ಚಿಕ್ಕಬಳ್ಳಾಪುರ: ಗಂಡನ ಜೊತೆ ಜಗಳ ಮಾಡಿಕೊಂಡು ಹೆಂಡತಿ ತವರು ಮನೆ ಸೇರಿದ್ದಕ್ಕೆ ಆಕ್ರೋಶಗೊಂಡ ಗಂಡ, ಹೆಂಡತಿಯನ್ನ ಕರೆತರಲು ಹೆಂಡತಿ ಮನೆಗೆ ಬಂದಿದ್ದಾನೆ.. ಆದರೆ ಈ ವೇಳೆ ನಡೆದ ಜಗಳದಲ್ಲಿ ಅಳಿಯನೇ ಅತ್ತೆ ಹಾಗೂ ಮಾವನ ಮೇಲೆ ಮಚ್ಚಿನಿಂದ ಆಟ್ಯಾಕ್ ಮಾಡಿದ್ದಾನೆ. ಘಟನೆಯಲ್ಲಿ ಅತ್ತೆ ಸಾವನ್ನಪ್ಪಿದ್ದು ಮಾವ ಆಸ್ಪತ್ರೆಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಿಂಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಂದಹಾಗೆ 43 ವರ್ಷದ ಕವಿತಮ್ಮ ಮೃತ ಅತ್ತೆಯಾಗಿದ್ದು, 25 ವರ್ಷದ ಚಂದ್ರು ಕೊಲೆ ಮಾಡಿರುವ ಅಳಿಯ.
ಇನ್ನೂ ಘಟನೆಯಲ್ಲಿ ತಲೆಗೆ ಗಂಭೀರವಾಗಿ ಗಾಯಗೊಂಡಿರುವ ಮಾವ ಈಶ್ವರಪ್ಪ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸಲಿಗೆ ಈಶ್ವರಪ್ಪ ತನ್ನ ಸಹೋದರಿ ಯಶೋಧಮ್ಮ ಪುತ್ರ ಚಂದ್ರುವಿಗೆ ತನ್ನ ಮಗಳಾದ ಮಮತಾಳನ್ನ ಕೊಟ್ಟು ವಿವಾಹ ಮಾಡಿಕೊಟ್ಟಿದ್ದ.. ಆದ್ರೆ ಇಬ್ಬರ ನಡುವೆ ಆಸ್ತಿ ವಿವಾದ ಇದ್ದ ಹಿನ್ನೆಲೆಯಲ್ಲಿ ಮಗಳು ಮಮತಾಳಿಗೆ ಗಂಡ ಚಂದ್ರು ಹಾಗೂ ಆಕೆಯ ಆತ್ತೆ ಯಶೋಧಮ್ಮ ಕಿರುಕುಳ ಕೊಡುತ್ತಿದ್ದರಂತೆ, ಇದರಿಂದ ಮನನೊಂದಿರೋ ಮಮತಾ 10 ದಿನಗಳ ಹಿಂದೆ ತವರು ಮನೆಗೆ ವಾಪಾಸ್ಸಾಗಿದ್ದಳು.
ಇದೇ ವಿಚಾರವಾಗಿ ನಿನ್ನೆ ಅತ್ತೆಯ ಮನೆಗೆ ಬಂದಿದ್ದ ಅಳಿಯ ಚಂದ್ರು ಅತ್ತೆ ಮಾವನ ಜೊತೆ ಮಗಳನ್ನ ಮನೆಗೆ ಕಳುಹಿಸುವಂತೆ ಆಸ್ತಿ ಭಾಗ ಕೊಡುವಂತೆ ಒತ್ತಡ ಹಾಕಿದ್ನಂತೆ.. ಈ ವೇಳೆ ಮಾತಿಗೆ ಮಾತು ಬೆಳೆದು ಅಳಿಯ ಚಂದ್ರು ಮಚ್ಚಿನಿಂದ ಅತ್ತೆಯ ಮೇಲೆ ಹಲ್ಲೆ ಮಾಡಿದ್ದು ಅತ್ತೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
ಅತ್ತೆಯ ಮೇಲೆ ಹಲ್ಲೆ ತಡೆಯಲು ಹೋದ ಮಾವ ಈಶ್ವರಪ್ಪ ತಲೆಗೂ ಸಹ ಗಂಭೀರವಾದ ಗಾಯವಾಗಿ ಆಸ್ಪತ್ರೆ ಸೇರಿದ್ದಾರೆ.
ಘಟನೆ ನಂತರ ಆರೋಪಿ ಅಳಿಯ ಚಂದ್ರು ಪರಾರಿಯಾಗಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.