ದೊಡ್ದಬಳ್ಳಾಪುರ: ಇಲ್ಲಿನ ಪ್ರತಿಷ್ಠಿತ ಶಾಲೆಯಾದ ಎಂ ಎಸ್ ವಿ ಪಬ್ಲಿಕ್ ಶಾಲೆಯಲ್ಲಿ ಇಂದು ಅದ್ಧೂರಿಯ 69ನೇ ಕನ್ನಡ ರಾಜ್ಯೋತ್ಸವವನ್ನು (kannada rajyotsava) ಸಂಭ್ರಮದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲರಾದ ಸತ್ಯನಾರಾಯಣ ಶಾಸ್ತ್ರಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ನ್ಯಾಯವಾದಿ ಸತ್ಯನಾರಾಯಣ ಶಾಸ್ತ್ರಿ, “ಕನ್ನಡ ಕೇವಲ ಭಾಷೆಯಲ್ಲ, ಅದು ಜೀವನಾಮೃತ. ವಿದ್ಯಾರ್ಥಿ ಜೀವನದಲ್ಲಿ ಗುರುಗಳ ಪಾತ್ರ ಮಹತ್ವವಾದದ್ದು. ಮಕ್ಕಳು ವಿದ್ಯೆಯ ಜೊತೆಗೆ ವಿನಯವನ್ನೂ ಸಹ ಗಳಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: ದೊಡ್ಡಬಳ್ಳಾಪುರ: ANT ಅಕಾಡೆಮಿಗೆ MSV ಶಾಲಾ ಮಕ್ಕಳ ಭೇಟಿ..!
ಪ್ರೊ. ಕೆ.ಆರ್. ರವಿಕಿರಣ್ ಮಾತನಾಡಿ, ಎಲ್ಲ ಭಾಷೆಗಳೂ ತಮ್ಮ ತಮ್ಮ ಮಾತೃಭಾಷೆಯಾಗಿದೆ. ಕನ್ನಡ ಭಾಷೆ ಅನನ್ಯ ಹಾಗೂ ಸೃಜನ ಶೀಲ ಭಾಷೆ. ನಮ್ಮ ದೈನಂದಿನ ಜೀವನದಲ್ಲಿ ಕನ್ನಡದ ಬಳಕೆಯಿಂದ ಮಾತ್ರ ಇದನ್ನು ಉಳಿಸಲು ಸಾಧ್ಯ.
ಮುಂದಿನ ಪೀಳಿಗೆಗೆ ಕನ್ನಡ ಭಾಷೆಯನ್ನು ಬೆಳೆಸಬೇಕೆಂದರೆ – ವಿಜ್ಞಾನ, ವೈದ್ಯಕೀಯ ವಿಷಯಗಳು ಕನ್ನಡ ಭಾಷೆಯಾದರೆ ಎಲ್ಲರೂ ಕೂಡ ಪಾಲ್ಗೊಳ್ಳಲು ಸಾಧ್ಯ. ಕನ್ನಡ ಭಾಷೆ ಕರುಳಿಗೂ, ಮನಸಿಗೂ, ಹೃದಯಕ್ಕೂ ಸಂಬಂಧಿಸಿದ ಭಾಷೆ. ನಾಳೆಯ ಬಗ್ಗೆ ಕನಸಿದ್ದರೆ ಮಾತ್ರ ಕನ್ನಡ ಉಳಿಸಲು ಸಾಧ್ಯ ಎಂದು ತಿಳಿಸಿದರು.
ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಸುಬ್ರಮಣ್ಯ ಮಾತನಾಡಿ, “ ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಇತಿಹಾಸವಿದೆ. ಇಡೀ ಭಾರತದ ಎಲ್ಲಾ ರಾಜ್ಯಗಳು ಬೇರೆ ಬೇರೆ ಸಂಸ್ಕೃತಿಯನ್ನು ಹೊಂದಿದ್ದರೆ, ಅವೆಲ್ಲ ಸಂಸ್ಕೃತಿಯನ್ನು ಹೊಂದಿರುವ ರಾಜ್ಯ ನಮ್ಮ ಕರ್ನಾಟಕ. ಬೇರೆ ಯಾರೇ ಬಂದರೂ ನಮ್ಮ ನೆಲ ಅವರನ್ನು ನಮ್ಮವರು ಎಂದು ಅಪ್ಪಿ ಒಪ್ಪಿಕೊಳ್ಳುವ ಸಂಸ್ಕೃತಿ ನಮ್ಮ ನಾಡಿನದ್ದಾಗಿದೆ. ಅಂತಹ ಸಂಸ್ಕೃತಿಯನ್ನು ಹೊಂದಿರುವ ನಾವೇ ಪುಣ್ಯವಂತರು” ಎಂದರು.
ಇದನ್ನೂ ಓದಿ: ಅಬಾಕಸ್ ಸ್ಪರ್ಧೆಯಲ್ಲಿ MSV ಶಾಲೆಯ ಮಕ್ಕಳ ಸಾಧನೆ: ಆಡಳಿತ ಮಂಡಳಿಯಿಂದ ಅಭಿನಂದನೆ
ಕಾರ್ಯಕ್ರಮದಲ್ಲಿ ಮಕ್ಕಳು ಪ್ರಸ್ತುತಪಡಿಸಿದ, ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ಪೋಷಕರ ಮನಸೂರೆಗೊಂಡಿತು.

ಜನಪದ ಗೀತೆಗಳ ಮೂಲಕ ನಾಡಿನ ಇತಿಹಾಸ, ದೇವಾಲಯ, ಶಿಲ್ಪಕಲೆಗಳು, ನೃತ್ಯಗಳ ವಿವಿಧ ಪ್ರಾಕಾರಗಳನ್ನು ನೃತ್ಯದ ಮೂಲಕ ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ “ಹಳ್ಳಿಯ ಸೊಗಡು” – ಪರಿಕಲ್ಪನೆಯಲ್ಲಿ ಹಳ್ಳಿಯ ಪರಿಸರ, ಆಹಾರ ಧಾನ್ಯಗಳು, ಸಸಿಗಳು, ಹಣ್ಣು ಹಂಪಲುಗಳ ಪ್ರದರ್ಶನ ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗನ್ನು ನೀಡಿತು.
ಹಳ್ಳಿಯಲ್ಲಿ ರೈತರು ಬೆಳೆಯುವ ಬೆಳೆಗಳನ್ನು ಮಕ್ಕಳಿಂದ ಪೈರು ಬೆಳೆಸಿ, ದವಸ ಧಾನ್ಯಗಳು, ತರಕಾರಿ, ಹಣ್ಣು-ಹಂಪಲುಗಳ ಪ್ರದರ್ಶನವನ್ನು ಏರ್ಪಡಿಸಿ, ಬೆಳೆ ಬೆಳೆಯುವ ವಿಧಾನ, ಅವುಗಳ ಮಾಹಿತಿಯನ್ನು ಮಕ್ಕಳು ವಿವರಿಸಿದರು.
ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರುತ್ತ, ಪರಿಸರ ಸಂರಕ್ಷಣೆಯ ಹೊಣೆ ಹೊತ್ತು “ಹಸಿರು ದೀಪಾವಳಿ” ಆಚರಿಸೋಣ ಎಂಬ ಸಂಕಲ್ಪದೊಂದಿಗೆ ರಾಜ್ಯೋತ್ಸವ ಕಾರ್ಯಕ್ರಮವು ನೆರವೇರಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ರೆಮ್ಯ.ಬಿ.ವಿ., ಉಪ ಪ್ರಾಂಶುಪಾಲರಾದ ಪ್ರತಿಮಾ ಪೈ ಹಾಗೂ ಶಿಕ್ಷಕರು, ಶಾಲಾ ಸಿಬ್ಬಂದಿವರ್ಗ ಮತ್ತು ಪೋಷಕರು ಉಪಸ್ಥಿತರಿದ್ದರು.