ದೊಡ್ಡಬಳ್ಳಾಪುರ: ಕೋವಿಡ್-19 ನಿಯಂತ್ರಣ,ಲಾಕ್ಡೌನ್ ಸಂತ್ರಸ್ತರಿಗೆ ಪರಿಹಾರ, ನೇಕಾರರಿಗೆ ವಿಶೇಷ ನೆರವು,ನಗದು ವರ್ಗೀಕರಣ ಹಾಗೂ ಆರ್ಥಿಕ ಪುನಶ್ಚೇತನ ಕ್ರಮಗಳಿಗೆ ಒತ್ತಾಯಿಸಿ,ಸಿಪಿಐ(ಎಂ) ವತಿಯಿಂದ ನಗರದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ ಮಾತನಾಡಿ, ಕೊರೊನಾ ಪರಿಣಾಮದಿಂದಾಗಿ ದೇಶದ ಕಾರ್ಮಿಕರು ಹಾಗೂ ದುಡಿಯುವ ವರ್ಗ ಬೀದಿಪಾಲಾಗಿದ್ದು, ಕೊರೊನಾ ಪರಿಸ್ಥಿತಿ ನಿಭಾಯಿಸುವಲ್ಲಿ ಕೇಂದ್ರದ ಮೋದಿ ಸರ್ಕಾರ ವಿಫಲವಾಗಿದೆ. ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡುತ್ತಿರುವ ಮೋದಿ ಸರ್ಕಾರ ಕಾರ್ಮಿಕರನ್ನು ಬಡ ಜನರನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಪಿ.ಎ.ವೆಂಕಟೇಶ್ ಮಾತನಾಡಿ,ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು,ದುಡಿಯುವ ವರ್ಗ ಕೆಲಸವಿಲ್ಲದೇ ಬೀದಿ ಪಾಲಾಗುತ್ತಿದ್ದಾರೆ. ಅಂತರಾಜ್ಯ ಕಾರ್ಮಿಕರು ಕೆಲಸವಿಲ್ಲದೇ ನೂರಾರು ಮೈಲಿ ನಡೆದು, ಹಸಿವಿನಿಂದ ಸಾವನ್ನಪ್ಪಿದ್ದಾರೆ, ಆದರೂ ಸಹ ಮಾಧ್ಯಮಗಳಲ್ಲಿ ಮೋದಿ ಅವರ ಸಾಧನೆ ಗುಣದಾನ ಮಾಡಲಾಗುತ್ತಿದೆ. ನಗರದಲ್ಲಿ ನೇಕಾರರು ಮಗ್ಗಗಳನ್ನು ನಡೆಸಲಾಗದೇ ದಿವಾಳಿಯಾಗಿದ್ದಾರೆ. ಈ ದಿಸೆಯಲ್ಲಿ ಕೊರೊನಾ ವೈರಸ್ ಹಾವಳಿಯಿಂದ ಆದ ಲಾಕ್ಡೌನ್ನಿಂದಾಗಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿ ಪರಿಸ್ಥಿತಿ ಸುಧಾರಿಸುವವರೆವಿಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವು ಅವಶ್ಯವಿದ್ದು,ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕಿದೆ ಎಂದು ಒತ್ತಾಯಿಸಿದರು.
