
ದೊಡ್ಡಬಳ್ಳಾಪುರ: ತಾಲೂಕಿನ ಘಾಟಿ ಸುಬ್ರಹ್ಮಣ್ಯ ರಸ್ತೆಯಲ್ಲಿನ ಹಾಡೋನಹಳ್ಳಿಯ ಚೌಡೇಶ್ವರಿ ದೇವಸ್ಥಾನದಲ್ಲಿ (Chowdeshwari Temple) ಮತ್ತೆ ಕಳ್ಳತನ ಪ್ರಕರಣ ನಡೆದಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಭಾನುವಾರ ರಾತ್ರಿ 10ಗಂಟೆಗೆ ಅಪರಿಚಿತ ಕಳ್ಳನೋರ್ವ ಚೌಡೇಶ್ವರಿ ದೇವಸ್ಥಾನದ ಬಾಗಿಲಿಗೆ ಅಳವಡಿಸಿದ್ದ ಚಿಲಕಗಳನ್ನು ಸ್ಕ್ರೂ ಡ್ರೈವರ್ ಮೂಲಕ ಬಿಚ್ಚಿದ್ದು, ಹಾರೆ ಕೋಲು ಬಳಸಿ, ಡೋರ್ ಲಾಕ್ ಮುರಿದು ದೇವಾಲಯವನ್ನು ಪ್ರವೇಶಿಸಿ, ಕಾಣಿಕೆ ಹುಂಡಿಯ ಬಾಗಿಲು ಮುರಿದು ಸುಮಾರು 50 ಸಾವಿರ ಮೌಲ್ಯದ ಕಾಣಿಕೆ ಕದ್ದಿದ್ದಾನೆ.
ಪ್ರಸಾದ ಸೇವಿಸಿದ ತೆರಳಿದ ಕಳ್ಳ..!
ಕಳ್ಳತನದ ಬಳಿಕ ಚೌಡೇಶ್ವರಿ ದೇವಸ್ಥಾನದ ಸಮೀಪದಲ್ಲಿಯೇ ಇರುವ ಅಯ್ಯಪ್ಪ ಸ್ವಾಮಿ ದೇವಾಲಯದದಲ್ಲಿ ಮಾಲಾಧಾರಿಗಳು ಪ್ರಸಾದ ಸೇವಿಸುವ ಸ್ಥಳಕ್ಕೆ ತೆರಳಿದ್ದು, ಅವರಿಗೆ ಪ್ರಸಾದ ನೀಡುವಂತೆ ಕೋರಿದ್ದು, ಮಾಲಾಧಾರಿಗಳು ನೀಡಿದ ಪ್ರಸಾದವನ್ನು ಎರಡು ತುತ್ತು ಸೇವಿಸಿ, ಉಳಿದಿದನ್ನು ಪೇಪರ್ನಲ್ಲಿ ತುಂಬಿಕೊಂಡಿದ್ದಾನೆ. ಈ ವೇಳೆ ಮಾಲಾಧಾರಿಗಳು ಯಾವ ಊರು ಎಂದು ಪ್ರಶ್ನಿಸಿದಾಗ ತೂಬಗೆರೆ ಎಂದು ಹೇಳಿ ತೆರಳಿದ್ದಾಗಿ ತಿಳಿದುಬಂದಿದೆ.
ಇಂದು ಬೆಳಗ್ಗೆ ಚೌಡೇಶ್ವರಿ ದೇವಸ್ಥಾನದ ಬಳಿ ಗ್ರಾಮಸ್ಥರು ತೆರಳಿದಾಗ ಕಳ್ಳತನ ನಡೆದಿರುವುದು ಕಂಡುಬಂದಿದ್ದು, ಕೆಲ ತಿಂಗಳ ಬಳಿಕ ಮತ್ತೆ ದೇವಾಲಯದಲ್ಲಿ ಕಳ್ಳತನ ನಡೆದಿರುವುದು ಕಂಡು ಗ್ರಾಮಸ್ಥರು ಆತಂಕಕ್ಕೆ ಒಳಾಗಿದ್ದಾರೆ.
ಕಳ್ಳತನ ನಡೆದಿರುವ ದೃಶ್ಯಾವಳಿಗಳು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.