
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

ಇರಾನ್ ತನ್ನ ಪ್ರಮುಖ ಮಸೀದಿಯ ಮೇಲೆ ಕೆಂಪು ಬಾವುಟ ಹಾರಿಸಿದ್ದು ತೀವ್ರ ಸ್ವರೂಪದ ಪ್ರತಿದಾಳಿಯ ಸುಳಿವು ನೀಡಿದೆ. ಇದು ಮುಂದುವರಿದರೆ ಭಾರತ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳ ಮೇಲೆ ಭಾರೀ ಹೊಡೆತ ಬೀಳಲಿದೆ.

ಪ್ರಮುಖವಾಗಿ ಭಾರತದ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಭಾರತಕ್ಕೆ ಕೊಲ್ಲಿ ರಾಷ್ಟ್ರಗಳಿಂದ ತೈಲ ಹರಿದುಬರುವುದೇ ಇರಾನ್ನಲ್ಲಿರುವ ಹೊರ್ಮುಜ್ ಜಲಸಂಧಿಯಿಂದ. ಸದ್ಯ ಇದೇ ಬಂದ್ ಆಗಿರುವುದರಿಂದ ತೈಲದ ಕೊರತೆಯಾಗುವ ಸಾಧ್ಯತೆ ದಟ್ಟವಾಗಿದೆ.
ಯುಎಇ, ಸೌದಿ, ಬದ್ರೇನ್ ನಿಂದ ಪೆಟ್ರೋಲ್ ಸರಬರಾಜಿನಲ್ಲಿ ವ್ಯತ್ಯಯ ವಾಗಲಿದೆ. ಪೆಟ್ರೋಲ್ ಬೆಲೆ ಜಾಸ್ತಿ ಆದರೆ, ಇತರೆ ವಸ್ತುಗಳನ್ನು ಒಂದು ಕಡೆಯಿಂದ ಇನ್ನೊಂದು ಸಾಗಿಸುವುದು ಕಷ್ಟವಾಗಲಿದೆ. ಆಗ ಆ ವಸ್ತುಗಳ ಬೆಲೆಯೂ ಹೆಚ್ಚಳ ವಾಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಬೆಲೆಯೇರಿಕೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ.
8ಲಕ್ಷ ಕೋಟಿ ನಷ್ಟ..!
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಘೋರ ಯುದ್ದ ನಡೆಯುತ್ತಿರುವ ಬೆನ್ನಲ್ಲೇ ಭಾರತೀಯ ಷೇರುಪೇಟೆಯಲ್ಲಿ ತಲ್ಲಣ ಶುರುವಾಗಿದೆ. ಸೋಮವಾರ ಬೆಳಗ್ಗೆ ಸೆನೆಕ್ 2,743 ಅಂಕಗಳ ಕುಸಿತದೊಂದಿಗೆ ಅಂದರೆ ಶೇ 3.34ರಷ್ಟು ಕುಸಿದು 78,543ರಲ್ಲಿ ವಹಿವಾಟು ಆರಂಭಿಸಿತ್ತು. 10 ಗಂಟೆ ಹೊತ್ತಿಗೆ ಕೊಂಚ ಚೇತರಿಸಿಕೊಂಡು 80,457ರಲ್ಲಿ ವಹಿವಾಟು ನಡೆಸುತ್ತಿತ್ತು. ಆದರೆ, ಜಾಗತಿಕ ಭೌಗೋಳಿಕ ರಾಜಕಾರಣದ ಪರಿಣಾಮದಿಂದ ಸೂಚ್ಯಂಕ ಭಾರಿ ಏರಿಳಿತ ಅನುಭವಿಸಿತು.
ಕೆಲ ವರದಿಗಳ ಪ್ರಕಾರ, ಮಾರುಕಟ್ಟೆ ಆರಂಭವಾಗಿ ಕೆಲವೇ ನಿಮಿಷಗಳಲ್ಲೇ ಹೂಡಿಕೆದಾರರು 28 ಲಕ್ಷ ಕೋಟಿ ರು. ಕಳೆದುಕೊಂಡಿದ್ದಾರೆ. ಬಿಎಸ್ ಇನ ಒಟ್ಟಾರೆ ಮಾರುಕಟ್ಟೆ ಬಂಡವಾಳ 463.50 ಲಕ್ಷ ಕೋಟಿನಿಂದ ₹455 ಲಕ್ಷ ಕೋಟಿಗೆ ಕುಸಿದಿದೆ.
