Harithalekhani story: ಮಹಾಭಾರತ ಯುದ್ಧವನ್ನು ಮಹಾ ಯುದ್ಧವೆಂದರೆ ತಪ್ಪಾಗಲಾರದು. ಯಾಕೆಂದರೆ ಇದು ಒಂದೆರೆಡು ದಿನಗಳ ಕಾಲ ನಡೆದ ಯುದ್ಧವಲ್ಲ. ಬರೋಬ್ಬರಿ 18 ದಿನಗಳ ಕಾಲ ನಡೆದ ಯುದ್ಧ ಇದಾಗಿದೆ. ಮಹಾಭಾರತದ ಯುದ್ಧದ ಕುರಿತು ಇಂದಿಗೂ ಜನರಿಗೆ ತಿಳಿಯದ ರಹಸ್ಯಗಳು ಸಾಕಷ್ಟಿದೆ. ಅವುಗಳಲ್ಲಿ ಶ್ರೀಕೃಷ್ಣನ ಮರಣ ವೃತ್ತಾಂತವು ಒಂದು.
ಮಹಾಭಾರತದಲ್ಲಿ ಶ್ರೀಕೃಷ್ಣನ ಪಾತ್ರ ಏನೆಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ ಆದರೆ ಶ್ರೀಕೃಷ್ಣ ಮರಣ ಹೊಂದಿದ್ದಾದರೂ ಹೇಗೆನ್ನುವುದು ಬಹಳಷ್ಟು ಜನರಿಗೆ ತಿಳಿದಿಲ್ಲ.
ಮಹಾಭಾರತ ಯುದ್ಧದ ನಂತರ ಶ್ರೀಕೃಷ್ಣನು ಸಾವನ್ನಪ್ಪುತ್ತಾನೆ. ಕೃಷ್ಣನ ಸಾವಿಗೆ ಸಂಬಂಧಿಸಿದಂತೆ ನಮ್ಮ ಸಮಾಜದಲ್ಲಿ ಅನೇಕ ದಂತಕಥೆಗಳು ಮತ್ತು ಕಥೆಗಳಿವೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಕೃಷ್ಣನ ಸಾವು ಹೇಗಾಯಿತೆನ್ನುವುದರ ಕಥೆ ಇಲ್ಲಿದೆ.
ಮಹಾಭಾರತ ಯುದ್ಧದ ಸಮಯದಲ್ಲಿ ದುರ್ಯೋಧನನು ಹತನಾದಾಗ ಆತನ ತಾಯಿ ಗಾಂಧಾರಿಯು ತನ್ನ ಮಗನನ್ನು ಕಳೆದುಕೊಂಡು ಚಿಂತೆಗೆ ಒಳಗಾಗುತ್ತಾಳೆ. ದುರ್ಯೋಧನನ ಸಾವನ್ನು ನೆನೆದು ದುಃಖಿಸುತ್ತಿರುತ್ತಾಳೆ.
ಅದೇ ಸಮಯಕ್ಕೆ ಶ್ರೀಕೃಷ್ಣ ಹಾಗೂ ಪಾಂಡವರು ಗಾಂಧಾರಿಯಿದ್ದ ಅರಮನೆಗೆ ಬರುತ್ತಾರೆ. ಗಾಂಧಾರಿಯು ತನ್ನ ಪುತ್ರನ ಸಾವಿಗೆ ಕಾರಣರಾದ ಪಾಂಡವರನ್ನು ಕಂಡು ಕೋಪಗೊಳ್ಳುತ್ತಾಳೆ.
ಗಾಂಧಾರಿಯನ್ನು ಸಮಾಧಾನಿಸಲು ಕೃಷ್ಣ ಮುಂದಾದಾಗ ಗಾಂಧಾರಿಯು ಕೃಷ್ಣನನ್ನು ಕುರಿತು, ನನ್ನ 100 ಗಂಡುಮಕ್ಕಳು ಸಾಯುತ್ತಿರುವಾಗ ಭಗವಾನ್ ಶ್ರೀಕೃಷ್ಣನಾದ ನೀವಾದರೂ ಈ ಯುದ್ಧವನ್ನು ತಪ್ಪಿಸಬಹುದಿತ್ತಲ್ಲವೇ..? ಇದೇ ನಿಮ್ಮ ದೈವಿಕ ಗುಣವೇ..? ಎಂದು ಕೋಪದಿಂದ ಕೃಷ್ಣನನ್ನು ಕೇಳುತ್ತಾಳೆ.
ತನ್ನ 100 ಪುತ್ರರನ್ನು ಕಳೆದುಕೊಂಡು ಶೋಕದ ಸಮುದ್ರದಲ್ಲಿ ಮುಳುಗಿದ್ದ ಗಾಂಧಾರಿಯು ಕೋಪದಿಂದ ಶ್ರೀಕೃಷ್ಣನಿಗೆ ಇಂದಿನಿಂದ 36 ವರ್ಷದೊಳಗೆ ನೀವು ಸಾಯಬೇಕೆಂದು ಶಾಪವನ್ನು ನೀಡುತ್ತಾಳೆ.
ನಿಮ್ಮ ಪ್ರೀತಿಯ ದ್ವಾರಕ ನಗರವು ಪ್ರವಾಹಕ್ಕೆ ತುತ್ತಾಗಲಿ, ಯಾದವ ವಂಶದವರು ಅಥವಾ ಯದು ವಂಶದವರು ಹಾಗೂ ಕುರು ವಂಶದವರು ಹೊಡೆದಾಡಿಕೊಂಡೇ ಸಾಯಲಿ, ಒಬ್ಬರು ಇನ್ನೊಬ್ಬರನ್ನು ಕೊಲ್ಲುವುದರ ಮೂಲಕ ನಿಮ್ಮ ಎರಡೂ ವಂಶವು ನಿರ್ನಾಮವಾಗಲಿ ಎಂದು ಶಾಪವನ್ನು ನೀಡುತ್ತಾಳೆ.
