ದೊಡ್ಡಬಳ್ಳಾಪುರ: ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸರ್ಕಾರ ಜಾರಿಗೆ ತಂದಿರುವ ‘ಬಿ’ಖಾತಾ ಆಂದೋಲನ ಕುರಿತು ಸಾರ್ವಜನಿಕರಿಂದ ಬಂದಿದ್ದ ದೂರುಗಳ ಹಿನ್ನೆಲೆಯಲ್ಲಿ, ನಗರಸಭೆ ಕಾರ್ಯಾಲಯದಲ್ಲಿ ಎರಡನೇ ದಿನವೂ ಕೂಡ ಲೋಕಾಯುಕ್ತ (Lokayukta) ಪೊಲೀಸರು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಸೋಮವಾರ ರಾತ್ರಿಯವರೆಗೂ ನಡೆದ ಪರಿಶೀಲನೆ ಬಳಿಕ ಇಂದು (ಮಂಗಳವಾರ) ಸುಮಾರು 11.30 ರ ವೇಳೆ ಬಂದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ನಗರಸಭೆಯಲ್ಲಿನ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರು ಇರುವಂತೆ ಲೋಕಾಯುಕ್ತ ಪೊಲೀಸರು ತಿಳಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಸಾರ್ವಜನಿಕರು ತಮ್ಮ ನಿವೇಷನ, ಮನೆಗಳಿಗೆ ‘ಎ’ ಅಥವಾ ‘ಬಿ’ ಖಾತೆ ಹೊಂದುವ ಬಹುದಿನಗಳ ಬೇಡಿಕೆಯಾಗಿದ್ದ ಖಾತೆ ಹೊಂದುವ ಕನಸಿಗೆ ಕೇವಲ ಐದು ದಾಖಲೆಗಳನ್ನು ಪಡೆದು ಖಾತೆ ಮಾಡಿಕೊಡುವ ನಿಯಮವನ್ನು ಮೂರು ತಿಂಗಳ ಮಾತ್ರ ಜಾರಿಗೆ ತಂದಿತ್ತು.
ಈ ನಿಯಮವನ್ನು ಆಗಸ್ಟ್ ತಿಂಗಳವರೆಗೂ ವಿಸ್ತರಿಸಲಾಗಿದೆ. ಆದರೆ ನಗರಸಭೆಯಲ್ಲಿನ ವಿಳಂಭ ಧೋರಣೆ ಹಾಗೂ ಭ್ರಷ್ಟಾಚಾರದ ಬಗ್ಗೆ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಪ್ರತಿಭಟನೆಗಳನ್ನು ನಡೆಸಿದ್ದರು.
ಈ ಎಲ್ಲದರ ಹಿನ್ನೆಯಲ್ಲಿ ಸೋಮವಾರ ಲೋಕಾಯುಕ್ತ ಪೊಲೀಸರು ದಿಢೀರ್ ಭೇಟಿ ನೀಡುವ ಮೂಲಕ ನಗರಸಭೆಯಲ್ಲಿನ ಕಂದಾಯ ವಿಭಾಗ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿನ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಡಿವೈಎಸ್ಪಿ ಗಿರೀಶ್ರೋಡ್ಕರ್,ಇನ್ಸ್ಪೆಕ್ಟರ್ ಉಮಾಮಹೇಶ್, ಬಾಳಪ್ಪ, ಪಿ.ಮಹೇಶ್, ನಂದಕುಮಾರ್, ರಮೇಶ್ ಹಾಗೂ ಸಿಬ್ಬಂದಿ ಇದ್ದಾರೆಂದು ತಿಳಿದುಬಂದಿದೆ.