ದೊಡ್ಡಬಳ್ಳಾಪುರ: ನಗರದ ಪ್ರತಿಷ್ಠಿತ ಶಾಲೆಗಳಾದ ನಳಂದ ಪ್ರೌಢಶಾಲೆ ಹಾಗೂ ಲಿಟ್ಲ್ ಏಂಜೆಲ್ಸ್ ಅನಂತ ಶಾಲೆಗಳ 35ನೇ ಶಾಲಾ ವಾರ್ಷಿಕೋತ್ಸವ (annual day) ಶನಿವಾರ ವಿಜೃಂಭಣೆಯಿಂದ ನೆರವೇರಿತು.

ಈ ವರ್ಷದ ಥೀಮ್ ಕರ್ನಾಟಕ ರಾಜ್ಯ ಪೊಲೀಸ್ ಆಗಿದ್ದು ಸಮಾಜದಲ್ಲಿ ಪೊಲೀಸ್ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ವಸ್ತು ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಿಳಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಡಿವೈಎಸ್ಪಿ ರವಿ ಅವರು ಮಾತನಾಡಿ, ಆಧುನಿಕ ಸಮಾಜದಲ್ಲಿ ಆಗುತ್ತಿರುವ ವಿವಿಧ ರೀತಿಯ ಅಪರಾಧಗಳಿಂದ ಜನರು ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದರು.

ನಗರ ಠಾಣೆ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಮಾತನಾಡಿ, ಪ್ರತಿ ವ್ಯಕ್ತಿಗೆ ಉತ್ತಮ ನಡವಳಿಕೆಯ ಪ್ರಾಮುಖ್ಯತೆಯನ್ನು ತಿಳಿಸಿದರು.

ಮೇಜರ್ ಎಸ್ ಮಹಾಬಲೇಶ್ವರ್ ಮಾತನಾಡಿ, ಜೀವನದಲ್ಲಿ ಶಿಸ್ತಿನ ಪ್ರಾಮುಖ್ಯತೆಯನ್ನು ವಿವರಿಸಿದರು.
ಆಧುನಿಕ ಸಮಾಜದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ರೂಡಿಸಿಕೊಳ್ಳಲೇ ಬೇಕಾದ ಮೌಲ್ಯಗಳ ಬಗ್ಗೆ ಮೋಟಿವೇಷನಲ್ ಸ್ಪೀಕರ್ ಡಾಕ್ಟರ್ ಪದ್ಮಾಕ್ಷಿ ಲೋಕೇಶ್ ವಿವರಿಸಿದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಪೊಲೀಸ್ ವ್ಯವಸ್ಥೆಯ ಪ್ರಾಮುಖ್ಯತೆ, ಭಾರತೀಯ ಸೇನೆಯ ಮೇಲೆ ಉರಿ ಆಕ್ರಮಣ, ತಂದೆ ತಾಯಿ ಅಜ್ಜ ಅಜ್ಜಿಯರ ಪ್ರಾಮುಖ್ಯತೆ, ರಾಮಾಯಣ, ಮಹಾಭಾರತ ಮೊಬೈಲ್ ಮತ್ತು ವೀಲಿಂಗ್ ಬಳಕೆಗಳಿಂದ ಆಗುವ ಅನಾಹುತಗಳು, ಪರಿಸರ ಮಾಲಿನ್ಯ, ವಿದ್ಯೆಯ ಪ್ರಾಮುಖ್ಯತೆ, ಯೋಗದ ಮಹತ್ವ, ವಿವೇಕಾನಂದ ನುಡಿ, ದೇಶಭಕ್ತಿ ,ವನ್ಯಜೀವಿ ಸಂರಕ್ಷಣೆ ಮುಂತಾದ ಅನೇಕ ಸಂದೇಶಗಳನ್ನು ನೀಡಿದರು.

ನಗರಸಭೆ ಮಾಜಿ ಉಪಾಧ್ಯಕ್ಷ ಡಿಎಸ್ ನಾರಾಯಣ ಶರ್ಮ, ಶಾಲಾ ಕಾರ್ಯದರ್ಶಿ ಅನುರಾಧ ಕೆ ಆರ್, ವಕೀಲರಾದ ಮಂಜುಳಾ ದೇವಿ, ವಿಜಯಮ್ಮ, ಶಾಲಾ ಮುಖ್ಯ ಶಿಕ್ಷಕರಾದ ಕೆಪಿ ಅನಿತಾ, ಪಿ ಸುನಿತಾ, ಶಿಕ್ಷಕ ಸಮೂಹ ಹಾಗೂ ಸಾವಿರಾರು ಪೋಷಕರು ಹಾಜರಿದ್ದರು.