ಸೋಮವಾರದ ಷೇರುಪೇಟೆ ವಹಿವಾಟು ಅಂತ್ಯದ ವೇಳೆಗೆ ಸೆನ್ಸೆಕ್ಸ್ 1,048.34 ಅಂಕ ಕುಸಿದು 80,238ರಲ್ಲಿ ವಹಿವಾಟು ಅಂತ್ಯಗೊಳಿಸಿದರೆ, ನಿಫ್ಟಿ 312 ಅಂಶ ಕುಸಿದು 24,865ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 500 ಅಂಕ ಕುಸಿತದೊಂದಿಗೆ 24,645ರಲ್ಲಿ ವಹಿವಾಟು ಆರಂಭಿಸಿತ್ತು. ಚಿನ್ನ ಬೆಳ್ಳಿ ಬೆಲೆಯೇರಿಕೆಯಾಗಿದೆ.
ರೂಪಾಯಿ ಮೌಲ್ಯ ಕುಸಿತ
ಯುದ್ಧ ನಡೆಯುತ್ತಿರುವ ಬೆನ್ನಲ್ಲೇ ಅಮೆರಿಕ ಡಾಲರ್ ಎದುರು ಭಾರತದ ರುಪಾಯಿ ಮೌಲ್ಯ 91ರ ಗಡಿ ದಾಟಿದೆ. ಪ್ರತಿ ಡಾಲರ್ಗೆ 91.50 ಆಗಿದೆ. ಇದರಿಂದಾಗಿ ವಿದೇಶಿ ಹೂಡಿಕೆ ಹೊರಹರಿವು, ಹೂಡಿಕೆ ವೆಚ್ಚ ಹೆಚ್ಚಾಗಿ ಕಂಪನಿಗಳ ಆದಾಯದ ಮೇಲೆ ಪರಿಣಾಮ ಬೀರುತ್ತಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಭಾರತೀಯ ಬ್ಯಾಂಕ್ ಮಧ್ಯ ಪ್ರವೇಶಿಸಿ, ರುಪಾಯಿ ಮೌಲ್ಯ ಕುಸಿತ ತಡೆಗೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈ ವರ್ಷ ₹91.98ಕ್ಕೆ ಕುಸಿದಿದ್ದ ರುಪಾಯಿ ಮೌಲ್ಯ ಬಳಿಕ ಚೇತರಿಕೆ ಕಂಡಿತ್ತು.
ಹೋಳಿ ಹಬ್ಬದ ಕಾರಣ ಮಾರ್ಚ್ 3 ರಂದು ಷೇರು ಮಾರುಕಟ್ಟೆ ಮುಚ್ಚಲಾಗುತ್ತಿದೆ. NSE-BSE ವಹಿವಾಟು ಸ್ಥಗಿತಗೊಂಡಿದ್ದು, MCX ಸಂಜೆಯ ಅವಧಿಯಲ್ಲಿ ತೆರೆಯುತ್ತದೆ; ಮಾರುಕಟ್ಟೆ ಮಾರ್ಚ್ 4 ರಂದು ತೆರೆಯುತ್ತದೆ.
ಭಾರತದ ನಿಲುವೇನು..?
ಯುದ್ಧದ ಸನ್ನಿವೇಶದ ಕುರಿತಂತೆ ನಿನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯುದ್ಧ ಆರಂಭವಾದ ಮೂರು ದಿನಗಳ ಬಳಿಕ ಹೇಳಿಕೆ ನೀಡಿದ್ದು, ಸಾಧ್ಯವಾದಷ್ಟು ಬೇಗ ಶಾಂತಿ ಸ್ಥಾಪಿಸಿ ಎಂದು ಹೇಳಿದ್ದಾರೆ.
ಆದರೆ ಮೋದಿ ಅವರ ಇಸ್ರೇಲ್ ಭೇಟಿ ಬೆನ್ನಲ್ಲೇ ಯುದ್ಧ ಆರಂಭವಾಗಿದ್ದು, ಯುದ್ಧದ ಘೋಷಣೆಗೆ ಮುನ್ನವೇ ಅಲಿ ಖಮೇನಿ ಅವರ ಹತ್ಯೆ ಮಾಡಲಾಗಿದೆ. ಆದರೆ ಕುರಿತಂತೆ ಪ್ರಧಾನಿ ಮೋದಿ ಅವರು ಪ್ರತಿಕ್ರಿಯೆ ನೀಡದೆ ಇರುವುದರಿಂದ ಭಾರತ ನಿಲುವು ಏನು ಎಂಬ ಪ್ರಶ್ನೆ ಕಾಡುತ್ತಿದೆ.
