ಬಾಗಲಕೋಟೆ: ತೋಟದಲ್ಲಿರುವ ಮನೆಗಳಿಗೂ ಸಹ ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸಲು ಸರಕಾರದ ಮಟ್ಟದಲ್ಲಿ ಚರ್ಚಿಸಲಾಗುವುದೆಂದು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸುವ ಮೂಲಕ ತೋಟದ ಮನೆ ವಾಸಿಗಳಿಗೆ ಗುಡ್ ನ್ಯೂಸ್ (Good news) ನೀಡಿದ್ದಾರೆ.
ನೂತನ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಬುಧವಾರ ಜರುಗಿದ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಭಾಗದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಮುಳುಗಡೆಗೊಂಡ ಸಂತ್ರಸ್ತರು ತಮ್ಮ ತಮ್ಮ ತೋಟದಗಳಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಆ ಮನೆಗಳಿಗೂ ಸಹ ನಿರಂತರ ಜ್ಯೋತಿ ಮೂಲಕ ವಿದ್ಯುತ್ ಸಂಪರ್ಕ ಅಗತ್ಯವಿದ್ದು, ಈ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮವಹಿಸಲಾಗುವುದೆಂದು ತಿಳಿಸಿದರು.
ಈಗಾಗಲೇ ತೋಟದ ಮನೆಗಳಿಗೆ ನಿರಂತರ ವಿದ್ಯುತ್ ಒದಗಿಸಲು ಯಾವುದೇ ಯೋಜನೆಗಳು ಇರುವದಿಲ್ಲ. ಪ್ರಸ್ತುತ ಚಾಲನೆಯಲ್ಲಿ ಇಲ್ಲವಾದ್ದರಿಂದ ತೋಟದ ಮನೆಗಳಿಗೆ 7 ಗಂಟೆ ತ್ರೀ ಪೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ಉಳಿದಂತೆ ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆವರೆಗೆ ಸಿಂಗಲ್ ಫೇಸ್ ಓಪನ್ ಡೆಲ್ಟಾ ಮಾದರಿಯಲ್ಲಿ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ತಿಳಿಸಿದರು.
ಬೇಸಿಗೆಯಲ್ಲಿ ವಿದ್ಯುತ್ ಪೂರೈಸುವಲ್ಲಿ ಇಲಾಖೆ ಸನ್ನದ್ದ
ಕಳೆದ ಬೇಸಿಗೆಯಲ್ಲಿ ವಿದ್ಯುತ್ ಕೊರತೆ ಇದ್ದರೂ ಸಹ ಯಾವುದೇ ರೀತಿಯ ತೊಂದರೆಯಾಗದಂತೆ ಸಮಪರ್ಕವಾಗಿ ವಿದ್ಯುತ್ ಪೂರೈಸಲಾಗಿದ್ದು, ಬರುವ ಬೇಸಿಗೆಯಲ್ಲು ಕೂಡಾ ಗ್ರಾಹಕರಿಗೆ ವಿದ್ಯುತ್ ಪೂರೈಸುವಲ್ಲಿ ಇಲಾಖೆ ಸನ್ನದ್ದವಾಗಿದೆ.
ಯಾವುದೇ ಸರಕಾರಗಳು ಆಡಳಿತದಲ್ಲಿರಲಿ ವಿದ್ಯುತ್ ಸಂಬಂಧಿಸಿದಂತೆ ತಾಂತ್ರಿಕ ದೋಷಗಳು ಬರುತ್ತಿರುವದರಿಂದ ಕೆಲವು ಸಮಯಗಳು ಬೇಕಾಗುತ್ತವೆ. ಅಲ್ಲದೇ ಈ ಮೊದಲಿನ ವಿದ್ಯುತ್ ಪರಿಕರಗಳು ಬಹಳ ದಿನಗಳಿಂದ ಅಳವಡಿಸಿದ್ದು, ಮಳೆ, ಗಾಳಿ ಬಿಸಿಲಿಗೆ ತನ್ನ ಸಾಮಥ್ರ್ಯ ಕಳೆದುಕೊಂಡಿರುತ್ತವೆ ಎಂದರು.
ಹುನಗುಂದ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮರೋಳ-ರಾಮಥಾಳ ಏತ ನೀರಾವರಿ, ನಂದವಾಡಗಿ ಏತ ನೀರಾವರಿ ಇರುವದರಿಂದ ಈ ಭಾಗದಲ್ಲಿ 220 ಕೆವಿ ಸಬ್ ಸ್ಟೇಷನ್ ಅಗತ್ಯವಿದ್ದು, ಅನುಮೋದನೆ ದೊರೆತಿದ್ದರೂ ಕಾಮಗಾರಿ ಪ್ರಾರಂಭವಾಗಿಲ್ಲ. ಬೇಗನೆ ಪ್ರಾರಂಭಕ್ಕೆ ಕ್ರಮವಹಿಸುವಂತೆ ಸಚಿವರಲ್ಲಿ ಮನವಿ ಮಾಡಿಕೊಂಡರು.
