ದೊಡ್ಡಬಳ್ಳಾಪುರ: ತಾಲ್ಲೂಕಿನ ಜಿಂಕೆಬಚ್ಚಹಳ್ಳಿಯ ಸಮೀಪ ಶನಿವಾರ ಕಾರೊಂದು (Car) ಅನುಮಾನಾಸ್ಪದ ರೀತಿಯಲ್ಲಿ ಸುಟ್ಟು ಕರಕಲಾಗಿದ್ದು ಅದರೊಳಗೆ ಮಹಿಳೆಯೊಬ್ಬರ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದ ಪ್ರಕರಣದಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದ್ದ ವ್ಯಕ್ತಿ, ರೈಲಿಗೆ ಸಿಲುಕಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಮೃತನನ್ನು ಮಾರಸಂದ್ರ ನಿವಾಸಿ ರಾಮಾಂಜಿನಪ್ಪ (46 ವರ್ಷ) ಎಂದು ಗುರುತಿಸಲಾಗಿದೆ.
ಬಿಡದಿ ಬಳಿ ರೈಲಿಗೆ ಸಿಲುಕಿ ರಾಮಾಂಜಿನಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಮೃತ ಶಶೀರದ ಬಳಿ ರಾಮಾಂಜಿನಪ್ಪಗೆ ಸೇರಿದ ಗುರುತಿನ ಚೀಟಿಗಳು ದೊರೆತಿದೆ. ಈ ಕುರಿತು ಮೆಜೆಸ್ಟಿಕ್ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ..
ಘಟನೆ ವಿವರ
ನಿನ್ನೆ ಶನಿವಾರ ತಾಲ್ಲೂಕಿನ ಜಿಂಕೆಬಚ್ಚಹಳ್ಳಿಯ ಸಮೀಪ ಶನಿವಾರ ಕಾರೊಂದು ಅನುಮಾನಾಸ್ಪದ ರೀತಿಯಲ್ಲಿ ಸುಟ್ಟು ಕರಕಲಾಗಿದ್ದು ಅದರೊಳಗೆ ಮಹಿಳೆಯೊಬ್ಬರ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿತ್ತು.
ಈ ಕಾರು ಮಾರಸಂದ್ರ ಸುರೇಶ್ ಎಂಬುವರಿಗೆ ಸೇರಿದೆ. ಅನಾರೋಗ್ಯದಿಂದ ಬಳಲುತ್ತಿರುವ ಕುಟುಂಬ ಸದಸ್ಯರನ್ನು ಆಸ್ಪತ್ರೆಗೆ ಕರೆದೊಯ್ಯುವುದಾಗಿ ಪಕ್ಕದ ಮನೆಯ ರಾಮಾಂಜಿನಪ್ಪ ಎಂಬುವರು ಕಾರನ್ನು ತೆಗೆದುಕೊಂಡು ಹೋಗಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದಿ ಬಂದಿತ್ತು.
ಕಾರು ಬೆಂಕಿಯಿಂದ ಸಂಪೂರ್ಣ ಭಸ್ಮವಾಗಿದ್ದು, ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದೆ. ಶವದ ಗುರುತು ಪತ್ತೆಯಾಗಿರಲಿಲ್ಲ. ಪೊಲೀಸರು ಮಹಿಳೆಯ ಗುರುತು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕಾರು ಪಡೆದಿದ್ದ ರಾಮಾಂಜಿನಪ್ಪ ಪರಾರಿಯಾಗಿದ್ದ.
ಅಸ್ಥಿ ಪಂಜರದ ಕೊರಳ ಭಾಗದಲ್ಲಿ ಚಿನ್ನದ ಸರದ ಮಾದರಿಯ ವಸ್ತು ಪತ್ತೆಯಾಗಿದೆ. ತಲೆಬುರುಡೆ ಹಾಗೂ ಕೈ ಕಾಲಿನ ಮೂಳೆಯ ಅವಶೇಷಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಕಾರು ಬೆಂಕಿಗೆ ಆಹುತಿಯಾದ ಸ್ಥಳದ ಸಮೀಪ ಇರುವ ನೀಲಗಿರಿ ತೋಪಿನಲ್ಲಿ ಚಾಲಕನ ಮೊಬೈಲ್ ಫೋನ್ ಮತ್ತು ಸ್ವಲ್ಪ ದೂರದಲ್ಲಿ ಅಂಗಿ ಪತ್ತೆಯಾಗಿತ್ತು.
ದೊಡ್ಡಬಳ್ಳಾಪುರ: ನಿರ್ಜನ ಪ್ರದೇಶದಲ್ಲಿ ಹೊತ್ತಿ ಉರಿದ ಕಾರು.. ಗೃಹಿಣಿ ಭಸ್ಮ..! pic.twitter.com/F49YiXQ3WF
— Harithalekhani (@harithalekhani) May 2, 2026
ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು. ಪರಾರಿಯಾದ ರಾಮಾಂಜಿನಪ್ಪನಿಗೆ ಪೊಲೀಸರು ಬಲೆ ಬೀಸಿದ್ದರು.
ಇನ್ನೂ ಕಾರಿನ ಮಾಲೀಕ ಸುರೇಶ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಪಾಂಡುರಂಗ, ಇನ್ಸ್ಪೆಕ್ಟರ್ ಸಾದಿಕ್ ಪಾಷಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಮೃತ ಮಹಿಳೆಯನ್ನು ದೇವನಹಳ್ಳಿ ತಾಲೂಕಿನ ಸುಜಾತ (35ವರ್ಷ) ಎಂದು ಗುರುತು ಪತ್ತೆಯಾಗಿದ್ದು, ಗೌರಿಬಿದನೂರಿನ ತಾಯಿಯ ಮನೆಯಿಂದ ಗಂಡನ ಮನೆಗೆಂದು ತೆರಳಿದ್ದ ಸುಜಾತ, ನಿನ್ನೆ ಕಾರಿನಲ್ಲಿ ಸುಟ್ಟು ಭಸ್ಮವಾಗಿದ್ದರು.
ಈ ಬೆನ್ನಲ್ಲೇ ಇಂದು ಪರಾರಿಯಾಗಿದ್ದರು ಎನ್ನಲಾದ ರಾಮಾಂಜಿನಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ.

