Harithalekhani story: ಓರ್ವ ಭಿಕ್ಷುಕನಿದ್ದನು. ದೇವರ ಮೇಲೆ ಶ್ರದ್ಧೆ ಇದ್ದ ಕಾರಣ ಅವನು ದಿನಪೂರ್ತಿ ನಾಮಜಪ ಮಾಡುತ್ತಿದ್ದನು. ಭಗವಂತನು ಅವನ ನಾಮಜಪದಿಂದ ಪ್ರಸನ್ನನಾಗಿ ಒಂದು ದಿನ ಅವನೆದುರು ಪ್ರಕಟವಾದನು.
ಭಗವಂತನು ‘ನಾನು ನಿನ್ನ ನಾಮಜಪದಿಂದ ಬಹಳ ಪ್ರಸನ್ನನಾಗಿದ್ದೇನೆ, ನಿನಗೆ ಬೇಕಾದದ್ದನ್ನು ಕೇಳು’ ಎಂದು ಹೇಳಿದನು. ಆಗ ಭಿಕ್ಷುಕನು ದುರಾಸೆಯಿಂದ ಚಿನ್ನದ ನಾಣ್ಯಗಳನ್ನು ಕೇಳಿದನು. ಭಗವಂತನು ‘ಚಿನ್ನದ ನಾಣ್ಯಗಳನ್ನು ಯಾವ ಪಾತ್ರೆಯಲ್ಲಿ ತೆಗೆದುಕೊಳ್ಳುವೆ ?’ ಎಂದು ಕೇಳಿದಾಗ ಭಿಕ್ಷುಕನು ತನ್ನ ಅಂಗಿಯನ್ನು ಮುಂದೆಮಾಡಿದನು.
ಭಗವಂತನು ಚಿನ್ನದ ನಾಣ್ಯಗಳನ್ನು ಕೊಡುವ ಮೊದಲು ‘ಎಲ್ಲಿಯ ವರೆಗೆ ನೀನು ಚಿನ್ನದ ನಾಣ್ಯಗಳನ್ನು ಕೇಳುವುದು ಬಿಡುವುದಿಲ್ಲ ಅಲ್ಲಿಯ ವರೆಗೆ ನಾನು ನಿನ್ನ ಅಂಗಿಯಲ್ಲಿ ಚಿನ್ನದ ನಾಣ್ಯಗಳನ್ನು ಹಾಕುತ್ತಲೇ ಇರುವೆನು ಆದರೆ ಭೂಮಿಯ ಮೇಲೆ ಚಿನ್ನದ ನಾಣ್ಯಗಳು ಬೀಳಬಾರದು. ನೆಲದ ಮೇಲೆ ಬಿದ್ದರೆ ಈ ನಾಣ್ಯಗಳು ಮಣ್ಣಾಗುವವು’ ಎಂದು ಹೇಳಿದನು.
ಭಿಕ್ಷುಕನು ಒಪ್ಪಿಕೊಂಡ. ಭಗವಂತನು ಭಿಕ್ಷುಕನ ಅಂಗಿಯಲ್ಲಿ ಚಿನ್ನದ ನಾಣ್ಯಗಳನ್ನು ಹಾಕತೊಡಗಿದ. ಅಂಗಿಯು ತುಂಬುತ್ತ ಹೋಯಿತು ಹಾಗೂ ಭಿಕ್ಷುಕನ ದುರಾಸೆಯು ಹೆಚ್ಚುತ್ತ ಹೋಯಿತು. ಅವನು ‘ಸಾಕು’ ಎಂದು ಹೇಳಲಿಲ್ಲ, ದೇವರು ಕೊಡುವುದನ್ನು ನಿಲ್ಲಿಸಲಿಲ್ಲ.
ಕೊನೆಯಲ್ಲಿ ಚಿನ್ನದ ನಾಣ್ಯಗಳ ಭಾರವನ್ನು ಆ ಅಂಗಿಯು ತಡೆದುಕೊಳ್ಳಲಿಲ್ಲ, ಅಂಗಿಯು ಹರಿದು ಹೋಯಿತು. ಇದರಿಂದ ಎಲ್ಲ ನಾಣ್ಯಗಳು ನೆಲದ ಮೇಲೆ ಬಿದ್ದು ಮಣ್ಣಾದವು.
ಮನಸ್ಸಿನಲ್ಲಿ ದುರಾಸೆ ಇರುವುದರಿಂದ ಇಷ್ಟೊಂದು ನಾಣ್ಯಗಳು ದೊರೆತರೂ ಭಿಕ್ಷುಕನು ಬಡವನಾಗಿಯೇ ಉಳಿದನು.
ಕೃಪೆ: ಹಿಂದೂ ಜಾಗೃತಿ. (ಕೃಪೆ ಸಾಮಾಜಿಕ ಜಾಲತಾಣ)