ಯಾದವ ವಂಶದವರನ್ನು ಬೇರಾವ ವಂಶದವರಿಗೂ ಕೊಲ್ಲಲು ಸಾಧ್ಯವಾಗದ ಕಾರಣ ಪರಸ್ಪರ ಅವರೊಳಗೆ ಕಲಹಗಳುಂಟಾಗಿ ಒಬ್ಬರನ್ನೊಬ್ಬರು ಹೊಡೆದು ಸಾಯಿಸುವಂತಾಗಲಿ ಎಂದು ಆಕೆ ನುಡಿದಳು.
ಅ ಸಮಯದಲ್ಲಿ ಯಾದವ ಕುಲವು ಅಭಿವೃದ್ಧಿ ಹೊಂದುತ್ತಿರುವ ಕುಲವಾದರೂ ತಮ್ಮ ಅಧಿಕಾರದ ಮದದಿಂದ ಮಾದಕ ವ್ಯಸನಕ್ಕೆ ಒಳಗಾಗಿತ್ತು. ಸಣ್ಣ ಪುಟ್ಟ ವಿಷಯಕ್ಕೂ ಸಹೋದರರ ನಡುವೆ ಜಗಳವುಂಟಾಗಿ ಅದು ದೊಡ್ಡ ಯುದ್ಧಕ್ಕೆ ಕಾರಣವಾಯಿತು. ಯಾದವರು ಯುದ್ಧ ಭೂಮಿಯಲ್ಲಿ ಗಾಂಧಾರಿಯ ಶಾಪದಂತೆ ಪರಸ್ಪರ ಹೊಡೆದಾಡಿಕೊಂಡು ಸಾವನ್ನಪ್ಪಿದರು. ಹಾಗೂ ಇದರಲ್ಲಿ ಶ್ರೀಕೃಷ್ಣನ ಮಗ ಪ್ರದ್ಯುಮ್ನನು ಕೂಡ ಸಾಯುತ್ತಾನೆ.
ಯದು ವಂಶದ ವಿನಾಶವನ್ನಿರಿತ ಶ್ರೀಕೃಷ್ಣನು ಬೇಸರಗೊಂಡು ದ್ವಾರಕವನ್ನು ತೊರೆದು ಕಾಡಿಗೆ ಹೋಗಲು ನಿರ್ಧರಿಸುತ್ತಾನೆ. ಶ್ರೀಕೃಷ್ಣನು ಅರ್ಜುನನಿಗೆ ಯದುವಂಶದ ಜವಾಬ್ದಾರಿಯನ್ನು ನೀಡಿ ದ್ವಾರಕದಿಂದ ಹೊರಟು ಹೋಗುತ್ತಾನೆ. ನಂತರ ನೋಡುನೋಡುತ್ತಲೆ ಸಮುದ್ರದ ದೊಡ್ಡ ಅಲೆಯೊಂದು ಬಂದು ದ್ವಾರಕವನ್ನು ಅಪ್ಪಳಿಸಿ ಸಂಪೂರ್ಣ ನಗರವೇ ಜಲಾವೃತವಾಗುವಂತೆ ಮಾಡಿತು.
ಇತ್ತ ಶ್ರೀಕೃಷ್ಣನು ಕಾಡಿಗೆ ತೆರಳಿ ಅಲ್ಲಿ ಧ್ಯಾನಕ್ಕೆಂದು ಕುಳಿತುಕೊಳ್ಳುತ್ತಾನೆ. ಅದೇ ಸಮಯದಲ್ಲಿ ಜರಾ ಎನ್ನುವ ಬೇಟೆಗಾರನೋರ್ವನು ಕೃಷ್ಣನ ಪಾದವನ್ನು ಜಿಂಕೆಯೆಂದು ತಪ್ಪಾಗಿ ಭಾವಿಸಿ ಕೃಷ್ಣನನ್ನು ತನ್ನ ಬಾಣದಿಂದ ಹೊಡೆಯುತ್ತಾನೆ.
ಇದರಿಂದ ಕೃಷ್ಣನು ಧ್ಯಾನದಿಂದ ನೆಲಕ್ಕುರುಳಿದನು. ನಂತರ ಬೇಟೆಗಾರನು ಬಂದು ನೋಡಿದಾಗ ಅದು ಜಿಂಕೆಯಾಗಿರಲಿಲ್ಲ ಬದಲಾಗಿ ಭಗವಾನ್ ಶ್ರೀಕೃಷ್ಣನಾಗಿದ್ದನು. ತಕ್ಷಣವೇ ಆತ ಕೃಷ್ಣನಲ್ಲಿ ಕ್ಷಮೆಯನ್ನು ಯಾಚಿಸುತ್ತಾನೆ. ಆದರೆ ಕೃಷ್ಣ ಯಾವುದೇ ಬೇಸರವಿಲ್ಲದೆ ಆತನನ್ನು ಕ್ಷಮಿಸುತ್ತಾನೆ. ನಂತರ ಅದೇ ಸ್ಥಳದಲ್ಲಿ ಶ್ರೀಕೃಷ್ಣನ ಆತ್ಮವು ದೇಹವನ್ನು ತೊರೆದು ಸ್ವರ್ಗವನ್ನು ಸೇರುತ್ತದೆ.
ಕೃಪೆ: ಸಾಮಾಜಿಕ ಜಾಲತಾಣ.