ದೊಡ್ಡಬಳ್ಳಾಪುರ, (ಜುಲೈ.27): ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ 80ರಷ್ಟು ಉದ್ಯೋಗ ಕಲ್ಪಿಸಿಕೊಡುವಂತೆ ಹಾಗೂ ಡಾ.ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಶುಕ್ರವಾರ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತಾಲ್ಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಎ.ನಂಜಪ್ಪ,ಜಿಲ್ಲಾ ಮುಖಂಡ ಅಗ್ನಿ ವೆಂಕಟೇಶ್,ಕನ್ನಡ ಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷ ನಾಗರಾಜು, ಮಾತನಾಡಿ, ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳಲ್ಲಿ ಉದ್ಯೋಗ ಮೀಸಲಾತಿ ನೀಡುವ ವಿದೇಯಕವನ್ನು ಜಾರಿಗೆ ತರಬೇಕು. ಇಲ್ಲಿನ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದು ಕನ್ನಡಿಗರ ಸ್ವಾಭಿಮಾನದ ಉದ್ಯೋಗವನ್ನು ಹೊರ ರಾಜ್ಯದ ಕಾರ್ಮಿಕರಿಗೆ ನೀಡುತ್ತಿರುವುದು ಖಂಡನೀಯ. 40 ವರ್ಷಗಳ ಇತಿಹಾಸ ಇರುವ ಡಾ.ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಬೇಕು ಎಂದರು.
ರಾಜ್ಯದಲ್ಲಿ ಇಲ್ಲಿಯವರೆಗೆ ಆಡಳಿತ ನಡೆಸಿರುವ ಎಲ್ಲಾ ರಾಜಕೀಯ ಪಕ್ಷಗಳು ಸಹ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಖಾಶಗಿ ಕಂಪನಿಗಳು ಉದ್ಯೋಗ ನೀಡಿಕೆಯಲ್ಲಿ ಸದಾ ಕನ್ನಡಿಗರನ್ನು ವಂಚಿಸುತ್ತಲೇ ಬರುತ್ತಿವೆ. ಕಾನೂನಿನ ಜಾರಿಯ ಮೂಲಕವೇ ಮಾತ್ರವೇ ಕನ್ನಡಿಗರಿಗೆ ಉದ್ಯೋಘ ದೊರಕಿಸಿಕೊಡಲು ಸಾಧ್ಯ.
ಬಡವರ ಕಷ್ಟಗಳ ಹಾಗೂ ಬಡವರ ಮಕ್ಕಳು ಓದಿ ಮುಂದೆಬರುವುದು ಎಷ್ಟು ಕಷ್ಟವಾಗಿರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಇಚ್ಚಾಶಕ್ತಿ ಪ್ರದರ್ಶಿಸಬೇಕಿದೆ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಕಾರ್ಮಿಕ ಘಟಕದ ಅಧ್ಯಕ್ಷ ಗುರುಪ್ರಸಾದ್, ಸಂಘಟನಾ ಕಾರ್ಯದರ್ಶಿ ವಿಶ್ವನಾಥ್, ನಗರ ಘಟಕದ ಅಧ್ಯಕ್ಷ ತರುಣ್ಸರ್ಜಾ, ಕಸಬಾ ಘಟಕದ ಅಧ್ಯಕ್ಷ ಗಿರೀಶ್, ಪೀರ್ಪಾಷಾ, ಪಚಡಿವಾಲ,ನಯಾಜ್ ಖಾನ್, ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಹರಿಕುಮಾರ್,ಮಹಿಳಾ ಮುಖಂಡರಾದ ಕುಮುದಾ, ಶಶಿಕಲಾ, ಪದ್ಮ,ಕಲಾ ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….