಮೈತ್ರಿಯನ್ನು ಮುಂದುವರೆಸಿಕೊಂಡು ಹೋಗಬೇಕು ಎನ್ನುವವಾದ ಹಾಗೂ ಕೆಲವರು ಕಾಂಗ್ರೆಸ್ ಅಥವಾ ಸ್ವತಂತ್ರವಾಗಿಯೇ ಸ್ಪರ್ಧಿಸಿದರೆ ಆಕಾಂಕ್ಷಿಗಳಿಗೆ ಹೆಚ್ಚಿನ ಸ್ಥಾನ ದೊರೆಯಲಿವೆ, ಪಕ್ಷ ಸಂಘಟನೆಗು ಸಹಕಾರಿಯಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.