ಒತ್ತಾಯಗಳು:ಆದಾಯ ತೆರಿಗೆ ಪಾವತಿಸುವ ಮಿತಿಗಳ ಹೊರಗಿರುವ ಎಲ್ಲಾ ಕುಟುಂಬಗಳಿಗೆ ತಿಂಗಳಿಗೆ ರೂ.7500ಗಳಂತೆ ಆರು ತಿಂಗಳ ವರೆಗೆ ನಗದು ವರ್ಗಾವಣೆ ಮಾಡಬೇಕು. ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆ.ಜಿ ಯಂತೆ ಆರು ತಿಂಗಳವರೆಗೆ ಉಚಿತ ಆಹಾರ ದಾನ್ಯಗಳನ್ನು ವಿತರಣೆ ಮಾಡಬೇಕು. ಉದ್ಯೋಗ ಖಾತ್ರಿ ಅಡಿಯಲ್ಲಿ ಹೆಚ್ಚಿಸಿದ ಕೂಲಿಯೊಂದಿಗೆ, ನಗರದ ಬಡವರಿಗೂ ಉದ್ಯೋಗ ಖಾತ್ರಿ ಯೋಜನೆಯನ್ನು ವಿಸ್ತರಿಸಬೇಕು. ನಿರುದ್ಯೋಗಿಗಳಿಗೆ ತಕ್ಷಣವೇ ಒಂದು ನಿರುದ್ಯೋಗ ಭತ್ಯೆ ನೀಡಬೇಕು. ಖಾಸಗೀಕರಣವನ್ನು ತಡೆಯಬೇಕು. ಕೃಷಿ ಉತ್ಪನ್ನ ಮಾರಾಟ ಹಾಗೂ ವಾಣಿಜ, ಬೆಲೆ ಖಾತರಿ, ಕೃಷಿ ಸೇವೆಗಳ ಕುರಿತ ರೈತರ ಒಪ್ಪಂದ,ಅಗತ್ಯ ಸೇವೆಗಳ ಕಾಯ್ದೆ ತಿದ್ದುಪಡಿ 2020, ಈ ಮೂರು ಸುಗ್ರೀವಾಜ್ಞೆಗಳು ವಾಪಾಸಾಗಬೇಕು. ನೇಕಾರರ ವಿದ್ಯುತ್ ಬಿಲ್ಲ್ಗಳನ್ನು ಮನ್ನಾ ಮಾಡಬೇಕು. ನೇಕಾರರಿಗೆ ಯಾರ್ನ್ ಮತ್ತು ಫ್ಯಾಬ್ರಿಕ್ ಬ್ಯಾಂಕ್ ತೆರೆಯಬೇಕು. ಜಿ.ಎಸ್.ಟಿ.ಯಿಂದ ಮುಕ್ತಿಗೊಳಿಸಬೇಕು. ನೇಯ್ಗೆ ಉದ್ಯಮದಲ್ಲಿರುವವರನ್ನು ಅಸಂಘಟಿತ ಕಾರ್ಮಿಕರನ್ನಾಗಿ ಪರಿಗಣಿಸಬೇಕು. ಜವಳಿ ಇಲಾಖೆಯಿಂದ ಗುರುತಿನ ಚೀಟಿಯನ್ನು ನೀಡಬೇಕು. ಪಕ್ಕದ ರಾಜ್ಯಗಳಲ್ಲಿ ನೀಡುವಂತೆ ತಿಂಗಳಿಗೆ 2 ಸಾವಿರ ನೀಡಬೇಕು. ಕರ್ನಾಟಕದಲ್ಲಿ ಆರೋಗ್ಯ ಪರಿಕರಗಳು, ವೆಂಟಿಲೇಟರ್ಸ್, ಅಗತ್ಯ ಔಷಗಳ ತೀವ್ರ ಕೊರತೆ ಇದ್ದು ಅವುಗಳನ್ನು ಗರಿಷ್ಠಪ್ರಮಾಣದಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಪೂರೈಸಬೇಕು. ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕೂಡಲೇ ಇಳಿಸಬೇಕು ಎನ್ನುವ ಒತ್ತಾಯಗಳನ್ನು ಮಂಡಿಸಲಾಯಿತು.
ಪ್ರತಿಭಟನೆಯಲ್ಲಿ ಮುಖಂಡರಾದ ಎಸ್.ರುದ್ರಾರಾಧ್ಯ,ರೇಣುಕಾರಾಧ್ಯ, ಚೌಡಯ್ಯ,ಕೆ.ರಘುಕುಮಾರ್,ಪಿ.ಆದಿನಾರಾಯಣ ರೆಡ್ಡಿ,ಹರೀಂದ್ರ, ಆರ್.ಆರ್.ಮನೋಹರ್,ನರಸಿಂಹ ಮೂರ್ತಿ,ಬಸವರಾಜು,ಹರೀಶ್, ಮತ್ತಿತರರು ಭಾಗವಹಿಸಿದ್ದರು.