ಇಳಕಲ್ಲ ನಗರದಲ್ಲಿ 6 ಎಕರೆ ಜಾಗೆಯಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಿಸಲಾಗುತ್ತಿದ್ದು, ಅದರ ಮೇಲೆ ಹೈ ಓಲ್ಟೇಜ್ ಲೈನ್ ಹಾಯ್ದು ಹೋಗಿದ್ದರಿಂದ ಅದರ ತೆರವುಗೊಳಿಸಬೇಕಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಸಭೆಗೆ ತಿಳಿಸಿದಾಗ, ಸಚಿವ ಜಾರ್ಜ ಪ್ರಾರಂಭವಾಗದ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಿಸುವದರ ಜೊತೆಗೆ ಇತರೆ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ ಬಾದಾಮಿಯು ಐತಿಹಾಸಿಕ ಪ್ರವಾಸಿ ತಾಣವಾಗಿದ್ದು, ಕೈಗಾರಿಕೆ, ವಿಶೇಷವಾಗಿ ಗುಳೇದಗುಡ್ಡ, ಕೆರೂರ ಭಾಗದಲ್ಲಿ ಫವರ್ ಲೂಮ್ ಹೆಚ್ಚಿಗೆ ಇದ್ದು, 220 ಕೆವಿ ಅಗತ್ಯವಿರುವದರಿಂದ ಅದಕ್ಕೆ ಅವಶ್ಯವಾಗಿರುವಷ್ಟು ಭೂಮಿಯನ್ನು ನೀಡುವುದಾಗಿ ತಿಳಿಸಿದರು.
ಈ ಭಾಗದ ಬೇಲೂರ, ನಂದಿಕೇಶ್ವರ 33/11 ಕೆವಿಯಿಂದ 110 ಕೆವಿ ಮೇಲ್ದರ್ಜೆಗೆ ಏರಿಸಬೇಕಾಗಿದೆ. ಅಲ್ಲದೇ ಬಾದಾಮಿ ಹಾಗೂ ಗುಳೇದಗುಡ್ಡ ಉಪ ವಿಭಾಗಗಳನ್ನು ಸೇರಿಸಿ ಬಾದಾಮಿಯಲ್ಲಿ ನೂತನ ವಿಭಾಗೀಯ ಕಚೇರಿ ಅಗತ್ಯವಾಗಿರುವ ಬಗ್ಗೆ ಸಭೆಗೆ ತಿಳಿಸಿದರು.
ಬೀಳಗಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ಬೀಳಗಿಯ 220 ಕೆವಿ ಹಾಗೂ 110 ಕೆವಿ ಸುನಗ ವಿದ್ಯುತ್ ವಿತರಣಾ ಕೇಂದ್ರಗಳ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಕೂಡಲೇ ಪೂರ್ಣಗೊಳಿಸಿ ಚಾಲನೆಗೊಳಿಸಲು ಕ್ರಮವಹಿಸುವಂತೆ ಸಚಿವರಲ್ಲಿ ಮನವಿ ಮಾಡಿಕೊಂಡರು.
ಸಿದ್ದಾಪೂರ, ಅರಕೇರಿ, ಚಿಕ್ಕಹಂಚಿನಾಳ ಮತ್ತು ಚಿಕ್ಕಾಲಗುಂಡಿಯಲ್ಲಿ ಹೊಸದಾಗಿ 110 ಕೆವಿ ವಿದ್ಯುತ್ ಕೇಂದ್ರ ಕೇಂದ್ರಗಳನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದರು. ಈ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸುವಂತೆ ಸಚಿವ ಜಾರ್ಜ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ ಎಚ್.ಟಿ. ಹಾಗೂ ಎಲ್ಟಿ ಮಾರ್ಗದ ವಾಹನ ಬದಲಾವಣೆ ಕಾಮಗಾರಿಗಳು ಮಂಜೂರಾಗಿದ್ದು, ಆದ್ಯತೆ ಮೇರೆಗೆ ಕಾಮಗಾರಿ ಕೈಗೆತ್ತಿಗೊಳ್ಳಬೇಕಿದೆ.
ಅಲ್ಲದೇ ಹೆಚ್ಚುವರಿಯಾಗಿ ಪರಿವರ್ತಕಗಳನ್ನು ಸಹ ಅಳವಡಿಸಲು ಬಾಕಿ ಇದ್ದು, ತುರ್ತಾಗಿ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಲು ಸಚಿವ ಜಾರ್ಜರವರಿಗೆ ತಿಳಿಸಿದರು. ಈ ಬಗ್ಗೆ ಆದ್ಯತೆ ಮೇರೆಗೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ, ಕೆಪಿಟಿಸಿಎಲ್ನ ವ್ಯವಸ್ಥಾಪಕ ಪಂಕಜಕುಮಾರ ಪಾಂಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.